ಹುಬ್ಬಳ್ಳಿ: ‘ರಾಜ್ಯದಲ್ಲೇ ಹೆಚ್ಚಿನ ಜನಸಂಖ್ಯೆ ಹೊಂದಿರುವ ವೀರಶೈವ ಲಿಂಗಾಯತ ಸಮಾಜ ಮತ್ತಷ್ಟು ಸಬಲೀಕರಣಗೊಳ್ಳಬೇಕಿದೆ’ ಎಂದು ವೀರಶೈವ ಲಿಂಗಾಯತ ಸಂಘಟನೆಯ ಪ್ರಕಾಶ ಬೆಂಡಿಗೇರಿ ಹೇಳಿದರು.
ವೀರಶೈವ ಲಿಂಗಾಯತ ಸಮಾಜದ ಸಬಲೀಕರಣ ಹಾಗೂ ಸಮಾಜದ ಮೇಲೆ ನಡೆಯುತ್ತಿರುವ ಅನ್ಯಾಯಗಳ ಕುರಿತು ಹುಬ್ಬಳ್ಳಿಯಲ್ಲಿ ಭಾನುವಾರ ನಡೆದ ಸಭೆಯಲ್ಲಿ ಮಾತನಾಡಿದ ಅವರು, ‘ಸರಿಯಾದ ಸಂಘಟನೆ ಹಾಗೂ ಹೋರಾಟದ ಕೊರತೆಯಿಂದಾಗಿ, 100ಕ್ಕೂ ಅಧಿಕ ಉಪ ಜಾತಿಗಳನ್ನೊಳಗೊಂಡ ಸಮಾಜದ ಬೆಳವಣಿಗೆ ಕುಂಠಿತವಾಗಿದೆ’ ಎಂದರು.
‘ಸಮಾಜದ ಸರ್ವರನ್ನೂ ಸಂಘಟಿಸುವ ಮೂಲಕ, ನಮ್ಮ ಹಕ್ಕನ್ನು ಪಡೆಯಲು ಹೋರಾಡಬೇಕಾದ ಅನಿವಾರ್ಯತೆ ಇದೆ. ಆ ನಿಟ್ಟಿನಲ್ಲಿ, ಸಂಘಟನೆಯು ಸಮಾಜದ ಸರ್ವಾಂಗೀಣ ಅಭಿವೃದ್ಧಿಗಾಗಿ ವಿವಿಧ ಯೋಜನೆಗಳನ್ನು ರೂಪಿಸಿ ಅನುಷ್ಠಾನಕ್ಕೆ ತರುವ ಮೂಲಕ, ಸಬಲೀಕರಣಕ್ಕಾಗಿ ಶ್ರಮಿಸಬೇಕಿದೆ’ ಎಂದು ತಿಳಿಸಿದರು.
ಸಭೆಯಲ್ಲಿ ಧರ್ಮ, ಸಾಮಾಜಿಕ, ಶೈಕ್ಷಣಿಕ, ವ್ಯಾಪಾರ, ರಾಜಕೀಯ, ಕೃಷಿ, ಸಂಘಟನೆಗೆ ಸಂಬಂಧಿಸಿದ ವಿಷಯಗಳ ಕುರಿತು ಸಮಾಜದ ವಿವಿಧ ಕ್ಷೇತ್ರಗಳ ಗಣ್ಯರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.