ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಕಿ ವಿಮಾ ಹಣ: ವಾರದೊಳಗೆ ರೈತರ ಖಾತೆಗೆ

Last Updated 1 ಫೆಬ್ರುವರಿ 2018, 9:25 IST
ಅಕ್ಷರ ಗಾತ್ರ

ಹಾವೇರಿ: ರಾಷ್ಟ್ರೀಯ ಕೃಷಿ ವಿಮಾ ಯೋಜನೆ (ಮುಂಗಾರು) 2015–16ನೇ ಸಾಲಿನ ₹6.94 ಕೋಟಿ ಹಾಗೂ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ (ಮುಂಗಾರು) 2016–17ನೇ ಸಾಲಿನ ₹54.38 ಕೋಟಿ ಬಾಕಿ ಹಣವನ್ನು ವಾರದೊಳಗೆ ರೈತರ ಖಾತೆಗೆ ಜಮಾ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ರುದ್ರಪ್ಪ ಲಮಾಣಿ ಭರವಸೆ ನೀಡಿದರು.

2015–16ನೇ ಸಾಲಿನಲ್ಲಿ ಕುರುಬಗೊಂಡದ ಬ್ಯಾಂಕ್‌ನಲ್ಲಿ ಉಂಟಾದ ಗೊಂದಲದಿಂದಾಗಿ ಅಲ್ಲಿನ ಮತ್ತು ಸುತ್ತಲ 2,110 ರೈತರ ವಿಮಾ ಮೊತ್ತದ ಜಮಾ ಬಾಕಿ ಉಳಿದಿತ್ತು. ಈ ಬಗ್ಗೆ ಬ್ಯಾಂಕರ್ಸ್ ಜೊತೆ ಮಾತುಕತೆ ನಡೆಸಲಾಗಿದೆ ಎಂದು ಬುಧವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು

2016–17ನೇ ಸಾಲಿನಲ್ಲಿ ಹತ್ತಿ ಮತ್ತು ಕೆಂಪು ಮೆಣಸಿನಕಾಯಿ ಬೆಳೆಗೆ ₹43.84 ಕೋಟಿ ಹಾಗೂ ಅಕ್ಕಿ ಮತ್ತು ಭತ್ತದ ನಡುವಿನ ವ್ಯತ್ಯಾಸದ ₹10.54 ಕೋಟಿ ಸೇರಿದಂತೆ ₹54.38 ಕೋಟಿ ಬಾಕಿ ಉಳಿದಿತ್ತು. ಇತರ ಜಿಲ್ಲೆಗಳಲ್ಲಿ ಇಳುವರಿ ನಿರ್ಧರಿಸುವಲ್ಲಿ ಉಂಟಾದ ಗೊಂದಲದಿಂದಾಗಿ ನಮ್ಮ ಜಿಲ್ಲೆಯ ವಿಮಾ ಮೊತ್ತವನ್ನೂ ತಡೆ ಹಿಡಿದಿದ್ದರು. ಈ ಕುರಿತು ಸಂಬಂಧಿತ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿ, ಬಗೆಹರಿಸಲಾಗಿದೆ ಎಂದರು.

ಸಂಸ್ಕೃತಿ ಇಲ್ಲದ ಬಿಜೆಪಿ: ಬೀಜ ಮತ್ತು ಗೊಬ್ಬರ ಕೇಳಿದ ರೈತರ ಮೇಲೆ 10 ಜೂನ್ 2008ರಲ್ಲಿ ಬಿಜೆಪಿ ಸರ್ಕಾರ ಗುಂಡು ಹಾಕಿತ್ತು. ಈಗ ಸಗಣಿ ಎರಚುತ್ತಿದ್ದಾರೆ. ಇವೆಲ್ಲ ಬಿಜೆಪಿ ಸಂಸ್ಕೃತಿಯನ್ನು ಬಿಂಬಿಸುತ್ತಿವೆ ಎಂದು ಸಚಿವರು ವಾಗ್ದಾಳಿ ನಡೆಸಿದರು.

ಮಾಜಿ ಸಚಿವರು ಹಾಗೂ ಹಾಲಿ ಶಾಸಕರುಗಳ ನೇತೃತ್ವದಲ್ಲಿ ಸರ್ಕಾರದ ಆಸ್ತಿಗಳಿಗೆ, ಅಧಿಕಾರಿಗಳಿಗೆ ಸೆಗಣಿ ಎರಚಿದ್ದಾರೆ. ಅಧಿಕಾರಿಗಳ ಜೊತೆ ಅಮಾನವೀಯವಾಗಿ ವರ್ತಿಸಿದ್ದಾರೆ. ಇದೇನಾ ಇವರ ಸಂಸ್ಕೃತಿ? ಎಂದು ಪ್ರಶ್ನಿಸಿದರು.

ಗೋವಿನ ಜೋಳ: ಈ ಹಿಂದೆ ಕೇಂದ್ರದಲ್ಲಿದ್ದ ಯುಪಿಎ ಸರ್ಕಾರವು ಗೋವಿನ ಜೋಳ ಖರೀದಿ ಮಾಡಿ  ಶ್ರೀಲಂಕಾ, ಮಲೇಷ್ಯಾ ಮತ್ತಿತರ ರಾಷ್ಟ್ರಗಳಿಗೆ ಮಾರಾಟ ಮಾಡಿತ್ತು. ಆದರೆ, ಪ್ರಸ್ತುತ ಕೇಂದ್ರದ ಬಿಜೆಪಿ ಸರ್ಕಾರವು, ‘ಖರೀದಿಸಿದ ಗೋವಿನ ಜೋಳವನ್ನು ಪಡಿತರದಲ್ಲಿ ವಿತರಿಸಬೇಕು’ ಎಂಬ ಷರತ್ತನ್ನು ವಿಧಿಸಿದೆ. ಇದರಿಂದಾಗಿ ಖರೀದಿ ಕೇಂದ್ರ ತೆರೆಯಲು ರಾಜ್ಯ ಸರ್ಕಾರಕ್ಕೆ ಸಮಸ್ಯೆ ಉಂಟಾಗಿದೆ ಎಂದು ದೂರಿದರು.

ಅಮಿತ್ ಶಾ ಸೂಚನೆ: ‘ಕರ್ನಾಟಕದಲ್ಲಿ ಗಲಭೆ ನಡೆಸಿ’ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಸೂಚನೆ ನೀಡಿದ್ದಾರೆ. ಹೀಗಾಗಿ ಕೋಮು ಗಲಭೆ, ರೈತರೊಂದಿಗ ಚಲ್ಲಾಟ, ಅಧಿಕಾರಿ– ಜನಪ್ರತಿನಿಧಿಗಳ ಜೊತೆ ಅಮಾನವೀಯ ವರ್ತನೆ ಮೂಲಕ ಬಿಜೆಪಿಯು ಗಲಾಟೆಗೆ ಯತ್ನಿಸುತ್ತಲೇ ಇದೆ. ನಮ್ಮ ಜಿಲ್ಲೆಯ ಬಿಜೆಪಿ ನಾಯಕರು ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಸಗಣಿ ಎರಚಿದ್ದಾರೆ ಎಂದು ಮಾಜಿ ಶಾಸಕ ಬಿ.ಸಿ. ಪಾಟೀಲ್‌ ಲೇವಡಿ ಮಾಡಿದರು.

ಇವರೆಲ್ಲ, ಕಿತ್ತೂರ ರಾಣಿ ಚನ್ನಮ್ಮ ಕಾಲದಲ್ಲಿ ಫಿರಂಗಿಗೆ ಸಗಣಿ ತುಂಬಿಸಿಟ್ಟ ಮಲ್ಲಪ್ಪ ಶೆಟ್ಟಿಯ ವಂಶಜರು. ಈ ಘಟನೆಯಿಂದ ರೈತರು, ಅಧಿಕಾರಿಗಳು, ಉದ್ಯಮಿಗಳು ಸೇರಿದಂತೆ ಎಲ್ಲ ಮಾನವಂತರಿಗೆ ಸಿಟ್ಟು ಬಂದಿದ್ದು, ಇವರೇ ಬಿಜೆಪಿ ಮುಕ್ತ ಮಾಡುತ್ತಾರೆ ಎಂದು ಟೀಕಿಸಿದರು.

ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಕೊಟ್ರೇಶಪ್ಪ ಬಸೇಗಣ್ಣಿ, ಶಾಸಕ ಬಸವರಾಜ ಶಿವಣ್ಣನವರ, ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅಜ್ಜಂಪೀರ್ ಖಾದ್ರಿ, ಹಾವೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಂಜೀವಕುಮಾರ್ ನೀರಲಗಿ, ಕಾಂಗ್ರೆಸ್ ಮುಖಂಡ ಎಸ್.ಎಫ್‌.ಎನ್. ಗಾಜೀಗೌಡ್ರ, ಜಯಶ್ರೀ ಶಿವಪುರ ಇದ್ದರು.

****

* 2015–16ನೇ ಸಾಲಿನ ಮುಂಗಾರು ರಾಷ್ಟ್ರೀಯ ಕೃಷಿ ವಿಮಾ ಯೋಜನೆ 

ನೋಂದಣಿ ಮಾಡಿದ ರೈತರು– 1,02,936
ಮಂಜೂರಾದ ವಿಮಾ ಮೊತ್ತ– ₹123.59 ಕೋಟಿ
ಮಂಜೂರಾದ ಒಟ್ಟು ರೈತರು–82,175
ವಿಮೆ ಪಡೆದ ರೈತರು– 80,065
ರೈತರ ಖಾತೆಗೆ ಜಮಾಗೊಂಡ ಮೊತ್ತ– ₹116.65

* 2016–17 ನೇ ಸಾಲಿನ ಮುಂಗಾರು ಕರ್ನಾಟಕ ರೈತರ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ
ನೋಂದಣಿ ಮಾಡಿದ ರೈತರು– 94,939
ಮಂಜೂರಾದ ವಿಮಾ ಮೊತ್ತ– ₹193.13 ಕೋಟಿ
ವಿಮಾ ಮೊತ್ತ ಪಡೆದ ರೈತರು– 59,256
ಈ ತನಕ ರೈತರು ಪಡೆದ ಒಟ್ಟು ಮೊತ್ತ– ₹138.75 ಕೋಟಿ

ವಿಮಾ ಕಂಪನಿಗಳಿಂದ ಗೊಂದಲ

ವಿಮಾ ಕಂಪನಿಗಳು ಮತ್ತು ಬ್ಯಾಂಕ್‌ಗಳ ಆಡಳಿತದ ಸೂಚನೆಗಳ ಗೊಂದಲದಿಂದಾಗಿ ಪ್ರತಿ ಬಾರಿಯೂ ರೈತರಿಗೆ ಹಣ ಜಮಾ ಆಗುವಲ್ಲಿ ವಿಳಂಬವಾಗುತ್ತಿದೆ. ಈ ಬಗ್ಗೆ ರಾಜ್ಯಮಟ್ಟದಲ್ಲಿ ಸಭೆ ನಡೆಸಿ, ಸೂಕ್ತ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿಗಳ ಬಳಿ ಚರ್ಚೆ ನಡೆಸಲಾಗುವುದು ಎಂದು ಸಚಿವ ರುದ್ರಪ್ಪ ಲಮಾಣಿ ತಿಳಿಸಿದರು.

* * 

ವಿಮಾ ಕಂಪನಿಗಳಿಂದ ಗೊಂದಲ

ವಿಮಾ ಕಂಪನಿಗಳು ಮತ್ತು ಬ್ಯಾಂಕ್‌ಗಳ ಆಡಳಿತದ ಸೂಚನೆಗಳ ಗೊಂದಲದಿಂದಾಗಿ ಪ್ರತಿ ಬಾರಿಯೂ ರೈತರಿಗೆ ಹಣ ಜಮಾ ಆಗುವಲ್ಲಿ ವಿಳಂಬವಾಗುತ್ತಿದೆ. ಈ ಬಗ್ಗೆ ರಾಜ್ಯಮಟ್ಟದಲ್ಲಿ ಸಭೆ ನಡೆಸಿ, ಸೂಕ್ತ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿಗಳ ಬಳಿ ಚರ್ಚೆ ನಡೆಸಲಾಗುವುದು ಎಂದು ಸಚಿವ ರುದ್ರಪ್ಪ ಲಮಾಣಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT