ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಜನವರಿ ಬಂದಾಯ್ತು... ಮುನೇನಕೊಪ್ಪ ನಿರ್ಣಯವೇನು?;

ಧಾರವಾಡ ರಾಜಕೀಯ ವಲಯದಲ್ಲಿ ಕುತೂಹಲ ಕೆರಳಿಸಿದ ಹೇಳಿಕೆ
Published 12 ಜನವರಿ 2024, 6:11 IST
Last Updated 12 ಜನವರಿ 2024, 6:11 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ಜನವರಿಯಲ್ಲಿ ನನ್ನ ನಿರ್ಧಾರ ಪ್ರಕಟಿಸುವೆ’ ಎಂದು ಮಾಜಿ ಸಚಿವ, ಬಿಜೆಪಿಯ ಶಂಕರ ಪಾಟೀಲ ಮುನೇನಕೊಪ್ಪ ಕಳೆದ ವರ್ಷ ಆಗಸ್ಟ್‌ನಲ್ಲಿ  ನೀಡಿದ್ದ ಹೇಳಿಕೆ ಜಿಲ್ಲೆಯ ರಾಜಕಾರಣದ ಅಂಗಳದಲ್ಲಿ ಮುನ್ನೆಲೆಗೆ ಬಂದಿದೆ.

ಹಿಂದಿನ ಬಿಜೆಪಿ ಸರ್ಕಾರದಲ್ಲಿ ಜವಳಿ ಸಚಿವರಾಗಿದ್ದ ಅವರು, ವಿಧಾನಸಭೆ ಚುನಾವಣೆಯಲ್ಲಿ ನವಲಗುಂದ ಕ್ಷೇತ್ರದಿಂದ ಪರಾಭವಗೊಂಡ ನಂತರ ಜಿಲ್ಲೆಯ ರಾಜಕಾರಣದಿಂದ ಬಹುತೇಕ ದೂರವಾಗಿದ್ದರು. ಪಕ್ಷದ ಚಟುವಟಿಕೆಗಳಿಂದ ಅಂತರ ಕಾಯ್ದುಕೊಂಡಿದ್ದರು. ತಮ್ಮ ರಾಜಕೀಯ ಗುರು ಜಗದೀಶ ಶೆಟ್ಟರ್‌ ಬಿಜೆಪಿ ತೊರೆದು, ಕಾಂಗ್ರೆಸ್‌ ಸೇರ್ಪಡೆಯಾದ ಹಿನ್ನೆಲೆಯಲ್ಲಿ ಇವರೂ ಅವರನ್ನು ಹಿಂಬಾಲಿಸಬಹುದು ಎನ್ನುವ ವದಂತಿ ಎಲ್ಲೆಡೆ ಸುದ್ದಿ ಮಾಡಿತ್ತು.

ಇದನ್ನು ಅಲ್ಲಗೆಳೆದ ಮುನೇನಕೊಪ್ಪ ಅವರು, ‘ಬಿಜೆಪಿಯ ಹಿರಿಯ ನಾಯಕರ ನಡವಳಿಕೆಯಿಂದ ಬೇಸರವಾಗಿರುವುದು ನಿಜ. ಮುಂದಿನ ನಿರ್ಧಾರವನ್ನು ಜನವರಿಯಲ್ಲಿ ಪ್ರಕಟಿಸುತ್ತೇನೆ’ ಎಂದಿದ್ದರು.

ಪುನಃ ಚರ್ಚೆಗೆ:

ಜನವರಿ ತಿಂಗಳು ಆರಂಭವಾಗಿರುವುದರಿಂದ ಹಾಗೂ ಲೋಕಸಭೆ ಚುನಾವಣೆ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಮುನೇನಕೊಪ್ಪ ಅವರ ನಿರ್ಧಾರ ಏನಾಗಬಹುದು ಎಂದು ರಾಜಕೀಯ ವಲಯದಲ್ಲಿ ಚರ್ಚೆ ನಡೆದಿದೆ. ಮೂಲಗಳ ಪ್ರಕಾರ, ಕಾಂಗ್ರೆಸ್‌ನ ಹಿರಿಯ ನಾಯಕರು ಮುನೇನಕೊಪ್ಪ ಅವರನ್ನು ಪಕ್ಷಕ್ಕೆ ಸೆಳೆಯಲು ಪ್ರಯತ್ನ ನಡೆಸಿದ್ದಾರೆ. ಮುಖ್ಯವಾಗಿ ಧಾರವಾಡ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಸುವ ಇರಾದೆ ಹೊಂದಿದ್ದಾರೆ ಎನ್ನಲಾಗುತ್ತಿದೆ. 

ಜೋಶಿಗೆ ಎದುರಾಳಿ?:

ಪಂಚಮಸಾಲಿ ಲಿಂಗಾಯತ ಸಮುದಾಯದ ಶಂಕರ ಪಾಟೀಲ ಮುನೇನಕೊಪ್ಪ ಅವರು ಸತತ ನಾಲ್ಕು ಬಾರಿ ನವಲಗುಂದ ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿದಿದ್ದರು. ಎರಡು ಬಾರಿ ಜಯಗಳಿಸಿದ್ದರೆ, ಎರಡು ಬಾರಿ ಸೋಲು ಅನುಭವಿಸಿದ್ದಾರೆ. ಕಳೆದ ಬಿಜೆಪಿ ಸರ್ಕಾರದಲ್ಲಿ ಸಚಿವರಾಗಿ ಕಾರ್ಯನಿರ್ವಹಿಸಿದ್ದಾರೆ.

ಮತ್ತೊಂದೆಡೆ, ಧಾರವಾಡ ಲೋಕಸಭಾ ಕ್ಷೇತ್ರವನ್ನು ಗೆಲ್ಲಲೇಬೇಕು ಎಂದು ಕಾಂಗ್ರೆಸ್‌ ಮುಖಂಡರು ಠಳಾಯಿಸಿದ್ದಾರೆ. ಕ್ಷೇತ್ರದ ಹಾಲಿ ಸಂಸದ, ಕೇಂದ್ರ ಸಚಿವರೂ ಆಗಿರುವ ಬಿಜೆಪಿ ಪ್ರಲ್ಹಾದ ಜೋಶಿ ಅವರನ್ನು ಮಣಿಸಲು ಸೂಕ್ತ ಅಭ್ಯರ್ಥಿಯ ಹುಡುಕಾಟದಲ್ಲಿದ್ದಾರೆ. ಅವರ ಎದುರು ಮುನೇನಕೊಪ್ಪ ಅವರನ್ನು ಕಣಕ್ಕಿಳಿಸಿದರೆ ಹೇಗೆ ಎಂಬ ಲೆಕ್ಕಾಚಾರ ನಡೆದಿದೆ. ಅವರನ್ನು ಕರೆತರಲು ತೆರೆಮರೆಯಲ್ಲಿ ಪ್ರಯತ್ನವೂ ನಡೆದಿದೆ ಎನ್ನಲಾಗುತ್ತಿದೆ.

ಮುನೇನಕೊಪ್ಪ ಜೊತೆ ಸಮುದಾಯದ ಮುಖಂಡರು, ಕೆಲ ಮಠಾಧೀಶರು ಮಾತನಾಡಿದ್ದಾರೆ. ಲೋಕಸಭೆ ಚುನಾವಣೆ ಸ್ಪರ್ಧಿಸುವುದು ಹಾಗೂ ಕಾಂಗ್ರೆಸ್‌ ಸೇರ್ಪಡೆ ಬಗ್ಗೆ ಚರ್ಚಿಸಿದ್ದಾರೆ. ಆದರೆ, ಅವರ ನಿರ್ಧಾರ ನಿಗೂಢವಾಗಿದೆ.

‘ಹಿತೈಷಿಗಳ ಜತೆ ಚರ್ಚ’

‘ಕೆಲ ತಿಂಗಳಿನಿಂದ ರಾಜಕೀಯ ಚಟುವಟಿಕೆಗಳಿಂದ ದೂರವಿದ್ದೇನೆ. ಕೆಲ ಕೌಟುಂಬಿಕ ಕಾರಣಗಳಿಂದ ರಾಜಕೀಯದಲ್ಲಿ ಸಕ್ರಿಯವಾಗಿಲ್ಲ. ಈ ನಡುವೆ ಹಿತೈಷಿಗಳು ಹಾಗೂ ವಿವಿಧ ಮಠಾಧೀಶರ ಜೊತೆ ಚರ್ಚೆ ನಡೆಸಿದ್ದೇನೆ. ಅವರ ಸಲಹೆ ಪಡೆದಿದ್ದೇನೆ. ಇನ್ನೂ ಅಂತಿಮ ನಿರ್ಧಾರ ಕೈಗೊಂಡಿಲ್ಲ. ಮಕರ ಸಂಕ್ರಮಣ ಮುಗಿದ ನಂತರ ಅಥವಾ ಫೆಬ್ರುವರಿ 1ರಂದು ನನ್ನ ನಿರ್ಣಯ ಪ್ರಕಟಿಸುವೆ’ ಎಂದು ಶಂಕರ ಪಾಟೀಲ ಮುನೇನಕೊಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT