ಧಾರವಾಡ: ಸಂಸ್ಕೃತವು ದೇಶದ ಅಪಾರವಾದ ಪಾರಂಪರಿಕ ಜ್ಞಾನ ಸಂಪತ್ತನ್ನು ಹೊಂದಿದ ಭಾಷೆ. ಅದನ್ನು ಪ್ರತಿಯೊಬ್ಬರ ಮನೆ ಬಾಗಿಲಿಗೆ ಕೊಂಡೊಯ್ಯುವಲ್ಲಿ ಸಂಸ್ಕೃತ ತಜ್ಞರು ಹೆಚ್ಚು ಶ್ರಮಿಸಬೇಕು ಎಂದು ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಕೆ.ಬಿ. ಗುಡಸಿ ಹೇಳಿದರು.
ಇಲ್ಲಿನ ಕರ್ನಾಟಕ ವಿಶ್ವವಿದ್ಯಾಲಯದ ಡಾ.ಆರ್.ಸಿ. ಹಿರೇಮಠ ಅಧ್ಯಯನ ಪೀಠದ ಡಾ.ಚಂದ್ರಶೇಖರ ಕಂಬಾರ ಸಭಾಭವನದಲ್ಲಿ ಸಂಸ್ಕೃತ ಅಧ್ಯಯನ ವಿಭಾಗ, ಸಂಸ್ಕೃತ ಭಾರತಿ ಮತ್ತು ಮಜೇಥಿಯಾ ಫೌಂಡೇಶನ್ ಸಹಯೋಗದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ದಶದಿನಾತ್ಮಕ ಸಂಸ್ಕೃತ ಸಂಭಾಷಣ ಶಿಬಿರದ ಸಮಾರೋಪ ಉದ್ಘಾಟಿಸಿ ಮಾತನಾಡಿದರು.
ಆಯುರ್ವೇದ, ಜ್ಯೋತಿರ್ವಿಜ್ಞಾನ, ವಾಸ್ತುಶಿಲ್ಪ, ರಸತಂತ್ರ, ವೇದಗಣಿತ ಮುಂತಾದ ಹಲವು ಕ್ಷೇತ್ರಗಳಲ್ಲಿ ಇನ್ನೂ ಹೆಚ್ಚಿನ ಸಂಶೋಧನೆ ಆಗಬೇಕಿದ್ದು, ಅದಕ್ಕೆಲ್ಲ ಸಂಸ್ಕೃತದ ಗಟ್ಟಿಯಾದ ಜ್ಞಾನವು ಅತ್ಯವಶ್ಯಕವಾಗಿದೆ. ಸಂಸ್ಕೃತ ಬಲ್ಲವರು ಅದರ ಮಹತ್ವ ಎಲ್ಲರಿಗೂ ಮನದಟ್ಟು ಮಾಡಬೇಕು. ಅಂದಾಗ ಆ ಭಾಷೆಯ ಸಂರಕ್ಷಣೆ, ಸಂವರ್ಧನೆ ಆಗುತ್ತದೆ ಎಂದರು.
ಕವಿವಿ ಮೌಲ್ಯಮಾಪನ ಕುಲಸಚಿವ ಪ್ರೊ.ಸಿ.ಕೃಷ್ಣಮೂರ್ತಿ ಮಾತನಾಡಿ, ಸಂಸ್ಕೃತ ಭಾಷೆಯು ಭಾರತೀಯ ಸಂಸ್ಕೃತಿಯ ಆಧಾರ ಸ್ತಂಭಗಳಲ್ಲಿ ಒಂದು. ಇದು ದೇಶದ ಸಾಂಸ್ಕೃತಿಕ ಪ್ರತಿನಿಧಿಯಂತಿದೆ. ಸಂಸ್ಕೃತವೆಂಬ ಸಾಗರದಲ್ಲಿ ಅಡಗಿರುವ ಇನ್ನೂ ಅನೇಕ ರತ್ನಗಳನ್ನು ಹೊರತೆಗೆಯಬೇಕಿದೆ ಎಂದರು.
ನಂತರ ಶಿಬಿರಾರ್ಥಿಗಳು ಹತ್ತು ದಿನಗಳಲ್ಲಿ ಕಲಿತ ಸರಳ ಸಂಸ್ಕೃತ ಸಂಭಾಷಣೆಯನ್ನು ವಸ್ತು ಪ್ರದರ್ಶನ, ಲಘುರೂಪಕಗಳ ಮೂಲಕ ಪ್ರಸ್ತುತಪಡಿಸಿದರು.
2023ರ ವಿಶ್ವಪ್ರತಿಭಾ ಅಂತಾರಾಷ್ಟ್ರೀಯ ಸಮ್ಮಾನಕ್ಕೆ ಭಾಜನರಾದ ಕವಿವಿ ಸಂಸ್ಕೃತ ವಿಭಾಗದ ಸಂಯೋಜಕಿ ಡಾ. ಪದ್ಮಾವತಿ ಸಿಂಗಾರಿ ಅವರನ್ನು ಸನ್ಮಾನಿಸಲಾಯತು.
ರೂಪಶ್ರೀ ನಾಯ್ಕ, ಡಾ. ಜಿ. ಆರ್. ಅಂಬಲಿ, ಡಾ. ಚಂದ್ರಮೌಳಿ ಎಸ್. ನಾಯ್ಕರ, ಡಾ. ರಾಜೇಂದ್ರ ಎಂ. ನಾಯಕ, ಲಕ್ಷ್ಮೀ ನಾರಾಯಣ, ಡಾ.ಕೇಯೂರ ಕರಗುದರಿ, ಪ್ರತೀಕ ಹೆಗಡೆ, ಡಾ. ಪ್ರಮೋದ ಎಂ. ಚಂದಿ, ಡಾ. ಚಿದಂಬರ ಟಕ್ಕಳಕಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.