ಹುಬ್ಬಳ್ಳಿ: ಸದ್ಗುರು ಸಿದ್ದಾರೂಢರ ಜಾತ್ರಾ ಮಹೋತ್ಸವ ಅಂಗವಾಗಿ ಫೆ.22 ರಂದು ಸಂಜೆ 5.30ಕ್ಕೆ ರಥೋತ್ಸವ ಹಮ್ಮಿಕೊಳ್ಳಲಾಗಿದೆ.
ಫೆ.21 ರಂದು ಸಿದ್ದಾರೂಢರ ಪಲ್ಲಕ್ಕಿಯು ವಾದ್ಯ ಮೇಳಗಳೊಂದಿಗೆ ಸಂಚರಿಸಿ ರಾತ್ರಿ ಶ್ರೀಮಠಕ್ಕೆ ಬರಲಿದೆ. ಆಹೋರಾತ್ರಿ ಜಾಗರಣೆ ನಡೆಯಲಿದೆ. ಫೆ.22 ರಂದು ಪಲ್ಲಕ್ಕಿ ಊರೊಳಗೆ ಹೋಗಿ ಬಂದ ನಂತರ ರಥೋತ್ಸವ ನಡೆಯಲಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಕಮಿಟಿಯ ಧರ್ಮದರ್ಶಿ ಎಸ್.ಆರ್. ಕೋಳಕೊರ ತಿಳಿಸಿದರು.
ಫೆ.16 ರಂದು ಸಂಜೆ 4ಕ್ಕೆ ಮಠದ ಹತ್ತಿಮತ್ತೂರ ದಾಸೋಹ ಭವನದಲ್ಲಿ ಆಜೀವ ಸದಸ್ಯರ, ಆಜೀವ ಆಶ್ರಯದಾತರ, ಆಜೀವ ಪೋಷಕರ ಸಭೆ ಕರೆಯಲಾಗಿದೆ. ಫೆ.16 ರಿಂದ ಮಧ್ಯಾಹ್ನ 21ರವರೆಗೆ ರಾತ್ರಿ 8ಕ್ಕೆ ರಾಜ್ಯ ಹಾಗೂ ಹೊರರಾಜ್ಯದ ಸಂಗೀತಗಾರರಿಂದ ಸಂಗೀತೋತ್ಸವ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.
ನಿತ್ಯ ದಾಸೋಹಕ್ಕಾಗಿ ಎಪಿಎಂಸಿ ವರ್ತಕರು ಕಾಯಿಪಲ್ಲೆಯನ್ನು ದೇಣಿಗೆಯಾಗಿ ನೀಡುತ್ತಿದ್ದಾರೆ. ಭಕ್ತ ಸಮೂಹ ಅಪಾರ ಪ್ರಮಾಣದಲ್ಲಿ ಆಹಾರಧಾನ್ಯ ಮುಂತಾದ ವಸ್ತುಗಳನ್ನು ನೀಡುತ್ತಿದ್ದಾರೆ. ಬೆಳಿಗ್ಗೆ ಉಪಾಹಾರ ಹಾಗೂ ಮಧ್ಯಾಹ್ನ ಪ್ರಸಾದ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.
ಭಕ್ತರಿಗೆ ವಿವಿಧ ಸೌಲಭ್ಯಗಳನ್ನು ಒದಗಿಸಲು ಹಲವಾರು ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ದೊಡ್ಡ ಉಗ್ರಾಣದ ಪಕ್ಕದಲ್ಲಿ ಮತ್ತೊಂದು ಉಗ್ರಾಣ ನಿರ್ಮಿಸಲಾಗಿದೆ. ಶ್ರೀಮಠದ ಕೆರೆಯನ್ನೂ ಅಭಿವೃದ್ಧಿ ಪಡಿಸಲಾಗುತ್ತಿದೆ. 36 ಶೌಚಾಲಯಗಳನ್ನು ನಿರ್ಮಿಸಲಾಗಿದೆ ಎಂದರು.
ದಾಸಪ್ಪ, ಖೋಡೆ ಚೌಲ್ಟ್ರಿಗಳಲ್ಲಿದ್ದ 22 ಕೊಠಡಿಗಳ ನವೀಕರಿಸಲಾಗಿದೆ. ಗೋವರ್ಧನ ಕೇಂದ್ರ ಆರಂಭವಾಗಿದ್ದು, ನಿತ್ಯ ಸಿದ್ಧಾರೂಢರ ಅಭಿಷೇಕಕ್ಕೆ ಅಲ್ಲಿನ ಹಸುಗಳ ಹಾಲನ್ನೇ ಬಳಸಲಾಗುತ್ತಿದೆ ಎಂದು ಹೇಳಿದರು.
ಭಕ್ತರ ಲಗೇಜ್ ಇಟ್ಟುಕೊಳ್ಳಲಿಕ್ಕೆ ಲಾಕರ್ ಕೊಠಡಿ ನಿರ್ಮಾಣ ಮಾಡಲಾಗುತ್ತಿದೆ. ಮತ್ತೊಂದು ಪ್ರಸಾದ ನಿಲಯ ನಿರ್ಮಿಸಲಾಗುತ್ತಿದೆ. ಪ್ರಸಾದವನ್ನು ಸೌರಶಕ್ತಿಯಿಂದ ಸಿದ್ಧಪಡಿಸಲಾಗುತ್ತಿದೆ. 16 ಕೊಠಡಿಗಳನ್ನು ನಿರ್ಮಾಣ ಮಾಡಲಾಗುತ್ತಿದೆ ಎಂದರು.
ಸಮುದಾಯ ಭವನ, ಗ್ರಂಥಾಲಯ ನಿರ್ಮಾಣ, ಗುರುಕುಲ ಸ್ಥಾಪನೆ, ಸೋಲಾರ ಮೂಲಕ ವಿದ್ಯುತ್ ಉತ್ಪಾದನೆ ಪ್ಲಾಂಟ್ ಅಳವಡಿಕೆ ಸೇರಿದಂತೆ ವಿವಿಧ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಉದ್ದೇಶಿಸಲಾಗಿದೆ ಎಂದು ಹೇಳಿದರು.
ಟ್ರಸ್ಟ್ ಕಮಿಟಿ ಅಧ್ಯಕ್ಷ ಡಿ.ಡಿ. ಮಾಳಗಿ, ಗೋವಿಂದ ಮಣ್ಣೂರ, ಗಣಪತಿ ನಾಯಕ, ಜಗದೀಶ ಮಗಜಿಕೊಂಡಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.