ಹುಬ್ಬಳ್ಳಿ: ಶಿಕ್ಷಣತಜ್ಞ, ವೈಚಾರಿಕ ಮನೋಭಾವನೆಯ ಎಚ್.ನರಸಿಂಹಯ್ಯನವರು ಈ ನಾಡಿನ ಆಸ್ತಿಯಾಗಿದ್ದಾರೆ ಎಂದು ಅವರ ಒಡನಾಡಿ ಬಿ.ಎಸ್.ಸೊಪ್ಪಿನ ಹೇಳಿದರು.
ನಗರದ ಎಸ್.ಜೆ.ಎಂ.ವಿ.ಎಸ್. ಕಲಾ ಹಾಗೂ ವಾಣಿಜ್ಯ ಮಹಿಳಾ ಮಹಾವಿದ್ಯಾಲಯದ ಕನ್ನಡ ವಿಭಾಗ ಹಮ್ಮಿಕೊಂಡಿದ್ದ ನರಸಿಂಹಯ್ಯನವರ ಜನ್ಮಶತಮಾನೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ ‘ವೈಜ್ಞಾನಿಕವಾಗಿ ಆಲೋಚಿಸುತ್ತಿದ್ದ ಅವರು ಸದಾ ಮೂಢನಂಬಿಕೆಗಳನ್ನು ವಿರೋಧಿಸುತ್ತಿದ್ದರು. ಜನಸಾಮಾನ್ಯರಲ್ಲಿ ವಿಜ್ಞಾನದ ತಿಳಿವಳಿಕೆ ಮೂಡಬೇಕು ಎನ್ನುತ್ತಿದ್ದರು’ ಎಂದರು.
ವಿಶೇಷ ಉಪನ್ಯಾಸ ನೀಡಿದ ಕನ್ನಡ ವಿಭಾಗದ ಪ್ರಾಧ್ಯಾಪಕ ಡಾ. ಗುರುರಾಜ ನವಲಗುಂದ ‘ಎಚ್ಎಸ್ಎನ್ ಕಡು ಬಡತನದ ಹಿನ್ನೆಲೆಯಿಂದ ಬಂದಿದ್ದರೂ, ಹಣವಿಲ್ಲದ ಕಾರಣಕ್ಕೆ ಬೆಂಗಳೂರಿಗೆ ನಡೆದುಕೊಂಡು ಬಂದು ನ್ಯಾಷನಲ್ ಹೈಸ್ಕೂಲ್ ಸೇರಿದರು. ಜಾತಿ, ರಾಜಕೀಯ ಮತ್ತು ಹಣದ ಬೆಂಬಲವಿಲ್ಲದೇ ದೊಡ್ಡ ಸ್ಥಾನಕ್ಕೆ ಏರಿದರು. ನ್ಯಾಷನಲ್ ಹೈಸ್ಕೂಲ್ನಲ್ಲಿ ಆ ಸಂಸ್ಥೆಯ ಅಧ್ಯಕ್ಷ ಸ್ಥಾನಕ್ಕೆ ಏರಿದ್ದು ದೊಡ್ಡ ಸಾಧನೆ’ ಎಂದು ಬಣ್ಣಿಸಿದರು.
ಕಾಲೇಜಿನ ಪ್ರಾಚಾರ್ಯ ಡಾ. ಲಿಂಗರಾಜ ಅಂಗಡಿ, ಡಾ. ಸಿಸಿಲಿಯಾ ಡಿಕ್ರೋಜ್, ಡಾ. ತಾಯಣ್ಣ, ಡಾ. ಮಹದೇವ ಹರಿಜನ, ಪ್ರೊ. ಶಿವಕುಮಾರ ಪ್ರಭಯ್ಯನವರಮಠ, ಕನ್ನಡ ವಿಭಾಗದ ಡಾ. ಸುಪ್ರಿಯಾ ಮಲಶೆಟ್ಟಿ ಇದ್ದರು.