ಹುಬ್ಬಳ್ಳಿ: ‘ಕೈಗಾರಿಕೆಗಳ ಅಭಿವೃದ್ಧಿಗಾಗಿ ಪ್ರತಿ ಜಿಲ್ಲೆಯಲ್ಲಿ ಸುಮಾರು ಒಂದು ಸಾವಿರ ಎಕರೆಯ ಕೈಗಾರಿಕಾ ಭೂ ಬ್ಯಾಂಕ್ ಸ್ಥಾಪಿಸುವ ಉದ್ದೇಶವಿದೆ’ ಎಂದು ಕೈಗಾರಿಕಾ ಸಚಿವ ಮುರುಗೇಶ ನಿರಾಣಿ ಹೇಳಿದರು.
ನಗರದ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯಲ್ಲಿ ಬುಧವಾರ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ‘ವಿಶೇಷವಾಗಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಉದ್ಯಮ ಸ್ಥಾಪನೆಯಾಗಿ, ಶೇ 25ರಷ್ಟು ರಿಯಾಯಿತಿಯಲ್ಲಿ ಎರಡು ಎಕರೆ ಭೂಮಿ ನೀಡಲಾಗುವುದು’ ಎಂದರು.
‘ರಿಯಾಯಿತಿಯಲ್ಲಿ ಪಡೆದ ಭೂಮಿಯನ್ನು ಅವರು 10 ವರ್ಷಗಳವರೆಗೆ ಮಾರಾಟ ಮಾಡುವಂತಿಲ್ಲ. ಬಳಿಕ ಮಾರಾಟ ಮಾಡಬೇಕಾದರೆ, ಅದೇ ಸಮುದಾಯದವರಿಗೆ ಉದ್ಯಮ ಸ್ಥಾಪನೆ ಉದ್ದೇಶಕ್ಕಾಗಿಯೇ ಮಾರಾಟ ಮಾಡಬೇಕಾಗುತ್ತದೆ’ ಎಂದು ತಿಳಿಸಿದರು.
‘ನವೋದ್ಯಮಿಗಳಿಗೂ ಉದ್ಯಮ ಸ್ಥಾಪನೆಗೆ ಎರಡು ಎಕರೆ ಭೂಮಿಯನ್ನು ಶೇ 25 ರಿಯಾಯಿತಿಯೊಂದಿಗೆ ನೀಡಲಾಗುವುದು. ಶೇ 25ರಷ್ಟು ಮೊತ್ತವನ್ನು ಎಂಟು ಕಂತುಗಳಲ್ಲಿ ಪಾವತಿಸುವ ಅನುಕೂಲ ಕಲ್ಪಿಸಲಾಗುವುದು’ ಎಂದು ಭರವಸೆ ನೀಡಿದರು.
ಮನವಿ:ಹುಬ್ಬಳ್ಳಿ-ಧಾರವಾಡ ವಿವಿಧೊದ್ದೇಶ ವಸ್ತು ಪ್ರದರ್ಶನ ಕೇಂದ್ರದ ಕಾಮಗಾರಿಗೆ ಹೆಚ್ಚಿನ ಅನುದಾನ ಬಿಡುಗಡೆ, ನವೆಂಬರ್ನಲ್ಲಿ ಆಯೋಜನೆಗೊಳ್ಳಲಿರುವ 2022–23 ಸಾಲಿನ ಇನ್ಕಾಮೆಕ್ಸ್ ಕೈಗಾರಿಕಾ ವಸ್ತು ಪ್ರದರ್ಶನದ ಮೇಳಕ್ಕೆ ₹5 ಕೋಟಿ ಅನುದಾನ, ಉತ್ತರ ಕರ್ನಾಟಕದಲ್ಲಿ ಉದ್ಯಮಗಳ ಸ್ಥಾಪನೆಗೆ ಕ್ರಮ ಹಾಗೂ ಕೇಂದ್ರ ಪ್ಲಾಸ್ಟಿಕ್ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಸಂಸ್ಥೆಯ ಸ್ಥಾಪನೆಗೆ ಭೂಮಿ ಮಂಜೂರು ಮಾಡುವಂತೆ ಸಚಿವರಿಗೆ ಮನವಿ ಸಲ್ಲಿಸಲಾಯಿತು.
ಸಂಸ್ಥೆಯ ಅಧ್ಯಕ್ಷ ವಿನಯ ಜವಳಿ, ಉಪಾಧ್ಯಕ್ಷರಾದ ಎಸ್.ಪಿ. ಸಂಶಿಮಠ, ಸಂದೀಪ ಬಿಡಸಾರಿಯಾ, ಬಿ.ಎಸ್. ಸತೀಶ, ಗೌರವ ಕಾರ್ಯದರ್ಶಿಗಳಾದ ಪ್ರವೀಣ ಅಗಡಿ, ಶಂಕರ ಕೋಳಿವಾಡ, ಮಾಜಿ ಅಧ್ಯಕ್ಷರಾದ ರಮೇಶ ಪಾಟೀಲ ಹಾಗೂ ಇತರ ಪದಾಧಿಕಾರಿಗಳು ಇದ್ದರು.