ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರ ಬದುಕು ಕಸಿದ ಮಳೆ

ಏರುಪೇರಾದ ಬಿತ್ತನೆ ಅವಧಿ; ಇಳೆಯಿಂದ ಮೇಲೇಳದ ಬೆಳೆ
Last Updated 13 ಡಿಸೆಂಬರ್ 2019, 19:45 IST
ಅಕ್ಷರ ಗಾತ್ರ

ಧಾರವಾಡ ಜಿಲ್ಲೆಯಲ್ಲಿ ಮಳೆಯಿಂದಾಗಿ ರೈತರ ಬದುಕು ಮೂರಾಬಟ್ಟೆಯಾಗಿದೆ. ಅತಿವೃಷ್ಟಿಯಿಂದ ಕೃಷಿ, ತೋಟಗಾರಿಕೆ ಬೆಳೆಗಳು ಹಾಳಾಗಿವೆ. ಅನ್ನದಾತರು ಯೋಗ್ಯ ಪರಿಹಾರ, ವೈಜ್ಞಾನಿಕ ಬೆಲೆಗಾಗಿ ಅಂಗಲಾಚುವ ಪರಿಸ್ಥಿತಿ ಬಂದೊದಗಿದೆ. ಈ ವರ್ಷ ಅತಿವೃಷ್ಟಿಯಿಂದಾಗಿ ಜಿಲ್ಲೆಯಾದ್ಯಂತ 97,909 ರೈತರ ಬೆಳೆಗಳು ಹಾನಿಯಾಗಿವೆ. ಹಿಂಗಾರಿನಲ್ಲಿ ಅದರಲ್ಲೂ ಅಕ್ಟೋಬರ್‌ ತಿಂಗಳಿನ ಮಳೆಗೆ 35,979 ಹೆಕ್ಟೇರ್‌ನಲ್ಲಿ ಬೆಳೆದಿದ್ದ ಕೃಷಿ ಹಾಗೂ ತೋಟಗಾರಿಕೆ ಬೆಳೆಗಳು ಹಾನಿಯಾಗಿವೆ.

ಅತಿವೃಷ್ಟಿಯ ಪರಿಣಾಮ ಬಿತ್ತನೆ ಅವಧಿ ಕೂಡ ಏರುಪೇರಾಗಿದೆ. ಹಿಂಗಾರು ಆರಂಭದಲ್ಲಿ ಮಳೆ ಬಿಡುವು ನೀಡದ ಕಾರಣ ಎಲ್ಲ ಬೆಳೆಗಳ ಬಿತ್ತನೆ ಒಂದು ತಿಂಗಳು ವಿಳಂಬವಾಗಿದೆ. ಇದರಿಂದಾಗಿ ಕೊಯ್ಲಿನ ಅವಧಿ ಮಾರ್ಚ್‌ಗೆ ವಿಸ್ತರಿಸಿದೆ. ಆಗೊಮ್ಮೆ ಈಗೊಮ್ಮೆ ಮಳೆಯಾದರೆ ಮತ್ತದೇ ನಷ್ಟದ ಹಾದಿ ರೈತರದ್ದಾಗಿದೆ. ಜಿಲ್ಲೆಯ ಎಲ್ಲ ತಾಲ್ಲೂಕುಗಳಲ್ಲೂ ಬಿತ್ತನೆ ಪ್ರಮಾಣ ಕ್ಷೀಣಿಸಿದೆ.

ಅಕ್ಟೋಬರ್‌ ತಿಂಗಳಲ್ಲಿ ಜಿಲ್ಲೆಯಾದ್ಯಂತ ಹೆಚ್ಚು ಹಾನಿ ಸಂಭವಿಸಿದೆ. ತೋಟಗಾರಿಕೆ ಇಲಾಖೆಯ 4,135 ಹೆಕ್ಟೇರ್‌ ಸೇರಿ ಒಟ್ಟು 35,979 ಹೆಕ್ಟೇರ್‌ನಲ್ಲಿ ಬೆಳೆದಿದ್ದ ಕೃಷಿ ಬೆಳೆಗಳು ಹಾನಿಗೀಡಾಗಿವೆ. ಕಳೆದ ಸಾಲಿನ ಹಿಂಗಾರು ನಷ್ಟ ಪರಿಹಾರವಾಗಿ ಸರ್ಕಾರ 73 ಸಾವಿರ ರೈತರಿಗೆ ₹58 ಕೋಟಿ ನೀಡಿದೆ. ಮುಂಗಾರಿನಲ್ಲಿ 97,909 ರೈತರಿಗೆ ₹198.52 ಕೋಟಿ ಪರಿಹಾರ ವಿತರಿಸಲಾಗಿದೆ.

₹21 ಕೋಟಿಗೆ ಪ್ರಸ್ತಾವ

ಅಕ್ಟೋಬರ್‌ ತಿಂಗಳಲ್ಲಿ ಕೃಷಿಗೆ ಸಂಬಂಧಿಸಿ 31,800 ಹೆಕ್ಟೇರ್‌ನಲ್ಲಿ ಬೆಳೆ ಹಾನಿಯಾಗಿದೆ. ಎನ್‌ಡಿಆರ್‌ಎಫ್‌ ಮಾರ್ಗಸೂಚಿಯಂತೆ ₹21.62 ಕೋಟಿಗೆ ಪ್ರಸ್ತಾವ ಕಳುಹಿಸಲಾಗಿದೆ. ಇನ್ನು ಕೆಲವರಿಗೆ ಹಂತ ಹಂತವಾಗಿ ಪರಿಹಾರ ಮೊತ್ತವನ್ನು ಜಮೆ ಮಾಡಲಾಗುತ್ತಿದೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಎಸ್‌.ಎಸ್‌. ಅಬೀದ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಉಣಕಲ್‌, ಸುಳ್ಳ, ಬ್ಯಾಹಟ್ಟಿ, ಕುಸುಗಲ್‌ ಸೇರಿದಂತೆ ಸುತ್ತಲಿನ ಗ್ರಾಮಗಳ ರೈತರ ಜಮೀನಿನಲ್ಲಿ ಶೇಂಗಾ ಬೆಳೆ ಇನ್ನೂ ಹೊಲದಲ್ಲೇ ಇದೆ. ಕೆಲವರು ಶೇಂಗಾ ಕಿತ್ತು ಹೊಲದಲ್ಲೇ ಬಣವೆ ಹಾಕಿದ್ದಾರೆ. ಭೂಮಿಯಲ್ಲೇ ಇರುವ ಶೇಂಗಾವನ್ನು ಈಗಲೂ ಕೀಳುತ್ತಿದ್ದಾರೆ. ಅಂಥವರು ಈಗ ಬಿತ್ತನೆ ಮಾಡಿದರೂ ಸರಿಯಾಗಿ ಫಸಲು ಬರುವುದಿಲ್ಲ. ಈ ಬಾರಿ ಮುಂಗಾರು ಹಾಗೂ ಹಿಂಗಾರಿನಲ್ಲಾದ ವ್ಯತ್ಯಾಸ ರೈತರ ಅನ್ನದ ಮೇಲೂ ಪರಿಣಾಮ ಬೀರಿದೆ ಎಂದು ರೈತರು ಅಳಲು ತೋಡಿಕೊಂಡರು. ಹಿಂಗಾರು ಬೆಳೆಯಾಗಿ ಕುಸುಬೆ, ಗೋಧಿ, ಕಡಲೆ ಹಾಗೂ ಗೋವಿನ ಜೋಳ ಬೆಳೆಯಲಾಗಿದೆ. ಕಡಲೆ ಹಾಗೂ ಗೋಧಿ ಬೆಳೆಗೆ ಬೆಳಗಿನ ಹವಾಮಾನವೇ ಸಾಕಾಗುತ್ತದೆ. ಅಧಿಕ ತೇವಾಂಶವಾದರೆ ಈ ಬೆಳೆಗಳೂ ಹಾಳಾಗುತ್ತವೆ.

ಗುತ್ತಿಗೆ ರೈತರಿಗೆ ಇಲ್ಲ ಪರಿಹಾರ

ಹುಬ್ಬಳ್ಳಿ ತಾಲ್ಲೂಕು ಸೇರಿದಂತೆ ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಭೂ ಗುತ್ತಿಗೆ ಚಾಲ್ತಿಯಲ್ಲಿದೆ. ಕೃಷಿಯಿಂದ ವಿಮುಖರಾದ ರೈತರು ವಾರ್ಷಿಕವಾಗಿ ಬೇರೆಯವರಿಗೆ ಭೂಮಿ ಗುತ್ತಿಗೆ ನೀಡುತ್ತಾರೆ. ಭೂಮಾಲೀಕರಿಗೆ ವಾರ್ಷಿಕ ಎಕರೆಗೆ ₹5 ಸಾವಿರಕ್ಕೆ ನೀಡಿ ಗುತ್ತಿಗೆ ಪಡೆದ ರೈತರು ಮಳೆಯಿಂದ ಬೆಳೆ ಕಳೆದುಕೊಂಡಿದ್ದಾರೆ.
ಆದರೆ, ಅವರಿಗೆ ಸರ್ಕಾರ ನೀಡುವ ಯಾವುದೇ ಪರಿಹಾರ ತಲುಪುತ್ತಿಲ್ಲ. ಕೃಷಿ ಇಲಾಖೆ ಹೆಕ್ಟೇರ್‌ಗೆ ₹16 ಸಾವಿರ
ಪರಿಹಾರ ನೀಡುತ್ತಿದೆ. ಆದರೆ, ಭೂ ಮಾಲೀಕರೇ ಆ ಪರಿಹಾರ ಹಣ ಪಡೆಯುತ್ತಿದ್ದಾರೆ. ಉತಾರ ಇನ್ನಿತರ ದಾಖಲೆಗಳು ಮಾಲೀಕರ ಹೆಸರಿನಲ್ಲಿದ್ದು, ಹಾಗಾಗಿನಮಗೆ ಪರಿಹಾರ ಹಣ ಸಿಗುತ್ತಿಲ್ಲ. ಮಾಲೀಕರನ್ನು ಕೇಳಲೂ ಆಗುತ್ತಿಲ್ಲ. ಆಗೊಮ್ಮೆ ಕೇಳಿದರೆ ಹೆಚ್ಚಿನ ಬೆಳೆ ಬಂದರೆ ಲಾಭ ನಮಗೆ ಕೊಡುತ್ತೀರಾ ಎಂದು ಮರುಪ್ರಶ್ನಿಸುತ್ತಾರೆ. ಹಾಗಾಗಿ ಕೇಳಲು ಆಗಲ್ಲ ಎಂದು ಬಹುತೇಕ ರೈತರು ಅಳಲು ತೋಡಿಕೊಂಡರು.

ಕಡಲೆಗೆ ಕಾಯಿ ಕೊರಕ ರೋಗ

ಒಂದು ತಿಂಗಳು ತಡವಾಗಿ ಬಿತ್ತನೆಯಾಗಿರುವ ಕಡಲೆಗೆ ಪೈರಿನಲ್ಲೇ ಕಾಯಿ ಕೊರಕ ರೋಗ ಕಾಣಿಸಿಕೊಂಡಿದೆ. ರೋಗ ನಿಯಂತ್ರಣಕ್ಕಾಗಿ ಕಡಲೆಗೆ ಮೂರು ಬಾರಿ ಔಷಧಿ ಸಿಂಪಡಣೆ ಮಾಡಬೇಕಿದೆ. ಇಲ್ಲವಾದರೆ, ಬೆಳೆ ಕೈಗೆ ಸಿಗುವುದಿಲ್ಲ. ಬೆಳಗಿನ ವೇಳೆ ಸುರಿಯುವ ಅತಿಯಾದ ಮಂಜಿನಿಂದ ಗಿಡಗಳಿಗೆ ಕಾಯಿ ಕೊರಕ ರೋಗ ಆವರಿಸಿದೆ ಎಂದು ನಿವೃತ್ತ ಪೊಲೀಸ್‌ ಹಾಗೂ ರೈತ ಸೋಮಶೇಖರ್‌ ‘ಪ್ರಜಾವಾಣಿಯ ಮೆಟ್ರೊ’ಗೆ ತಿಳಿಸಿದರು.

ಮಾರುಕಟ್ಟೆಯಲ್ಲಿ ತಿನ್ನಲು ಗಿಡ ಸಮೇತ ತರುವ ಫಾರಂ ಕಡಲೆಗೆ ಯಾವದೇ ಸಮಸ್ಯೆಯಾಗಿಲ್ಲ. ಒಂದೆರಡು ಮಳೆಗೆ ಬೆಳೆ ಬಂದಿದೆ. ಇದನ್ನು ತಿನ್ನಲಷ್ಟೇ ಬಳಸುತ್ತಿದ್ದಾರೆ. ಕಾಳು ಮಾಡಲಾಗುವುದಿಲ್ಲ. ಆದರೆ, ಈಗ ಬೆಳೆದಿರುವ ಅಣ್ಣಿಗೇರಿ ಕಡಲೆಯನ್ನು ಒಣಗಿಸಿ ಕಾಳು ಮಾಡಲಾಗುತ್ತಿದೆ. ಈಗಿರುವ ಪರಿಸ್ಥಿತಿ ನೋಡಿದರೆ ಇಳುವರಿ ನಿರೀಕ್ಷಿಸಿದಷ್ಟು ಬರುವ ಸಾಧ್ಯತೆ ಇಲ್ಲ ಎಂದು ವಿವರಿಸಿದರು.

ಬಿ.ಟಿ.ಹತ್ತಿಗೆ ಹಳದಿ ರೋಗ

ಹಿಂಗಾರಿನಲ್ಲಿ 3500 ಹೆಕ್ಟೇರ್‌ ಪ್ರದೇಶದಲ್ಲಿ 5 ತಿಂಗಳ ಬಿ.ಟಿ. ಹತ್ತಿ ಬೆಳೆಯಲಾಗಿದೆ. ಆದರೆ, ಮಳೆ ಅಧಿಕವಾದ ಕಾರಣ ಎಲೆಗಳು ಹಳದಿ ಬಣ್ಣಕ್ಕೆ ತಿರುಗಿ, ಫಸಲು ಕಡಿಮೆಯಾಗಿದೆ. ಎಕರೆಗೆ 7–8 ಕ್ವಿಂಟಲ್‌ ಬರುತ್ತಿದ್ದ ಹತ್ತಿ ಈಗ ಕೇವಲ 2–3 ಕ್ವಿಂಟಲ್‌ಗೆ ಕುಸಿದಿದೆ. ಹತ್ತಿ ಬೆಳೆ ನಿರ್ವಹಣೆಗೆ ಹಾಕಿದ ಬಂಡವಾಳವೂ ಬಾರದಂತಾಗಿದೆ ಎಂಬುದು ರೈತರ ಅಳಲು.

ಹುಟ್ಟದ ಗೋವಿನಜೋಳ

ಬಿತ್ತನೆ ತಡವಾದ್ದರಿಂದ ಗೋವಿನ ಜೋಳದ ಪೈರು ಕೆಲವು ಕಡೆ ಹುಟ್ಟಿಲ್ಲ. ಮತ್ತೆ ಕೆಲ ರೈತರ ಜಮೀನುಗಳಲ್ಲಿ ಅಲ್ಲಲ್ಲಿ ಮಾತ್ರ ಪೈರು ಕಾಣುತ್ತಿದೆ. ಬಿತ್ತನೆ ಸಮಯ ಏರುಪೇರಾಗಿರುವುದರಿಂದ ಸರಿಯಾಗಿ ಪೈರು ಹುಟ್ಟಿಲ್ಲ. ಈಗಾಗಲೇ ಬಿತ್ತನೆಯಾಗಿರುವ ಗೋವಿನ ಜೋಳಕ್ಕೆ ಭೂಮಿಯಲ್ಲಿರುವ ತೇವಾಂಶ ಸಾಕು. ಈಗ ಬಿತ್ತನೆ ಆರಂಭಿಸಿದರೆ ಪೈರು ಮೊಳಕೆ ಒಡೆಯುವುದೂ ಅನುಮಾನವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT