‘ಧಾರವಾಡ, ಹಾವೇರಿ ಹಾಗೂ ಗದಗ ಜಿಲ್ಲೆಗಳ ವ್ಯಾಪ್ತಿ ಹೊಂದಿರುವ ಕೆಸಿಸಿ ಬ್ಯಾಂಕ್ ಉತ್ತಮ ಹಾದಿಯಲ್ಲಿ ನಡೆದು ಲಾಭ ಗಳಿಸುವಂತೆ ಮಾಡಿದ್ದೇನೆ. ಬ್ಯಾಂಕಿನಲ್ಲಿ ಎರಡು ದಶಕಗಳಿಂದ ವಸೂಲಾಗದೇ ಬಾಕಿ ಉಳಿದಿರುವ ವಿವಿಧ ಸಂಸ್ಕರಣ ಘಟಕಗಳ ಸಾಲ ವಸೂಲಾತಿಗೆ ವಿಶೇಷ ಯೋಜನೆ ಜಾರಿಗೆ ತಂದು, ರಾಣೆಬೆನ್ನೂರಿನ ತುಂಗಭದ್ರಾ ರೈತರ ಸಹಕಾರಿ ನೂಲಿನ ಗಿರಣಿ, ಮಲಪ್ರಭಾ ಸಹಕಾರಿ ಎಣ್ಣೆ ಗಿರಣಿ, ವರದಾ ಶುಗರ್ಸ್ನಿಂದ ಅಸಲು ಹಾಗೂ ಬಡ್ಡಿ ಸೇರಿ ಸುಮಾರು ₹26 ಕೋಟಿ ವಸೂಲಿ ಮಾಡಲಾಗಿದೆ. ಎರಡು ವರ್ಷಗಳ ಅವಧಿಯಲ್ಲಿ ಸರ್ಕಾರದ ಶೇ 3ರ ಬಡ್ಡಿ ದರದಲ್ಲಿ ನೀಡುವ ಕೃಷಿ ಮಾಧ್ಯಮಿಕ ಯೋಜನೆಗಳಿಗೆ ₹60 ಕೋಟಿ ಸಾಲ ನೀಡಿ ಶೇ 100 ರಷ್ಟು ವಸೂಲಿ ಮಾಡಲಾಗಿದೆ. ಕಿಸಾನ್ ಬಳಕೆ ಸಾಲದ ಯೋಜನೆ, 16 ಸಾವಿರ ರೈತ ಸದಸ್ಯರಿಗೆ ₹43 ಕೋಟಿ ಸಾಲ ವಿತರಣೆ, ₹60 ಕೋಟಿ ಕೃಷಿ ಬೆಳೆಸಾಲ ವಿತರಣೆ ಮಾಡಲಾಗಿದೆ’ ಎಂದು ಬಾಪುಗೌಡ ತಿಳಿಸಿದರು.