ಹುಬ್ಬಳ್ಳಿ: ‘ಶಿಕ್ಷಣದಿಂದ ಸದೃಢ ಸಮಾಜ ನಿರ್ಮಾಣ ಸಾಧ್ಯವಿದ್ದು, ಶಿಕ್ಷಣದ ಗುರಿ ಇದೇ ಆಗಿದೆ. ವಿದ್ಯಾರ್ಥಿಗಳು ಸಹ ತಾವು ಪಡೆದ ಶಿಕ್ಷಣವನ್ನು ದೇಶದ ಪ್ರಗತಿಗೆ ಬಳಸಬೇಕು’ ಎಂದು ಧಾರವಾಡ ಶಿಕ್ಷಣ ಇಲಾಖೆಯ ಸಹ ನಿರ್ದೇಶಕ ಗಜಾನನ ಮುನ್ನಿಕೇರಿ ಸಲಹೆ ನೀಡಿದರು.
ಇಲ್ಲಿನ ರೇಣುಕಾ ನಗರದ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದಲ್ಲಿ ಎಸ್ಸೆಸ್ಸೆಲ್ಸಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಸೋಮವಾರ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಅವರು ಮಾತನಾಡಿದರು.
‘ರಾಷ್ಟ್ರೋತ್ಥಾನ ವಿದ್ಯಾಕೇಂದ್ರವು ರಾಷ್ಟ್ರದ ಅಭಿವೃದ್ಧಿ ಉದ್ದೇಶದಿಂದ ಆರಂಭವಾಗಿದೆ. ಶಾಲೆಯಲ್ಲಿ ವಿದ್ಯಾರ್ಥಿಗೆ ಕಲಿಸುವ ಸಂಪ್ರದಾಯ, ಆ ಕುಟುಂಬದ ಪರಿವರ್ತನೆಗೆ ಕಾರಣವಾಗುತ್ತದೆ’ ಎಂದರು.
‘ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರದ ಕಾರ್ಯದರ್ಶಿ ದತ್ತಮೂರ್ತಿ ಕುಲಕರ್ಣಿ ಮಾತನಾಡಿ, ವ್ಯಕ್ತಿ ನಿರ್ಮಾಣದ ಜೊತೆಗೆ ರಾಷ್ಟ್ರ ನಿರ್ಮಾಣದ ಉದ್ದೇಶದಿಂದ ಈ ವಿದ್ಯಾ ಕೇಂದ್ರ ಸ್ಥಾಪಿಸಲಾಗಿದೆ’ ಎಂದರು.
ಎಸ್ಸೆಸ್ಸೆಲ್ಸಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ನೀಡಲಾಯಿತು. ವಿದ್ಯಾಕೇಂದ್ರದ ನಿರ್ದೇಶಕ ಶ್ರೀಧರ ಜೋಶಿ, ಪ್ರಾಚಾರ್ಯೆ ಶರಾವತಿ ಕುಲಕರ್ಣಿ ಇದ್ದರು.