ಹುಬ್ಬಳ್ಳಿ: ನಗರದಲ್ಲಿ ಎರಡು ದಿನಗಳಿಂದ ಮೇಲಿಂದ ಮೇಲೆ ಮಳೆಯಾಗುತ್ತಿದೆ.
ಗುರುವಾರ ಬೆಳಿಗ್ಗಿನಿಂದಲೇ ಮೋಡಕವಿದ ವಾತಾವರಣವಿತ್ತು. ಎಂಟು ಗಂಟೆ ಬಳಿಕ ಜಿಟಿ, ಜಿಟಿಯಾಗಿ ಸುರಿದ ಮಳೆ ನಂತರ ಜೋರಾಯಿತು. ಜಿಲ್ಲೆಯಲ್ಲಿ ಲಾಕ್ಡೌನ್ ಘೋಷಿಸಿರುವ ಕಾರಣ ಹೆಚ್ಚು ಜನಸಂಚಾರ ಕಂಡು ಬರಲಿಲ್ಲ.
ಬೆಳಿಗ್ಗೆ 12 ಗಂಟೆ ತನಕ ಅಗತ್ಯ ವಸ್ತುಗಳ ವ್ಯಾಪಾರಕ್ಕೆ ಅನುಮತಿ ಇರುವ ಕಾರಣ ಜನತಾ ಬಜಾರ್ ಫುಟ್ಪಾತ್ನಲ್ಲಿ ಬಾಳೆಹಣ್ಣು ಮತ್ತು ತರಕಾರಿ ಮಾರಲು ಕೆಲ ವ್ಯಾಪಾರಿಗಳು ಬಂದಿದ್ದರು. ಆದರೆ, ಮಳೆಯಿಂದಾಗಿ ಜನ ಬರಲಿಲ್ಲ. ಇದರಿಂದ ನಿರಾಸೆಗೊಂಡ ವ್ಯಾಪಾರಸ್ಥರು ಮಳೆಯಲ್ಲಿಯೇ ತೋಯ್ದು ಮನೆಯತ್ತ ಹೆಜ್ಜೆ ಹಾಕಿದರು.
ನಗರದಲ್ಲಿ ಲಾಕ್ಡೌನ್ ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಲು ಪೊಲೀಸರು ಮಳೆಯ ನಡುವೆಯೂ ಕರ್ತವ್ಯ ನಿರ್ವಹಿಸಿದರು. ಮೊದಲ ದಿನಕ್ಕಿಂತಲೂ ಎರಡನೇ ದಿನ ಲಾಕ್ಡೌನ್ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ವಾಹನಗಳ ಓಡಾಟವೂ ಕಡಿಮೆಯಿತ್ತು. ಅನಗತ್ಯವಾಗಿ ಓಡಾಡುತ್ತಿದ್ದ ಸವಾರರಿಗೆ ಪೊಲೀಸರು ವಿನಾಕಾರಣ ಓಡಾಡಬೇಡಿ ಎಂದು ತಿಳಿ ಹೇಳಿದರು. ಕೆಲವರಿಗೆ ಎಚ್ಚರಿಕೆ ನೀಡಿ ವಾಪಸ್ ಕಳುಹಿಸಿದರು.