ಉಪ್ಪಿನಬೆಟಗೇರಿ: ಅಮ್ಮಿನಬಾವಿ ಪಂಚಗೃಹ ಹಿರೇಮಠದ ಪ್ರಥಮ ಜಾತ್ರಾಮಹೋತ್ಸವದ ಅಂಗವಾಗಿ ಶುಕ್ರವಾರ ಗುರು ಶಾಂತಲಿಂಗ ಶಿವಯೋಗಿಗಳ ರಥೋತ್ಸವ ಭಕ್ತರ ಜಯಘೋಷದ ನಡುವೆ ಸಂಭ್ರಮದಿಂದ ಜರುಗಿತು.
ಬೆಳಿಗ್ಗೆ ಶಿವಯೋಗಿಗಳ ಕರ್ತೃ ಗದ್ದುಗೆಗೆ ಅರ್ಚಕರಿಂದ ರುದ್ರಾಭಿಷೇಕ ಹಾಗೂ ವಿವಿಧ ಪೂಜಾ ಕಾರ್ಯಕ್ರಮ ನೆರವೇರಿಸಲಾಯಿತು. ಮಧ್ಯಾಹ್ನ ನಾಡಿನ ವಿವಿಧ ಮಠಾಧೀಶರ ಸಾನ್ನಿಧ್ಯದಲ್ಲಿ ಧಾರ್ಮಿಕ ಸಮಾರಂಭ ನಡೆಯಿತು. ಮಧ್ಯಾಹ್ನ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ಸಂಜೆ ಜಾನಪದ ವಾದ್ಯ– ಮೇಳದೊಂದಿಗೆ ಆರಂಭವಾದ ರಥೋತ್ಸವಕ್ಕೆ ಬಾಳೆಹೊನ್ನೂರಿನ ರಂಭಾಪುರಿ ಪೀಠದ ಜಗದ್ಗುರು ಡಾ.ವೀರಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ ಚಾಲನೆ ನೀಡಿದರು.
ಪಂಚಗೃಹ ಹಿರೇಮಠದಿಂದ ಹೊರಟ ನೂತನ ರಥವು ಮಸ್ಜಿದ್, ಪ್ರಮುಖ ರಸ್ತೆ, ಈಶ್ವರ ದೇವಸ್ಥಾನದವರೆಗೆ ಎಳೆದ ಭಕ್ತರು ಮರಳಿ ಶ್ರೀಮಠಕ್ಕೆ ತಂದರು. ಮಹಿಳೆಯರು ಹೂವು, ಹಣ್ಣು,ಕಾಯಿ, ನೈವೇದ್ಯ ಅರ್ಪಿಸಿದರು. ಭಕ್ತರು ತೇರಿಗೆ ಉತ್ತತ್ತಿ, ಲಿಂಬೆ, ಬಾಳೆಹಣ್ಣು ಎಸೆದು ನಮಿಸಿದರು.