ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿ: ಜಾನಪದ ಉಳಿವಿಗೆ ವರ್ಷವಿಡೀ ಶಿಬಿರ

ಸಂಸ್ಕೃತಿ ಉಳಿಸಲು ಟೊಂಕ ಕಟ್ಟಿ ನಿಂತ ಜಾನಪದ ಕಲಾವಿದ ಡಾ. ಮೂಲಗಿ
Last Updated 14 ಆಗಸ್ಟ್ 2022, 6:36 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಆಧುನಿಕತೆ ಹೆಚ್ಚಿದಂತೆ ಮೂಲ ಜಾನಪದವು ಮಹತ್ವ ಕಳೆದುಕೊಳ್ಳುತ್ತಿದೆ. ಸಮುದಾಯ ಮತ್ತು ಶ್ರಮ ಆಧಾರಿತ ಕಲೆಗಳು ತೆರೆಮರೆಗೆ ಸರಿಯುತ್ತಿವೆ. ಇಂತಹ ಸಂದರ್ಭದಲ್ಲಿ ನೆಲದ ಸಂಸ್ಕೃತಿಯನ್ನು ಬಿಂಬಿಸುವ ಮೂಲ ಜಾನಪದ ಕಲೆಗಳ ಉಳಿವಿಗಾಗಿ, ವರ್ಷವಿಡೀ ಉಚಿತ ಶಿಬಿರಗಳನ್ನು ಆಯೋಜಿಸುತ್ತಾ ಬಂದಿದ್ದಾರೆ ಜಾನಪದ ಕಲಾವಿದ ಡಾ.ರಾಮು ಮೂಲಗಿ.

ವೃತ್ತಿಯಲ್ಲಿ ಶಿಕ್ಷಕರಾಗಿರುವ ಹುಬ್ಬಳ್ಳಿಯ ಡಾ.ಮೂಲಗಿ ಅವರು, ‘ಧಾರವಾಡ ಜಿಲ್ಲೆಯ ಜನಪದ ಸಂಪ್ರದಾಯಗಳು’ ವಿಷಯಕ್ಕಾಗಿ ಪಿಎಚ್‌.ಡಿ ಪಡೆದಿದ್ದಾರೆ. ಜಿಲ್ಲೆಯ ಜಾನಪದ ಕಲೆಗಳ ಮಾಹಿತಿ ಕಣಜದಂತಿರುವ ಅವರು ಬೋಧನೆಯ ಜತೆಗೆ, ಮೂಲ ಕಲೆಗಳ ಉಳಿವಿಗಾಗಿ ಶ್ರಮಿಸುತ್ತಿದ್ದಾರೆ.

ಒಂದು ತಾಸು ತರಬೇತಿ
‘ಸದ್ಯ ಖೋಟಾ ಜಾನಪದವೇ ಮೂಲ ಜಾನಪದ ಎಂಬಂತಾಗಿದೆ. ಸಿನಿಮಾ ಸೇರಿದಂತೆ ದೃಶ್ಯ ಮಾಧ್ಯಮಗಳು ಅದಕ್ಕೇ ಒತ್ತು ನೀಡುತ್ತಿವೆ. ಯುವಜನರು ಸಿನಿಮಾ ಹಾಡುಗಳು, ಪಾಶ್ಚಿಮಾತ್ಯ ಸಂಗೀತ ಸೇರಿದಂತೆ ವಿವಿಧ ರೀತಿಯ ಆಧುನಿಕ ಮನರಂಜನೆಯ ಪ್ರಕಾರಗಳಲ್ಲಿ ಕಳೆದು ಹೋಗಿದ್ದಾರೆ’ ಎಂದು ‘ಪ್ರಜಾವಾಣಿ’ಗೆ ಡಾ.ಮೂಲಗಿ ತಿಳಿಸಿದರು.

‘ಜಾನಪದ ನಮ್ಮ ತಾಯಿ ಬೇರು. ಅದನ್ನು ಉಳಿಸಿ ಬೆಳೆಸಬೇಕಾದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಆದ್ದರಿಂದ, ಉಚಿತವಾಗಿ ಪ್ರತಿ ಶನಿವಾರ ಸಂಜೆ ಒಂದು ತಾಸು ತರಬೇತಿ ನೀಡುತ್ತಿದ್ದೇನೆ. ವಿದ್ಯಾರ್ಥಿಗಳು ಸೇರಿದಂತೆ ವಯಸ್ಕರು ಸಹ ಭಾಗವಹಿಸುತ್ತಿದ್ದಾರೆ. ರಂಗಭೂಮಿ ಕಲಾವಿದ ಹಾಗೂ ನಿರ್ದೇಶಕ ಗದಿಗೆಯ್ಯ ಹಿರೇಮಠ ಅವರು, ಶಿಬಿರಕ್ಕಾಗಿ ತಮ್ಮ ಮನೆಯ ತಾರಸಿಯನ್ನು ಬಿಟ್ಟು ಕೊಟ್ಟಿದ್ದಾರೆ. ಸಾಂಸ್ಕೃತಿಕ ಅಟ್ಟ ಎಂಬ ತಂಡ ಕಟ್ಟಿಕೊಂಡು ಅಲ್ಲಿ ತರಬೇತಿ ನೀಡಲಾಗುತ್ತಿದೆ’ ಎಂದು ಹೇಳಿದರು.

ಮಹತ್ವದ ಅರಿವು
‘ಮೂಲ ಪರಂಪರೆಯ ಹಾಡುಗಳಾದ ಗೀಗಿಪದ, ಹಂತಿಪದ, ಲಾವಣಿ ಪದ, ಮದುವೆ ಹಾಡುಗಳು, ಸಣ್ಣಾಟ, ದೊಡ್ಡಾಟ, ಯಕ್ಷಗಾನ, ಹಬ್ಬ–ಹರಿದಿನಗಳ ಹಾಡುಗಳು,ಜೋಗುಳ ಹಾಡು, ಡೊಳ್ಳಿನ ಹಾಡು, ಒಗಟು, ಒಡಕು, ಒಡಪು, ಅವುಗಳ ಹಿನ್ನೆಲೆ ಮತ್ತು ಮಹತ್ವವನ್ನು ತರಬೇತಿಯಲ್ಲಿ ಹೇಳಿ ಕೊಡಲಾಗುತ್ತಿದೆ. ಜನಪದರ ವಾದ್ಯಗಳಾದ ಹಲಗಿ ಮತ್ತು ದಮಡಿ ಬಾರಿಸುವುದನ್ನು ಸಹ ಕಲಿಸಲಾಗುತ್ತಿದೆ‌. ಶಿಬಿರಾರ್ಥಿಗಳಿಗೆ ಪ್ರಮಾಣಪತ್ರ ಕೂಡ ವಿತರಿಸಲಾಗುತ್ತಿದೆ’ ಎನ್ನುತ್ತಾರೆ ಅವರು.

‘ಶಿಬಿರದಲ್ಲಿ ಪಾಲ್ಗೊಂಡವರು ಬೇರೆಯವರಿಗೆ ತರಬೇತಿ ನೀಡುವಷ್ಟರ ಮಟ್ಟಿಗೆ ಕಲಿತಿದ್ದಾರೆ. ಶಾಲಾ ಅಂಗಳದಲ್ಲಿ ಜಾನಪದ, ಮನೆಮನೆಯಲ್ಲಿ ಶ್ರಾವಣ ಜಾನಪದ (ನಿತ್ಯ ಒಂದು ತಾಸು ಉಪನ್ಯಾಸ ಹಾಗೂ ಹಾಡುಗಳು), ವಿದ್ಯಾರ್ಥಿಗಳಿಗೆ ತರಬೇತಿ ಶಿಬಿರಗಳನ್ನು ಹಮ್ಮಿಕೊಳ್ಳುತ್ತಾ ಬಂದಿದ್ದೇವೆ.ಶಾಲಾ ವಿದ್ಯಾರ್ಥಿಗಳ ತಂಡವೊಂದು ಧಾರವಾಡದ ಆಕಾಶವಾಣಿಯಲ್ಲಿ ಕಾರ್ಯಕ್ರಮ ನೀಡಿದೆ. ಇದು ನನ್ನಲ್ಲಿ ಹೆಚ್ಚಿನ ಆತ್ಮವಿಶ್ವಾಸ ಮೂಡಿಸಿದೆ’ ಎಂದು ಸಂತಸ ವ್ಯಕ್ತಪಡಿಸಿದರು.

‘ಉಳಿಸಿ, ಬೆಳೆಸುವುದೇ ಸವಾಲು’
‘ಜಾನಪದದಲ್ಲಿ ಮೂರು ಪ್ರಕಾರಗಳಿವೆ. ಮೂಲ ಪರಂಪರೆಯ ಜಾನಪದದಲ್ಲಿ ಸೋಬಾನೆ, ಹಂತಿಪದ, ಗೀಗೀಪದ, ಡೊಳ್ಳಿನ ಹಾಡು, ಜೋಗುಳ ಪದ ಇತ್ಯಾದಿಗಳಿದ್ದು, ಇವುಗಳಿಗೆ ಮಾಲೀಕರಿಲ್ಲ. ಜಾನಪದದ ಪದಗಳನ್ನು ತೆಗೆದುಕೊಂಡು ತಮ್ಮದೇ ಶೈಲಿಯಲ್ಲಿ ಕವಿಗಳು ಬರೆದಿರುವುದು ಜನಪ್ರಿಯ ಜಾನಪದ. ಖೋಟಾ ಜಾನಪದದಲ್ಲಿ ಮೂಲದ ತಿರುಳೇ ಇಲ್ಲ. ಟ್ರ್ಯಾಕ್ಟರ್‌ಗಳಲ್ಲಿ, ಟಂಟಂಗಳಲ್ಲಿ, ಟೀ ಅಂಗಡಿಗಳಲ್ಲಿ, ಬೀದಿಗಳಲ್ಲಿ ಜನ ಇವುಗಳನ್ನು ಹಾಕುವುದು ಸಾಮಾನ್ಯವಾಗಿದೆ. ಕರೋಕೆ ಬಂದ ಬಳಿಕ ಹಾಡಿನ ಮೂಲಸತ್ವವೇ ಹೋಗಿದೆ. ಇಂತಹ ಸವಾಲುಗಳ ನಡುವೆ ಮೂಲ ಜಾನಪದವನ್ನು ಉಳಿಸಿ, ಬೆಳೆಸುವ ಕೆಲಸ ಆಗಬೇಕಿದೆ’ ಎಂಬುದು ಡಾ. ರಾಮು ಮೂಲಗಿ ಅವರ ಕಳಕಳಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT