ಧಾರವಾಡ: ‘ಕೇಂದ್ರ ಬರ ಅಧ್ಯಯನ ತಂಡವು ಅ.7ರಂದು ಜಿಲ್ಲೆಗೆ ಭೇಟಿ ನೀಡಲಿದೆ. ಜಿಲ್ಲೆಯ ಕಲಘಟಗಿ, ಅಳ್ನಾವರ, ಅಣ್ಣಿಗೇರಿ ತಾಲ್ಲೂಕುಗಳನ್ನು ‘ಹಸಿರು ಬರಗಾಲ’ ಪ್ರದೇಶ ಎಂದು ಘೋಷಿಸುವಂತೆ ತಂಡಕ್ಕೆ ಮನವಿ ಸಲ್ಲಿಸುತ್ತೇವೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಎಸ್.ಲಾಡ್ ತಿಳಿಸಿದರು.
ಶುಕ್ರವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ‘ಕಲಘಟಗಿ, ಅಳ್ನಾವರ ಭಾಗದಲ್ಲಿ ಮೇಲ್ನೋಟಕ್ಕೆ ಹಸಿರು ಇದೆ. ಆದರೆ, ಬೆಳೆ (ಮೆಕ್ಕೆಜೋಳ, ಕಬ್ಬು, ಹತ್ತಿ...) ಎಲ್ಲ ನಾಶವಾಗಿದೆ. ರಾಜ್ಯದ ಯಾವ್ಯಾವ ತಾಲ್ಲೂಕಿನಲ್ಲಿ ಈ ಸ್ಥಿತಿ ಇದೆ ಆ ಪ್ರದೇಶಗಳೆಲ್ಲವನ್ನೂ ‘ಹಸಿರು ಬರಗಾಲ’ ಪ್ರದೇಶವೆಂದು ಘೋಷಿಸಬೇಕು’ ಎಂದು ಒತ್ತಾಯಿಸಿದರು.
‘ಸರ್ಕಾರ ಅನುದಾನ ಬಿಡುಗಡೆಗೊಳಿಸಿಲ್ಲ ಎಂದು ಬಿಜೆಪಿಯವರು ಆರೋಪಿಸಿದ್ದಾರೆ. ಅವರ ಆರೋಪಕ್ಕೆ ಏನಾದರೂ ಸಾಕ್ಷ್ಯ ಇದೆಯೇ? ಕಾಮಗಾರಿಗಳು ಚಾಲ್ತಿಯಲ್ಲಿವೆ. ಸರ್ಕಾರವು ಹೊಸ ಕಾರ್ಯಕ್ರಮಗಳನ್ನು ಪ್ರಾರಂಭಿಸಿದೆ. ಹಂತಹಂತವಾಗಿ ಕಾಮಗಾರಿ ಮುಗಿದಂತೆ ಹಣ ಬಿಡುಗಡೆಯಾಗುತ್ತದೆ’ ಎಂದು ಉತ್ತರಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.