ಹುಬ್ಬಳ್ಳಿ: ನಿಜಗುಣ ಶಿವಯೋಗಿಗಳ 75ನೇ ವಾರ್ಷಿಕ ಜಯಂತಿ ಉತ್ಸವ ಹಾಗೂ ನಿಜಗುಣರ ಪ್ರಶಸ್ತಿ ಪ್ರದಾನ ಸಮಾರಂಭದ ಕಾರ್ಯಕ್ರಮ ನಗರದ ಮಂಗಳವಾರ ಪೇಟದಲ್ಲಿರುವ ರುದ್ರಾಕ್ಷಿ ಮಠದಲ್ಲಿ ನ.28ರಿಂದ ಡಿ.6ರವರೆಗೆ ಬೈಲಹೊಂಗಲದ ರುದ್ರಾಕ್ಷಿ ಮಠದ ಬಸವಲಿಂಗ ಸ್ವಾಮೀಜಿ ಅವರ ನೇತೃತ್ವದಲ್ಲಿ ನಡೆಯಲಿದೆ ಎಂದು ಜಯಂತಿ ಉತ್ಸವ ಸ್ವಾಗತ ಸಮಿತಿ ಕಾರ್ಯಾಧ್ಯಕ್ಷ ಮಲ್ಲಿಕಾರ್ಜುನ ಸಾವಕಾರ ಹೇಳಿದರು.
ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನ.28ರಂದು ಸಂಜೆ 6ಕ್ಕೆ ಉದ್ಘಾಟನಾ ಕಾರ್ಯಕ್ರಮವು ಶಿರಹಟ್ಟಿ– ಬಾಲೇಹೊಸೂರು ಫಕೀರೇಶ್ವರ ಸಂಸ್ಥಾನ ಮಠದ ದಿಂಗಾಲೇಶ್ವರ ಸ್ವಾಮೀಜಿ ಸಾನ್ನಿಧ್ಯದಲ್ಲಿ, ದೊಡ್ಡವಾಡದ ಹಿರೇಮಠದ ಜಡೆ ಸಿದ್ಧೇಶ್ವರ ಶಿವಾಚಾರ್ಯರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಡಿ.2ರಂದು ಉಚಿತ ಆರೋಗ್ಯ ತಪಾಸಣೆ ಹಾಗೂ ರಕ್ತದಾನ ಶಿಬಿರ, ಡಿ.6ರಂದು ಲಿಂಗದೀಕ್ಷೆ ಹಾಗೂ ರುದ್ರಾಕ್ಷಿಧಾರಣೆ ಹಾಗೂ ಪ್ರತಿದಿನ ಸ್ವಾಮೀಜಿಯವರ ತುಲಾಭಾರ ನಡೆಯಲಿದೆ’ ಎಂದು ಹೇಳಿದರು.
ನಿಜಗುಣ ಪ್ರಶಸ್ತಿಯನ್ನು ಮರೇಗುದ್ದಿಯ ಅಡವಿಸಿದ್ಧೇಶ್ವರ ಮಠದ ನಿರುಪಾದ ಸ್ವಾಮೀಜಿ ಅವರಿಗೆ ಹಾಗೂ ರುದ್ರಾಕ್ಷಿ ಮಠದ ಪ್ರಶಸ್ತಿಯನ್ನು ಬೆಳಗಾವಿ ಜಿಲ್ಲೆಯ ಅಥಣಿಯ ಮೋಟಗಿ ಮಠದ ಪ್ರಭು ಚನ್ನಬಸವ ಸ್ವಾಮೀಜಿ ಅವರಿಗೆ ಡಿ.6ರಂದು ಪ್ರದಾನ ಮಾಡಲಾಗುವುದು. ಅಂದು ಸಂಜೆ 6ಕ್ಕೆ ಬಸವಲಿಂಗ ಶಿವಯೋಗಿಗಳ ಕರ್ತೃಗದ್ದುಗೆಗೆ ದೀಪೋತ್ಸವ ನಡೆಯಲಿದೆ ಎಂದು ತಿಳಿಸಿದರು.
ಶಿವಾನಂದ ಮುತ್ತೆಣ್ಣವರ ಮಾತನಾಡಿ, ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಶಾಸಕರಾದ ಪ್ರಸಾದ ಅಬ್ಬಯ್ಯ, ಮಹೇಶ ಟೆಂಗಿನಕಾಯಿ, ಎನ್.ಎಚ್. ಕೋನರಡ್ಡಿ, ವಿಧಾನ ಪರಿಷತ್ ಸದಸ್ಯ ಜಗದೀಶ ಶೆಟ್ಟರ್, ಸಚಿವರಾದ ಸಂತೋಷ ಲಾಡ್, ಎಂ.ಬಿ ಪಾಟೀಲ, ಲಕ್ಷ್ಮಿ ಹೆಬ್ಬಾಳಕರ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಹಾಗೂ ವಿವಿಧ ಮಠಾಧೀಶರು ಭಾಗವಹಿಸಲಿದ್ದಾರೆ ಎಂದು ಹೇಳಿದರು.