ಹುಬ್ಬಳ್ಳಿ: ಸಂವಿಧಾನ ವಿರೋಧಿಯಾಗಿ ಸಮಾಜದಲ್ಲಿ ಅಶಾಂತಿ ಸೃಷ್ಟಿಸುತ್ತಿರುವ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ್ ಅವರನ್ನು ಬಂಧಿಸಿ, ಗಡಿಪಾರು ಮಾಡಬೇಕು ಎಂದು ಆಗ್ರಹಿಸಿ ಭಾರತ ಮೂಲ ನಿವಾಸಿಗಳ ಒಕ್ಕೂಟ ಹಾಗೂ ಸಮತಾ ಸೈನಿಕ ದಳದ ಕಾರ್ಯಕರ್ತರು ಬುಧವಾರ ಮಿನಿವಿಧಾನ ಸೌಧದ ಎದುರು ಪ್ರತಿಭಟನೆ ನಡೆಸಿದರು.
ರಾಜ್ಯ ಸರ್ಕಾರ ಹಾಗೂ ಪ್ರಮೋದ ಮುತಾಲಿಕ್ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಸಾಮರಸ್ಯ ಕದಡುವ ಹೇಳಿಕೆಯನ್ನು ಪದೇ ಪದೇ ನೀಡುತ್ತಿರುವ ಮುತಾಲಿಕ್ ಅವರನ್ನು ದೇಶದ್ರೋಹ ಕಾಯ್ದೆಯಡಿ ಬಂಧಿಸಬೇಕು. ಬಸವ, ಅಂಬೇಡ್ಕರ್ ವಿರೋಧಿಗಳನ್ನು ಕೂಡಲೇ ಬಂಧಿಸಬೇಕು ಎಂದು ಒತ್ತಾಯಿಸಿದರು.
ಮುಖಂಡ ಶಂಕರ ಅಜಮನಿ ಮಾತನಾಡಿ, ‘ರಾಷ್ಟ್ರದಲ್ಲಿ ಸಂವಿಧಾನವನ್ನು ಹಂತ ಹಂತವಾಗಿ ಬದಲಿಸುವ ಷಡ್ಯಂತ್ರ ನಡೆಯುತ್ತಿದೆ. ಕೆಲವರು ಸಂವಿಧಾನ ಬದಲಿಸಲು ನಾವು ಬಂದಿದ್ದೇವೆ ಎಂದರೆ, ಮತ್ತೆ ಕೆಲವರು ಸಂವಿಧಾನ ಬೇಡ ಎನ್ನುತ್ತ ಸಂವಿಧಾನ ವಿರೋಧಿ ಕೆಲಸ ಮಾಡುತ್ತಿದ್ದಾರೆ. ಇದಕ್ಕೆ ಸರ್ಕಾರ ಪರೋಕ್ಷವಾಗಿ ಬೆಂಬಲ ನೀಡುತ್ತಿದೆ’ ಎಂದು ಆರೋಪಿಸಿದರು.