ಹುಬ್ಬಳ್ಳಿ: ನಗರದಲ್ಲಿ ನಿರಂತರವಾಗಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಸಾಂಸ್ಕೃತಿಕ ವಾತಾವರಣ ಮೂಡಿಸಲಾಗುವುದು. ಇದಕ್ಕೆ ಸಂಗೀತ, ರಂಗಭೂಮಿಯನ್ನು ವೇದಿಕೆ ಮಾಡಿಕೊಳ್ಳಲಾಗುವುದು ಎಂದು ಇನ್ಸ್ಟಿಟ್ಯೂಟ್ ಅಧ್ಯಕ್ಷ ಯಶವಂತ ಸರದೇಶಪಾಂಡೆ ಹೇಳಿದರು.
ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ‘ಜಿಲ್ಲೆಯಲ್ಲಿ ಸಾಂಸ್ಕೃತಿಕ ವಾತಾವರಣ ನಿರ್ಮಿಸಬೇಕು ಎನ್ನುವ ಕಾರಣಕ್ಕೆ ಇಲ್ಲಿನ ಲೋಹಿಯಾ ನಗರದಲ್ಲಿ ನಿರ್ಮಿಸಿರುವ ಆದಿ ರಂಗ ಥೇಟರ್ಸ್ನಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು. ಆ. 15ರಂದು ಸಂಜೆ 5 ಗಂಟೆಗೆ ನಗುವಿನ ಪ್ರಾಣ ಪ್ರತಿಷ್ಠಾನದ ಹಾಸ್ಯ ಭಾಷಣಕಾರರಾದ ಗಂಗಾವತಿ ಪ್ರಾಣೇಶ, ನರಸಿಂಹ ಜೋಶಿ ಮತ್ತು ಬಸವರಾಜ ಮಹಾಮನಿ ಅವರಿಂದ ಹಾಸ್ಯ ಕಾರ್ಯಕ್ರಮ ನಡೆಯಲಿದೆ. ಥೇಟರ್ಸ್ 450 ಆಸನಗಳ ಸಾಮರ್ಥ್ಯ ಹೊಂದಿದ್ದು, ಕೋವಿಡ್ ನಿಯಮಾವಳಿ ಪ್ರಕಾರ ಶೇ 50ರಷ್ಟು ಜನರಿಗೆ ಮಾತ್ರ ಪ್ರವೇಶಕ್ಕೆ ಅವಕಾಶ ಕೊಡಲಾಗುವುದು’ ಎಂದರು. 16ರಂದು ನಗುವುದನ್ನು ಕಲಿಸುವ ಕಾರ್ಯಾಗಾರ ನಡೆಯಲಿದೆ ಎಂದರು.
ಪ್ರದೀಪ ಮುಧೋಳ, ಸಮೀರ್ ಎನ್., ನಾರಾಯಣ ಪಾಂಡುರಂಗಿ, ರಂಗಕರ್ಮಿ ವಿಶ್ವನಾಥ ಕುಲಕರ್ಣಿ, ನೃತ್ಯ ಹೇಳಿಕೊಡುವ ಶಿವಪ್ರಕಾಶ ಇದ್ದರು.