ಧಾರವಾಡ: ಡಿಸೆಂಬರ್ ತಿಂಗಳು ಕ್ರಿಶ್ಚಿಯನ್ ಸಮುದಾಯದವರಿಗೆ ಹೊಸಹಬ್ಬದ ಸಂಭ್ರಮವನ್ನು ತರುತ್ತದೆ. ಮಧ್ಯಪ್ರಾಚ್ಯದ ಬೆತ್ಲೆಹೆಮ್ನ ಮನೆಯೊಂದರ ಗೋದಲಿಯಲ್ಲಿ ಜನಿಸಿದ ಯೇಸು ವಿಶ್ವಕ್ಕೆ ಹೊಸ ಬೆಳಕು ನೀಡಿದ್ದನ್ನು ಕ್ರೈಸ್ತರು ಮನದುಂಬಿ ಹಾಡುವ ಮೂಲಕ ಸ್ಮರಿಸುತ್ತಾರೆ.
ಕ್ರಿಸ್ಮಸ್ ಹಬ್ಬ ಆಚರಣೆಗಿಂತ ಒಂದು ವಾರ ಮೊದಲೇ ಧರ್ಮಪ್ರಾಂತ ಸಭಾದ ಸಂಗೀತ ತಂಡವೊಂದು ವಾಹನ ಮಾಡಿಕೊಂಡು ಮನೆ ಮನೆಗೆ ತೆರಳಿ ಹಾಡನ್ನು ಹಾಡುವುದು ಒಂದು ವೈಶಿಷ್ಟ್ಯ. ಕ್ರಿಸ್ತನ ಸುವಾರ್ತೆಗಳನ್ನು ಮನೆ ಮನೆಗೆ ಮುಟ್ಟಿಸುವ ಸಲುವಾಗಿ ಸಂಗೀತ ಪ್ರತಿಯೊಬ್ಬ ಕ್ರಿಶ್ಚಿಯನ್ನರ ಮನೆಗೂ ಹೋಗಿ ಹಾಡುವುದನ್ನೇ ‘ಕ್ರಿಸ್ಮಸ್ ಕ್ಯಾರಲ್ಸ್’ ಎಂದು ಕರೆಯುತ್ತಾರೆ.
ಉದಾಹರಣೆಗೆ ಧಾರವಾಡದಲ್ಲಿ ಹಲವು ಸಭಾಗಳಿವೆ. ಹೆಬಿಕ್ ಮೆಮೊರಿಯಲ್ ಚರ್ಚ್ನ ಅಡಿಯಲ್ಲಿ ಹಲವು ಕುಟುಂಬಗಳು ಹಾಗೂ ಆಲ್ ಸೇಂಟ್ಸ್ ಚರ್ಚ್ನ ಸದಸ್ಯತ್ವ ಪಡೆದ ಕೆಲವು ಕುಟುಂಬಗಳ ಮನೆಯನ್ನು ಗುರುತಿಸಿ ಪ್ರತಿನಿತ್ಯ ಅವರ ಮನೆಗೆ ಹೋಗಿ ಕ್ರಿಸ್ತನ ಸುವಾರ್ತೆಯನ್ನು ಹೇಳುವುದು ಈ ತಂಡದ ಮುಖ್ಯ ಧ್ಯೇಯ.
ಸಂಜೆ 6 ಗಂಟೆಗೆ ಶುರುವಾಯಿತು ಎಂದರೆ ರಾತ್ರಿ ಎರಡು ಗಂಟೆಯವರೆಗೂ ಕ್ಯಾರಲ್ಸ್ ತಂಡದ ಕೆಲಸ ನಡೆದೇ ಇರುತ್ತದೆ.
ಈ ಕುರಿತು ಮಾತನಾಡಿದ ಕ್ಯಾರಲ್ಸ್ ತಂಡದ ಹಿರಿಯ ಸದಸ್ಯ ಮಾರ್ಟಿನ್ ಬೋರಗಾವಿ, ‘ಯೇಸು ಸ್ವಾಮಿಯ ಬಗ್ಗೆ ಮನೆ ಮನೆಗೆ ಪ್ರಚಾರ ಮಾಡುವ ಉದ್ದೇಶದಿಂದ ನಾವು ಸಂಗೀತ ತಂಡವನ್ನು ಕರೆದುಕೊಂಡು ನಮ್ಮ ಸಭಾದ ಮನೆಗಳಿಗೆ ಹೋಗುತ್ತೇವೆ. ಎಷ್ಟೋ ಕುಟುಂಬದವರು ಕರೆಯುತ್ತಾರೆ. ಕೆಲವರು ತಮ್ಮಷ್ಟಕ್ಕೇ ಇರುತ್ತಾರೆ. ಆದರೂ, ಅಂಥವರ ಮನೆ ಬಳಿ ತೆರಳಿ ಸುವಾರ್ತೆಗಳನ್ನು ಹಾಡುತ್ತೇವೆ. 24ರಂದು ಸಂಜೆಯ ವೇಳೆಗೆ ಎಲ್ಲ ಮನೆಗಳಿಗೂ ನಾವು ಭೇಟಿ ನೀಡಿರುತ್ತೇವೆ’ ಎಂದರು.
ಇಷ್ಟೇ ಅಲ್ಲದೇ, ಕ್ರಿಸ್ತನ ಜೀವನದ ಬಗ್ಗೆ ಹಲವಾರು ತಂಡಗಳು ಹಾಡುಗಳ ಜೊತೆಗೇ ರೂಪಕವನ್ನೂ ಮಾಡುತ್ತವೆ. ಕ್ರಿಸ್ಮಸ್ ಹಬ್ಬದ ಮುನ್ನಾದಿನ ಚರ್ಚ್ ಬಳಿ ಸೇರುವ ಜನರಿಗಾಗಿ ಈ ರೂಪಕವನ್ನು ಪ್ರದರ್ಶಿಸಲಾಗುತ್ತದೆ. ಪ್ರಮುಖ ಕ್ರಿಶ್ಚಿಯನ್ ಆಡಳಿತ ಮಂಡಳಿಯ ಶಾಲೆ ಕಾಲೇಜುಗಳು ಹಾಗೂ ಚರ್ಚ್ಗಳ ಮುಂದೆ ಆಕರ್ಷಕ ವಿದ್ಯುತ್ ದೀಪಾಲಂಕಾರದ ಮಧ್ಯೆಯೇ ಕ್ರಿಸ್ಮಸ್ ಕ್ಯಾರಲ್ಸ್ನಲ್ಲಿ ಹಾಡುಗಳು ಒಡಮೂಡುತ್ತವೆ. ದೇವಲೋಕದಿಂದ ಉಡುಗೊರೆಗಳನ್ನು ತರುವ ಸಾಂತಾಕ್ಲಾಸ್ ಪಾತ್ರ ಹಬ್ಬಕ್ಕೆ ಮತ್ತಷ್ಟು ರಂಗು ತರುತ್ತದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.