ಹುಬ್ಬಳ್ಳಿ: ಅಕಾಲಿಕ ಮಳೆಯಿಂದಾಗಿ ಭರ್ತಿಯಾದ ನಗರದ ಉಣಕಲ್ನ ಚನ್ನಬಸವಸಾಗರ ಕೆರೆ ಕೋಡಿ ಹರಿದಿದ್ದು, ಗ್ರಾಮಸ್ಥರು ಹಾಗೂ ಜನಪ್ರತಿನಿಧಿಗಳು ಭಾನುವಾರ ಬಾಗಿನ ಅರ್ಪಿಸಿದರು.ಶಾಸಕ ಜಗದೀಶ ಶೆಟ್ಟರ್ ನೇತೃತ್ವದಲ್ಲಿ ಬಾಗಿನ ಅರ್ಪಿಸಲಾಯಿತು.
ಗ್ರಾಮದ ಮಹಿಳೆಯರು ಕಾಯಿ, ಅಕ್ಕಿ, ಬಳೆ, ಅರಿಸಿನ, ಕುಂಕುಮ ಹಾಗೂ ಹಸಿರು ಬಟ್ಟೆಯನ್ನು ಮೊರದಲ್ಲಿ ಇಟ್ಟುಕೊಂಡು ಕೋಡಿ ಹರಿಯುವ ಜಾಗಕ್ಕೆ ಸಂಭ್ರಮದಿಂದ ಬಂದರು. ಪುರೋಹಿತರು ಕೆರೆಗೆ ಪೂಜೆ ನೆರವೇರಿಸಿದರು.
ನಂತರ ಮಾತನಾಡಿದ ಶೆಟ್ಟರ್, ‘ಈ ವರ್ಷ ಮೊದಲ ಬಾರಿಗೆ ಉಣಕಲ್ ಕೆರೆ ಭರ್ತಿಯಾಗಿ ಕೋಡಿ ಹರಿದಿದೆ. ಇದು ಹುಬ್ಬಳ್ಳಿ ಜನತೆ ಜೊತೆಗೆ ಸ್ಥಳೀಯರ ಸಂಭ್ರಮಕ್ಕೂ ಕಾರಣವಾಗಿದೆ. ಮೂರ್ನಾಲ್ಕು ವರ್ಷಗಳಿಂದ ಮಳೆಗಾಲದಲ್ಲಿ ಕೆರೆ ಕೋಡಿ ಹರಿಯುತ್ತಿರುವುದು ಸಾಮಾನ್ಯವಾಗಿದೆ. ಕೆರೆ ನೀರು ಖಾಲಿಯಾದ ನಿದರ್ಶನವಿಲ್ಲ. ಸ್ಮಾರ್ಟ್ ಸಿಟಿ ಯೋಜನೆಯಡಿ ಕೆರೆ ಅಭಿವೃದ್ಧಿ ಕೈಗೊಳ್ಳಲಾಗಿದೆ’ ಎಂದರು.
ಮಹಾನಗರ ಪಾಲಿಕೆ ಸದಸ್ಯ ರಾಜಣ್ಣ ಕೊರವಿ ಮತ್ತು ಈಶ್ವರಗೌಡ ಇದ್ದರು.