ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾಂಧೀಜಿ ಚರಕ ಅಶೋಕ ಚಕ್ರವಾದ ಬಗೆ...

Last Updated 14 ಆಗಸ್ಟ್ 2019, 14:04 IST
ಅಕ್ಷರ ಗಾತ್ರ

ಮೋಹನ್‌ದಾಸ್ ಕರಮಚಂದ ಗಾಂಧಿ ರಾಷ್ಟ್ರೀಯ ಚಳವಳಿಯ ನಾಯಕರಾಗಿ ಮಾನ್ಯತೆ ಪಡೆದಾಗ, 1916ರ ಸುಮಾರಿಗೆ ಆಂಧ್ರದ ಮುಸಲಿಪಟ್ಟಣಂನ ಪಿಂಗ್ಲೆ ವೆಂಕಯ್ಯ, ಗಾಂಧೀಜಿಯವರಲ್ಲಿ ತಮ್ಮ ಕಾರ್ಯದ ಬಗ್ಗೆ ಉತ್ಸಾಹ ಮೂಡಿಸಲು ಯತ್ನಿಸಿದರು ಹಾಗೂ ಒಂದು ಧ್ವಜ ವಿನ್ಯಾಸ ಸೂಚಿಸಿದರು. ಆದರೆ ಅದು ಗಾಂಧೀಜಿಯವರಿಗೆ ಇಷ್ಟವಾಗಲಿಲ್ಲ. ಅವರು ರಾಷ್ಟ್ರಧ್ವಜ ಹೊಂದುವ ಅಭಿಪ್ರಾಯಕ್ಕೆ ವಿರುದ್ಧವಾಗಿರಲಿಲ್ಲ. ಆದರೆ ಅವರಿಗೆ ವೆಂಕಯ್ಯನವರ ಧ್ವಜ ವಿನ್ಯಾಸದಲ್ಲಿ ಸಂಪೂರ್ಣ ದೇಶದ ಅಂತರಾತ್ಮ ಕಲಕುವ ವೈಶಿಷ್ಟ್ಯವೇನೂ ಕಾಣಲಿಲ್ಲ.

ಒಮ್ಮೆ ಗುರುದಾಸ್‌ಪುರ್‌ನ ಲಾಲಾಹನ್ಸ್ ರಾಜ್‌ಸೋಂಧಿ ಗಾಂಧೀಜಿಯವರ ಜೊತೆ ಮಾತನಾಡುತ್ತಿದ್ದಾಗ, ನಮ್ಮ ಸ್ವಾವಲಂಬನೆಯ ಪ್ರತೀಕವಾಗಿ, ಭಾರತದ ರಾಷ್ಟ್ರಧ್ವಜದಲ್ಲಿ ಚರಕ ಇರಬೇಕೆಂದು ಸಲಹೆ ಮಾಡಿದರು. ಈ ಪ್ರಸ್ತಾವ ಗಾಂಧೀಜಿಯವರಿಗೆ ಬಹಳ ಇಷ್ಟವಾಯಿತು. ಗಾಂಧೀಜಿ 1921ರ ಏಪ್ರಿಲ್‌ನಲ್ಲಿ ವಿಜಯವಾಡದಲ್ಲಿ ನಡೆದ ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಸಭೆಗೆ ವೆಂಕಯ್ಯ ಅವರನ್ನು ಕರೆಸಿ, ಹಿಂದೂ ಧರ್ಮವನ್ನು ಸಾಂಕೇತಿಸುವ ಕೇಸರಿ ಬಣ್ಣದಲ್ಲಿ ಚರಕವನ್ನು ಚಿತ್ರಿಸುವಂತೆ ಹಾಗೂ ಇಸ್ಲಾಂ ಧರ್ಮವನ್ನು ಸಾಂಕೇತಿಸುವ ಹಸಿರು ಬಣ್ಣದ ಪಟ್ಟಿಯನ್ನೊಳಗೊಂಡ ರಾಷ್ಟ್ರೀಯ ಧ್ವಜ ರಚಿಸಬೇಕೆಂದು ತಿಳಿಸಿದರು.

ಗಾಂಧೀಜಿಯವರ ಮುಂದೆ ಮೂರು ತಾಸಿನೊಳಗೆ ವೆಂಕಯ್ಯ ಒಂದು ಧ್ವಜ ತಯಾರಿಸಿ ಇಟ್ಟರು. ಅದರಲ್ಲಿ ಕೇಸರಿ ಮತ್ತು ಹಸಿರಿನ ಎರಡು ಪಟ್ಟಿಗಳ ಮೇಲೆ ಸಮಾನವಾಗಿ ಮೂಡುವಂತೆ ದೊಡ್ಡ ಚರಕವಿತ್ತು. ಆದರೆ ಅದು ಗಾಂಧೀಜಿಯವರ ಕೈ ಸೇರುವಾಗ ಸ್ವಲ್ಪ ತಡವಾದುದರಿಂದ, ಅದನ್ನು ಕಾಂಗ್ರೆಸ್ ಸಮಿತಿಯ ಅನುಮೋದನೆಗಾಗಿ ಸಲ್ಲಿಸಲಾಗಲಿಲ್ಲ. ಆದರೆ ಅದರಿಂದ ಒಳ್ಳೆಯದೇ ಆಯಿತು. ದ್ವಿವರ್ಣದ ಧ್ವಜದಲ್ಲಿ ಇತರೆ ಅಲ್ಪಸಂಖ್ಯಾತರನ್ನು ಪ್ರತಿನಿಧಿಸುವ ಸಂಕೇತ ಇಲ್ಲದಿರುವುದು ಸಮಸ್ಯೆಗೀಡು ಮಾಡುತ್ತಿತ್ತು.

ಧ್ವಜವನ್ನು ಪಕ್ಷ ಪರಿಶೀಲಿಸಿದ ನಂತರ ಅದರಲ್ಲಿ ಹಿಂದೂ, ಮುಸ್ಲಿಂ ಮತ್ತು ಇತರ ಧರ್ಮಗಳನ್ನು ಪ್ರತಿನಿಧಿಸುವ ಮೂರು ವರ್ಣಗಳಿರಬೇಕೆಂದು ಗಾಂಧೀಜಿ ಕಂಡುಕೊಂಡರು. ಆದ್ದರಿಂದ ಧ್ವಜಕ್ಕಾಗಿ ಅವರು ಬಿಳಿ, ಹಸಿರು ಮತ್ತು ಕೇಸರಿ ಬಣ್ಣಗಳನ್ನು ಪರಿಗಣಿಸಿದ್ದರು.

ಭಾರತದ ಧ್ವಜದ ಹಿಂದಿನ ತತ್ವವನ್ನು ಮತ್ತು ಅದರ ವಿನ್ಯಾಸವನ್ನು ಕಂಡುಕೊಂಡ ಮೇಲೆ, ಗಾಂಧೀಜಿಯವರು ಮತ್ತೆ ವೆಂಕಯ್ಯ ಅವರನ್ನು ಕರೆಸಿ, ಮುಂಚಿನ ಧ್ವಜದ ವಿನ್ಯಾಸದಲ್ಲಿ ಬಿಳಿ ಪಟ್ಟಿಯನ್ನು ಸೇರಿಸಿ ಧ್ವಜ ನಿರ್ಮಿಸುವಂತೆ ತಿಳಿಸಿದರು. ಧ್ವಜದಲ್ಲಿ ಮೇಲಿನಿಂದ ಅನುಕ್ರಮವಾಗಿ ಬಿಳಿ, ಹಸಿರು ಮತ್ತು ಕೇಸರಿ ಬಣ್ಣಗಳಿದ್ದು ಮೂರು ಪಟ್ಟೆಗಳ ಮೇಲೂ ಬರುವಂತೆ ಮಧ್ಯದಲ್ಲಿ ಚರಕವಿರಬೇಕೆಂದು ಅವರು ನಿರ್ದೇಶನವಿತ್ತರು. ಗಾಂಧೀಜಿಯವರ ಇಚ್ಛೆಯಂತೆಯೇ ವೆಂಕಯ್ಯನವರು ಒಟ್ಟು 30 ದೇಶಗಳ ರಾಷ್ಟ್ರಧ್ವಜಗಳನ್ನು ಐದು ವರ್ಷಗಳ ಕಾಲ ಅಭ್ಯಸಿಸಿ, ಕೊನೆಗೆ ತ್ಯಾಗ, ಶಾಂತಿ ಸಮೃದ್ಧಿಯ ಸಂಕೇತವಾದ ಕೇಸರಿ, ಬಿಳಿ, ಹಸಿರಿನ ತ್ರಿವರ್ಣ ಧ್ವಜವನ್ನು ವಿನ್ಯಾಸಗೊಳಿಸಿದರು. ನಡುವೆ ಪೂರ್ಣಪ್ರಮಾಣದ ಚರಕ. ಈ ರೀತಿ ಅಖಿಲ ಭಾರತ ಕಾಂಗ್ರೆಸ್‌ನ ಪ್ರಥಮ ಧ್ವಜ ರೂಪುಗೊಂಡಿತು.

ಧ್ವಜದಲ್ಲಿ ಎಲ್ಲ ವರ್ಗಗಳ ಪ್ರಾತಿನಿಧ್ಯ ತೋರಿದ ಗಾಂಧೀಜಿ, ವಿವಿಧ ಧರ್ಮಗಳ ನಡುವೆ ವಿಭಜನೆ ಉಂಟು ಮಾಡಲಿಲ್ಲ. ಮೊದಲ ಬಾರಿಗೆ ಹಿಂದೂಗಳು, ಸಿಖ್ಖರು, ಕ್ರಿಶ್ಚಿಯನ್ನರು, ಮುಸ್ಲಿಮರು ಮತ್ತು ಪಾರ್ಸಿಗಳೆನ್ನದೆ ಪ್ರಾಣತ್ಯಾಗ ಮಾಡಲು ಪ್ರೇರೇಪಿಸುವಂತಹ ಧ್ವಜವನ್ನು ಅವರು ನೀಡಿದರು.

ಗಾಂಧೀಜಿಯವರ ಧ್ವಜವನ್ನು ಅಖಿಲ ಭಾರತ ಕಾಂಗ್ರೆಸ್ ಸಮಿತಿಯಲ್ಲಿ ಅಂಗೀಕರಿಸದಿದ್ದರೂ ಗಾಂಧೀಜಿಯವರು ಅದನ್ನು ಅನುಮೋದಿಸಿದ್ದರಿಂದ ಅದು ಎಲ್ಲರಿಗೂ ಒಪ್ಪಿಗೆಯಾಯಿತು. ಅದನ್ನು ಕಾಂಗ್ರೆಸ್‌ನ ಎಲ್ಲ ಸಮಾರಂಭಗಳಲ್ಲಿ ಹಾರಿಸಲಾಗುತ್ತಿತ್ತು. ಸಮಯ ಕಳೆದಂತೆ ಅದು ರಾಷ್ಟ್ರೀಯ ಧ್ವಜವೆಂದು ಪ್ರಸಿದ್ಧವಾಯಿತು. 1921ರಲ್ಲಿ ಅಹ್ಮದಾಬಾದಿನಲ್ಲಿ ನಡೆದ ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಸಭೆಯಲ್ಲಿ ಮೊದಲ ಬಾರಿಗೆ ದೊಡ್ಡ ಗಾತ್ರದ ಈ ಚರಕ ಧ್ವಜದ ಆರೋಹಣ ನಡೆಯಿತು. ಅನಂತರ ಅದು, ಬೇರೆ ಯಾವುದೇ ಅಧಿಕೃತ ನಿರ್ಣಯವಿಲ್ಲದೇ ಭಾರತದ ರಾಷ್ಟ್ರೀಯ ಧ್ವಜವೆಂದು ಮಾನ್ಯತೆ ಪಡೆಯಿತು. 1929ರ ಡಿಸೆಂಬರ್ 31ರಂದು ರಾವಿ ನದಿ ತಟದಲ್ಲಿ ನಡೆದ ಲಾಹೋರ್ ಕಾಂಗ್ರೆಸ್ ಅಧಿವೇಶನದಲ್ಲಿ ಮಧ್ಯರಾತ್ರಿ ಈ ಧ್ವಜದ ಆರೋಹಣ ನಡೆಯಿತು. ಈ ಅಧಿವೇಶನ ಪೂರ್ಣ ಸ್ವರಾಜ್ಯ ಕಾಂಗ್ರೆಸ್‌ನ ಗುರಿಯೆಂದು ಸಾರಿತು. 1930ರ ಜನವರಿ 26ರಂದು ಇದೇ ಧ್ವಜದ ನೆರಳಿನಲ್ಲಿ ಸಾವಿರಗಟ್ಟಲೇ ಭಾರತೀಯರು ಪ್ರತಿಜ್ಞೆ ತೊಟ್ಟರು. ಅಸಹಕಾರ ಚಳವಳಿಯೊಂದಿಗೆ ಚರಕ ಧ್ವಜ ನಿಧಾನವಾಗಿ ಜನಪ್ರಿಯವಾಯಿತು.

1947ರ ಆಗಸ್ಟ್‌ 14ರ ಮಧ್ಯರಾತ್ರಿ ಬ್ರಿಟಿಷ್ ಧ್ವಜ ಕೆಳಗಿಳಿಯುತ್ತಲೇ ಕೆಂಪುಕೋಟೆಯಲ್ಲಿ ಮೇಲೆರಿದ್ದು ಭಾರತದ ತ್ರಿವರ್ಣ ಧ್ವಜ. ಈ ಧ್ವಜ ಸ್ವಾತಂತ್ರ್ಯಕ್ಕೆ ಮುನ್ನ ಭಾರತೀಯ ರಾಷ್ಟ್ರೀಯ ಚಳವಳಿಯ ಅರ್ಥಾತ್ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಸಿನ ಧ್ವಜದ ಪರಿಷ್ಕೃತ ರೂಪ. ಧ್ವಜದಲ್ಲಿ ಆದ ಬಹುಮುಖ್ಯ ಪರಿಷ್ಕರಣೆ ಅಂದರೆ ಅದರ ಮಧ್ಯಭಾಗದಲ್ಲಿ ಅಶೋಕಚಕ್ರವನ್ನು ಸೇರಿಸಿದ್ದು. ಮೂಲ ಧ್ವಜದಲ್ಲಿ ಇದ್ದದ್ದು ಚರಕದ ಚಿತ್ರ. ಮಹಾತ್ಮ ಗಾಂಧಿ ಇಡೀ ರಾಷ್ಟ್ರೀಯ ಚಳವಳಿಯಲ್ಲಿ ಬಳಸಿದ ಬಹುಮುಖ್ಯ ದೇಶಿಯ ಸಂಕೇತವಾಗಿದ್ದು, ಚರಕವನ್ನು ರಾಷ್ಟ್ರಧ್ವಜದಲ್ಲಿ ಮುಂದುವರಿಸುವುದಕ್ಕೆ ಸಂವಿಧಾನ ಸಭೆಯಲ್ಲಿ ಹಲವಾರು ಸದಸ್ಯರು ಆಕ್ಷೇಪ ವ್ಯಕ್ತಪಡಿಸುತ್ತಾರೆ. ಅದಕ್ಕೆ ಒಂದು ಕಾರಣ-ರಾಜಕೀಯ ಪಕ್ಷದ ಧ್ವಜವನ್ನು ಇದ್ದಕ್ಕಿದ್ದ ಹಾಗೆ ರಾಷ್ಟ್ರ ಧ್ವಜವನ್ನಾಗಿ ಒಪ್ಪಿಕೊಳ್ಳುವುದು ಸರಿಯಲ್ಲ ಎನ್ನುವುದು. ಅದಕ್ಕಿಂತಲೂ ಮುಖ್ಯವಾಗಿ ಅಂದಿನ ಕಾಂಗ್ರೆಸ್ಸಿಗರೂ ಸೇರಿದಂತೆ ಹಲವರಿಗೆ ಚರಕ ಪ್ರಾಚೀನತೆಯ, ಅವೈಜ್ಞಾನಿಕತೆಯ, ಸ್ತ್ರೀಯರ ಕೆಲಸದ ಸಂಕೇತವಾಗಿ ಕಂಡುಬಂದಿತು. ಸ್ವಾತಂತ್ರ್ಯಕ್ಕೆ ಮುಹೂರ್ತ ನಿರ್ಣಯವಾದ ವೇಳೆ ಮುನ್ನೆಲೆಗೆ ಬಂದ ವೈಜ್ಞಾನಿಕತೆಯ ಪ್ರಶ್ನೆ ಚರಕದ ವಿಷಯವಾಗಿ ಪ್ರಶ್ನೆಯೆತ್ತಿದ್ದು ಕುತೂಹಲದ ವಿಷಯ.

ಕೊನೆಗೆ ಸಾರಾನಾಥದಲ್ಲಿ ಅಶೋಕ ಸ್ತಂಭದಲ್ಲಿ ಕೆತ್ತಲಾದ ಚಕ್ರವರ್ತಿ ಅಶೋಕನ ಧರ್ಮಚಕ್ರವನ್ನೇ ಧ್ವಜದಲ್ಲಿ ಸೇರಿಸುವುದು ಎಂದು ಸಂವಿಧಾನ ಸಭೆ 1947ರ ಜುಲೈ 22ರಂದು ನಿರ್ಣಯಿಸುತ್ತದೆ.

ಧ್ವಜದ ಮೇಲಿರುವ ಚರಕದ ಎರಡು ತುದಿಗಳು, ಇಬ್ಬದಿಗಳಲ್ಲಿ ಬೇರೆ ಬೇರೆಯಾಗಿ ಕಾಣುತ್ತವೆ. ಇದು ಒಂದು ಸಮಸ್ಯೆಯಾಗಿತ್ತು. ಆದ್ದರಿಂದ ಬಹಳಷ್ಟು ಗಹನವಾಗಿ ಪರಿಶೀಲಿಸಿದ ನಂತರ, ಜನಸಾಮಾನ್ಯನ ಭಾವನೆಗಳನ್ನು ಬಿಂಬಿಸುವ ಈ ಲಾಂಛನದಲ್ಲಿ ಬದಲಾವಣೆ ಮಾಡಬೇಕಾಯಿತು. ಅದರ ಚಕ್ರ ಮುಖ್ಯ ಭಾಗವನ್ನು ಉಳಿಸಿಕೊಂಡು, ಇತರ ಭಾಗವನ್ನು ತ್ಯಜಿಸಬೇಕಾಯಿತು. ಈ ರೀತಿ ಚರಕದ ಪರಂಪರೆಯನ್ನು ಚಕ್ರವನ್ನು ಉಳಿಸಿಕೊಳ್ಳಲಾಯಿತು.

ಈ ವಿಷಯ ಗಾಂಧೀಜಿ ಗಮನಕ್ಕೆ ಬರುತ್ತಲೇ ಅವರಿಗೆ ಅಸಮಾಧಾನ ಉಂಟಾಗುತ್ತದೆ. ‘ಚರಕವಿಲ್ಲದ ಧ್ವಜಕ್ಕೆ ನಾನು ವಂದಿಸಲಾರೆ ಎನ್ನುತ್ತಾರೆ. ಚರಕ ಅವರ ಪಾಲಿಗೆ ಬರೀ ನೂಲುವ ಸಾಧನವಾಗಿರಲಿಲ್ಲ. ಅವರ ಕಲ್ಪನೆಯ ಭಾರತದ ಅಸದೃಶ ಸಂಕೇತವಾಗಿತ್ತು. ಗಾಂಧೀಜಿಯನ್ನು ಸಮಾಧಾನಪಡಿಸಲು ನೆಹರೂ ಯತ್ನಿಸುತ್ತಾರೆ. ಚರಕದ ಚಕ್ರವೂ ಚಕ್ರ, ಅಶೋಕಚಕ್ರವೂ ಚಕ್ರ. ಈ ಚಕ್ರವನ್ನು ಚರಕದ ಚಕ್ರ ಅಂತಲೇ ತಾವು ಭಾವಿಸಬೇಕು ಎಂದು ಗಾಂಧೀಜಿಯವರಲ್ಲಿ ಕೇಳಿಕೊಳ್ಳುತ್ತಾರೆ. ಇದನ್ನು ಮನಸ್ಸಿಲ್ಲದೆ ಗಾಂಧೀಜಿ ಒಪ್ಪಿಕೊಳ್ಳುತ್ತಾರೆ. ಧ್ವಜದ ವಿಷಯದಲ್ಲಿ ವಾದಿಸುವ ಸಮಯ ಅದಾಗಿರಲಿಲ್ಲ. ವಿಭಜನೆಯ ಕಾರ್ಮೋಡ ದೇಶವನ್ನು ಮತ್ತು ಅವರ ಮನಸ್ಸನ್ನು ಆವರಿಸಿತ್ತು. ಎಲ್ಲೆಡೆ ರಕ್ತ ಹರಿಯುತ್ತಿತ್ತು.

ಮುಂದಿನ ದಿನಗಳಲ್ಲಿ ಧ್ವಜ ವಿನ್ಯಾಸದ ಕುರಿತಾದ ತನ್ನ ಬಿಗಿನಿಲುವನ್ನು ಗಾಂಧೀಜಿ ಸಡಿಲಿಸುತ್ತಾರೆ. 1947ರ ಆಗಸ್ಟ್‌ 3ರಂದು ‘ಹರಿಜನ ಬಂಧು ಪತ್ರಿಕೆಯಲ್ಲಿ ಬರೆದ ಲೇಖನದಲ್ಲಿ ಗಾಂಧೀಜಿ ಧ್ವಜದ ಕುರಿತು ಹೀಗೆ ಬರೆಯುತ್ತಾರೆ– ‘ಧ್ವಜದ ನಡುವಣ ಆ ಚಕ್ರವನ್ನು ನೋಡಿ ಕೆಲವರಾದರೂ ಅಶೋಕ ಚಕ್ರವರ್ತಿ ಅಧಿಕಾರ ತ್ಯಜಿಸಿ ಶಾಂತಿದೂತನಾದದ್ದನ್ನು ನೆನಪಿಸಿಕೊಳ್ಳಬಹುದು. ಕೆಲವರಾದರೂ ಅಶೋಕನ ದಯಾಮಯಿ ಹೃದಯವನ್ನು ನೆನಪಿಸಿಕೊಳ್ಳಬಹುದು. ಆ ಚಕ್ರದಲ್ಲಿ ಚರಕವನ್ನು ಕಾಣುತ್ತಿದ್ದರೆ ಚರಕದ ಮಹಿಮೆ ಇನ್ನೂ ಒಂದು ತೂಕ ಹೆಚ್ಚಿಗೆ ಅಂತ ನಾನು ಭಾವಿಸುತ್ತೇನೆ’.

ಆದರೆ ಧ್ವಜಕ್ಕೆ ವಂದಿಸುವ ವಿಷಯದಲ್ಲಿ ಗಾಂಧೀಜಿ ಬಯಸಿದಂತೆಯೇ ಆಯಿತು. ಕೆಂಪುಕೋಟೆಯಲ್ಲಿ ಮೇಲೇರಿದ ತ್ರಿವರ್ಣ ಪತಾಕೆಗೆ ಧ್ವಜವಂದನೆ ಮಾಡುವ ಪ್ರಮೇಯ ಅವರಿಗೆ ಬರಲಿಲ್ಲ. ಆ ರಾತ್ರಿ ಅವರು ಕಲ್ಕತ್ತದಲ್ಲಿದ್ದರು. ‘ಇಡೀ ಜಗತ್ತು ಮಲಗಿ ನಿದ್ರಿಸುತ್ತಿರುವ ಈ ಹೊತ್ತು ಭಾರತದ ಜೀವಸ್ವಾತಂತ್ರ್ಯ ಎಚ್ಚೆತ್ತುಕೊಳ್ಳುತ್ತಿದೆ ಎಂದು ಧ್ವಜಾರೋಹಣ ಸಂದರ್ಭದಲ್ಲಿ ಮಾಡಿದ ಐತಿಹಾಸಿಕ ಭಾಷಣದಲ್ಲಿ ನೆಹರೂ ಭಾವಾವೇಶದಿಂದ ಹೇಳುತ್ತಾರೆ. ಆದರೆ ಅಷ್ಟೊತ್ತಿಗೆ ಜಗತ್ತು ಮಲಗಿರುವುದಿಲ್ಲ. ನಿಜಕ್ಕೂ ಆ ಹೊತ್ತಿಗೆ ಮಲಗಿ ನಿದ್ರಿಸುತ್ತಿದ್ದದ್ದು ಭಾರತ. ಸ್ವಾತಂತ್ರಕ್ಕಾಗಿ ಹೋರಾಡಿ ದಣಿದ ದೇಶ ಬಾಂಧವರು ಲಕ್ಷ ಲಕ್ಷ ಹಳ್ಳಿಗಳಲ್ಲಿ ಗಾಢ ನಿದ್ದೆಯಲ್ಲಿದ್ದಾಗ ನಾಯಕರ ಗಣ ದೆಹಲಿಯಲ್ಲಿ ಸ್ವಾತಂತ್ರ್ಯ ಆಚರಿಸಿತು. ದೇಶದ ಜನರೊಂದಿಗೆ ಗಾಂಧೀಜಿ ಕೂಡ ಮಲಗಿ ನಿದ್ರಿಸುತ್ತಿದ್ದರು.

ಆ ಚಾರಿತ್ರಿಕ ರಾತ್ರಿ ಗಾಂಧೀಜಿ ಮಾಮೂಲಿಗಿಂತ ಒಂದು ತಾಸು ಮುಂಚಿತವಾಗಿ ಅಂದರೆ ರಾತ್ರಿ ಸುಮಾರು ಎರಡು ಗಂಟೆಗೆ ಎದ್ದೇಳುತ್ತಾರೆ. ಅದೇನು ಕಾಕತಾಳಿಯವೋ ಸ್ವಾತಂತ್ರ್ಯದ ಅದೇ ದಿನ ಗಾಂಧೀಜಿ ಪಾಲಿಗೆ ತನ್ನ ಪರಮಾಪ್ತರೊಬ್ಬರನ್ನು ಕಳೆದುಕೊಂಡ ದಿನವೂ ಆಗಿತ್ತು. ಬಹುಕಾಲ ಗಾಂಧಿಯವರ ಕಾರ್ಯದರ್ಶಿ ಮತ್ತು ಹತ್ತಿರದ ಬೌದ್ಧಿಕ ಒಡನಾಡಿಯಾಗಿದ್ದ ಮಹಾದೇವ ದೇಸಾಯಿ ಅವರು ಐದು ವರ್ಷಗಳ ಹಿಂದೆ ತೀರಿಕೊಂಡಿದ್ದರು. ಆ ರಾತ್ರಿ ಎದ್ದು ಗಾಂಧೀಯವರು ಅಗಲಿದ ಆಪ್ತ ಜೀವಕ್ಕಾಗಿ ಪ್ರಾರ್ಥಿಸುತ್ತಾರೆ. ಎಂದಿನಂತೆ ಚರಕದಿಂದ ನೂಲುತ್ತಾರೆ. ಗೀತೆ ಪಠಿಸುತ್ತಾರೆ. ಆದರೆ ಬೆಳಿಗ್ಗೆ ಅವರು ಯಾವ ಧ್ವಜಾರೋಹಣ ಕಾರ್ಯಕ್ರಮದಲ್ಲಿಯೂ ಭಾಗವಹಿಸುವುದಿಲ್ಲ. ಅಂತೂ ಅಶೋಕಚಕ್ರ ಧ್ವಜದ ಮಧ್ಯೆಯೇ ಉಳಿದಿದೆ. ಅಶೋಕ ಚಕ್ರವರ್ತಿಯ ಪಾಲಿಗೆ ಅದು ಹಿಂಸೆಯಿಂದ ಅಹಿಂಸೆಯ ಕಡೆಗೆ ತಿರುಗಿದ ಚಕ್ರ. ಭಾರತದ ಪಾಲಿಗೆ ಆ ಚಕ್ರ ಅಹಿಂಸೆಯಿಂದ ಹಿಂಸೆಯತ್ತ ಚಲಿಸುತ್ತಿದೆ ಎಂಬಂತೆಯೂ ಭಾಸವಾಯಿತು. ದೇಶ ವಿಭಜನೆ ಹಿಂಸೆಗೆ ದಾರಿ ಮಾಡಿಕೊಟ್ಟಿದ್ದು ಕಾಲಾನಂತರದಲ್ಲಿ ಶಾಂತಿ ನೆಲೆಯುರಿ ದೇಶಭಕ್ತರೆಲ್ಲಾ ಮತ್ತೆ ಅಶೋಕ ಚಕ್ರದ ಶಾಂತಿ ಸಂದೇಶದತ್ತವೇ ಗಮನಹರಿಸಿ ದೇಶ ಕಟ್ಟಿದರು.

(ಲೇಖಕರು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಗಾಂಧಿ ಅಧ್ಯಯನ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಾರೆ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT