ಹುಬ್ಬಳ್ಳಿ: ಮಳೆಗೆ ರೈತರ ಸಂತಸ

ಹುಬ್ಬಳ್ಳಿ: ನಗರದಲ್ಲಿ ಮಂಗಳವಾರ ಸಾಧಾರಣ ಮಳೆ ಸುರಿದಿದ್ದು, ರೈತರಲ್ಲಿ ಸಂತಸ ಉಂಟುಮಾಡಿತು. ವಾರದಿಂದ ಮೋಡ ಕವಿದ ವಾತಾವರಣವಿದ್ದರೂ ಮಳೆ ಸುರಿದಿರಲಿಲ್ಲ. ಇದರಿಂದಾಗಿ, ಬಿತ್ತನೆ ಕೆಲಸ ಮುಗಿಸಿದ್ದ ರೈತರು ಚಿಂತೆಗೀಡಾಗಿದ್ದರು. ಅದರ ಬೆನ್ನಲ್ಲೇ, ಇಂದು ಸುರಿದ ಮಳೆಯು ರೈತರ ಮೊಗದಲ್ಲಿ ಕೊಂಚ ಸಂಭ್ರಮ ತಂದಿತು.
ಕರಾವಳಿಯಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ, ನಗರದಲ್ಲಿ ಬೆಳಿಗ್ಗೆಯಿಂದಲೇ ಮೋಡ ಕವಿದ ವಾತಾವರಣವಿತ್ತು. ಮಧ್ಯಾಹ್ನದ ಹೊತ್ತಿಗೆ ಜಿಟಿಜಿಟಿಯಾಗಿ ಆರಂಭಗೊಂಡ ಮಳೆಯು ನಂತರ ಕೆಲ ಹೊತ್ತು ಜೋರಾಗಿ ಸುರಿಯಿತು.
'ಹೊಲದಲ್ಲಿ ಜೋಳವನ್ನು ಬಿತ್ತನೆ ಮಾಡಿದ್ದೆವು. ಆದರೆ, ವಾರವಾದರೂ ಬಾರದ ಮಳೆಯಿಂದಾಗಿ ಚಿಂತೆಯಾಗಿತ್ತು. ಎಲ್ಲಿ ಬೀಜಗಳು ಒಣಗಿ ಹೋಗುತ್ತವೊ ಎಂಬ ಆತಂಕದಲ್ಲಿದ್ದೆವು. ಇದೀಗ ಮಳೆ ಬಂದಿದ್ದು ಸಮಾಧಾನ ತಂದಿದೆ' ಎಂದು ಉಣಕಲ್ನ ರೈತ ಸಿದ್ಧಯ್ಯ ಹಿರೇಮಠ ಸಂತಸ ವ್ಯಕ್ತಪಡಿಸಿದರು.
ಇದನ್ನೂ ಓದಿ–ರಾಜ್ಯದಲ್ಲಿ ಭಾರಿ ಮಳೆ ಸಾಧ್ಯತೆ: ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೆ ಸೂಚನೆ
ಪಾದಚಾರಿಗಳು ಮತ್ತು ದ್ವಿಚಕ್ರ ವಾಹನ ಸವಾರರು ಮಳೆಯಲ್ಲೇ ನೆನೆದುಕೊಂಡು ಹೋಗುತ್ತಿದ್ದ ದೃಶ್ಯ ಅಲ್ಲಲ್ಲಿ ಕಂಡುಬಂತು. ಕೆಲವೆಡೆ ತಗ್ಗು ಪ್ರದೇಶಗಳಲ್ಲಿ ನೀರು ನಿಂತಿದ್ದರಿಂದ ಜನ ತೊಂದರೆ ಅನುಭವಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.