ಅಳ್ನಾವರ: ಗ್ರಾಮದೇವಿ ಜಾತ್ರಾ ಮಹೋತ್ಸವ ಅಂಗವಾಗಿ ಸ್ಥಳೀಯ ರಾಜು ಮಾರುತಿ ಪೆಜೋಳ್ಳಿ ಆಯೋಜಿಸಿದ್ದ ಅಂತರರಾಷ್ಟ್ರೀಯ ಮಟ್ಟದ ಹೊನಲು ಬೆಳಕಿನ ಕುಸ್ತಿ ಟೂರ್ನಿಯಲ್ಲಿ ಪುರುಷರ ವಿಭಾಗದಲ್ಲಿ ಇರಾನ್ ದೇಶದ ಮಿರ್ಜಾ ಖಾನ್ ಹಾಗೂ ಮಹಿಳೆಯರ ವಿಭಾಗದಲ್ಲಿ ಗಾಯತ್ರಿ ಸುತಾರ ಚಾಂಪಿಯನ್ ಆಗಿ ಹೊರಹೊಮ್ಮಿದರು.
ತಡ ರಾತ್ರಿ ನಡೆದ ಆಕರ್ಷಕ ಅಂತಿಮ ಹಣಾಹಣಿಯಲ್ಲಿ 124 ಕೆ.ಜಿ ತೂಕದ ವಿಶ್ವ ಚಾಂಪಿಯನ್ ಮಿರ್ಜಾ ಖಾನ್ ಅವರು ಉಪಮಹಾರಾಷ್ಟ್ರ ಕೇಸರಿ ವಿಜೇತ ಮಾವಳಿ ಕೊಕಾಟೆ ಅವರನ್ನು ನಾಲ್ಕೇ ನಿಮಿಷದಲ್ಲಿ ಚಿತ್ ಮಾಡಿ ವಿಜಯದ ನಗೆ ಬೀರಿದರು. ಮಹಿಳೆಯರ ವಿಭಾಗದಲ್ಲಿ ಕರ್ನಾಟಕ ಕೇಸರಿ ವಿಜೇತೆ, ಯಡೋಗಾ ಗ್ರಾಮದ ಗಾಯತ್ರಿ ಸುತಾರ ಅವರು ಇರಾನ್ ದೇಶದ ಮುಬಿನಾ ಅವರನ್ನು ಸೋಲಿಸಿ ಚಾಂಪಿಯನ್ ಆದರು. ಇಬ್ಬರಿಗೂ ಬೆಳ್ಳಿ ಗದೆ ಹಾಗೂ ನಗದು ಬಹುಮಾನ ನೀಡಲಾಯಿತು.
ಹಣಾಹಣಿ: ಪುರುಷರ ವಿಭಾಗ –ಡಬಲ್ ಮಹಾರಾಷ್ಟ್ರ ಕೇಸರಿ ವಿಜೇತ ಶಿವರಾಜ ಅವರು ಪಂಜಾಬನ ಭೋಲಾ ಅವರನ್ನು ಸೋಲಿಸಿದರು. ಭಾರತ ಕೇಸರಿ ಜಸ್ಸಾ ಪಟ್ಟಿ ಅವರು ಹರಿಯಾಣದ ಮಂಜಿತ್ ಖತ್ರಿ ಅವರನ್ನು ಪರಾಭವಗೊಳಿಸಿದರು. ಉಪ ಮಹಾರಾಷ್ಟ್ರ ಕೇಸರಿ ಕಿರಣ ಭಗತ ಅವರು ಹರಿಯಾಣದ ಮುನಿಫ್ ಅವರನ್ನು ಹಾಗೂ ಹರಿಯಾಣದ ಪವನಕುಮಾರ ಅವರು ಮೈಸೂರ ಕಂಠೀರವ ಸುನಿಲ್ ಪರತಡೆ ಅವರನ್ನು ಸೋಲಿಸಿದರು. ಡಬಲ್ ಕರ್ನಾಟಕ ಕೇಸರಿ ವಿಜೇತ ಕಾರ್ತಿಕ ಕಾಟೆ ಹಾಗೂ ಹರಿಯಾಣದ ಮಂಜಿತ್ ಮಾಲಾ ಅವರ ಕುಸ್ತಿ ಸಮಬಲವಾಯಿತು.
ಮಹಿಳಾ ವಿಭಾಗ: ಮಹಾರಾಷ್ಟ್ರದ ಸೋನಾಲಿ ಅವರು ಲೀನಾ ಸಿದ್ದಿ ಅವರನ್ನು ಸೋಲಿಸಿದರು. ಮಹಾರಾಷ್ಟ್ರದ ಕೀರ್ತಿ ಗುಡಲೇಕರ ಅವರು ಕರ್ನಾಟಕದ ಶಾಲಿನಿ ಸಿದ್ದಿ ಅವರನ್ನು ಪರಾಭವಗೊಳಿಸಿದರು.
ಗಮನ ಸೆಳೆದ ಕುಸ್ತಿ: ಕುಳ್ಳ ವ್ಯಕ್ತಿತ್ವದ ದೇವತಾಪ ಅವರ ಮಿಂಚಿನ ನಡೆಯಿಂದ ಪ್ರೇಕ್ಷಕರ ಮನ ಗೆದ್ದರು. ದೇವತಾಪಾ ಅವರು ರೋಚಕ ಸ್ಪರ್ಧೆಯಲ್ಲಿ ಹರಿಯಾಣದ ಸೋನು ಅವರನ್ನು ಸೋಲಿಸಿ ವಿಜೇಯಿಯಾದರು.
ಅಳ್ನಾವರ ಕುಸ್ತಿ ಚಾಂಪಿಯನ್ ಆಗಿ ಇರಾನ ದೇಶದ ಮಿರ್ಜಾನ್ ಶೇಖ ಅವರಿಗೆ ಆಯೋಜಕ್ ರಾಜು ಪೆಜೋಳ್ಳಿ ಬೆಳ್ಳಿ ಗದೆ ನಗದು ಬಹುಮಾನ ನೀಡಿದರು.
250ಕ್ಕೂ ಹೆಚ್ಚು ಕುಸ್ತಿ ಪಟುಗಳು ಭಾಗಿ ಕುಸ್ತಿ ಹಬ್ಬ ಕಣ್ತುಂಬಿಕೊಂಡ ಮಹಿಳಾ ಪ್ರೇಕ್ಷಕರು