ಹುಬ್ಬಳ್ಳಿ: ಮಕ್ಕಳಲ್ಲಿ ಉತ್ತಮ ಮೌಲ್ಯಗಳನ್ನು ಬಿತ್ತಲು ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ತರಲಾಗಿದೆ. ಆದರೆ, ವಿರೋಧಿಗಳು ಕೇಸರೀಕರಣದ ಪಟ್ಟ ಕಟ್ಟುತ್ತಿದ್ದಾರೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹರಿಹಾಯ್ದರು.
ಇಲ್ಲಿನ ಸಂಸ್ಕಾರ ಇಂಗ್ಲಿಷ್ ಮಾಧ್ಯಮ ಶಾಲೆಯಲ್ಲಿ ಶನಿವಾರ ಅಂಚೆ ಇಲಾಖೆಯ ವಿಶೇಷ ಪೋಸ್ಟಲ್ ಸ್ಟಾಂಪ್ ಬುಕ್ಲೆಟ್ನ ಬಿಡುಗಡೆ, ಶಾಲಾ ಗ್ರಂಥಾಲಯದ ಉದ್ಘಾಟನೆ ಮತ್ತು ಮಹಾವೀರ ಲಿಂಬ್ ಸೆಂಟರ್ನ ಜಾಲತಾಣ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
‘ಜಗತ್ತು ಸುಂದರವಾಗಿ ಉಳಿಯಲು ಮೌಲ್ಯಗಳನ್ನು ಬಿತ್ತುವ ಕೆಲಸ ಮಾಡುವುದು ಅಗತ್ಯವಿದೆ. ಈ ಎಲ್ಲ ಉದ್ದೇಶಗಳು ಹೊಸ ಶಿಕ್ಷಣ ನೀತಿಯಲ್ಲಿವೆ. ದೇಶದ ಅಭಿವೃದ್ಧಿ ಹಾಗೂ ಮಕ್ಕಳ ಹಿತದೃಷ್ಟಿಯಿಂದ ನೀತಿ ಜಾರಿಗೆ ತರಲಾಗಿದೆ. ಭಾರತದ ಮೌಲ್ಯಗಳನ್ನು ವಿದೇಶಿಗರು ಅಧ್ಯಯನ ಮಾಡುತ್ತಿದ್ದಾರೆ. ಇಲ್ಲಿ ದೇಶದ ಮೌಲ್ಯಗಳನ್ನು ಎತ್ತಿತೋರಿಸುವ ಕೆಲಸಕ್ಕೆ ಮುಂದಾಗಿದ್ದೇವೆ ಅಷ್ಟೇ’ ಎಂದರು.
ಮಕ್ಕಳಲ್ಲಿ ಕ್ರೀಡಾ ಮನೋಭಾವ ಹೆಚ್ಚಿಸಬೇಕು, ಮುಂದಿನ ಒಲಿಂಪಿಕ್ಸ್ನಲ್ಲಿ ಸಂಸ್ಕಾರ ಶಾಲೆಯ ಮಕ್ಕಳೂ ಅರ್ಹತೆ ಪಡೆಯುವಂತಾಬೇಕು ಎಂದು ಆಶಿಸಿದರು.
ಸಕ್ಕರೆ ಖಾತೆ ಸಚಿವ ಶಂಕರಪಾಟೀಲ ಮುನೇನಕೊಪ್ಪ ಬುಕ್ಲೆಟ್ ಬಿಡುಗಡೆ ಮಾಡಿದರು. ಶಾಸಕ ಜಗದೀಶ ಶೆಟ್ಟರ್, ಸಂಸ್ಕಾರ ಶಾಲೆಯ ಸಂಸ್ಥಾಪಕ ಮಹೇಂದ್ರ ಸಿಂಘಿ, ಸಾರ್ವಜನಿಕ ಸಂಪರ್ಕಾಧಿಕಾರಿ ಎಂ.ಎಂ. ದಾರೊ ಗುರೂಜಿ, ವಿಜಯ ಶೆಟ್ಟರ್, ಮಹವೀರ ಕುಂದೂರು ಪಾಲ್ಗೊಂಡಿದ್ದರು.