ಕನಕಪುರ: ಜಾನುವಾರುಗಳಿಗೆ ಗಂಭೀರ ಕಾಯಿಲೆಯಾಗಿ ಕಾಡುತ್ತಿರುವ ಕಾಲುಬಾಯಿ ಜ್ವರ ರೋಗ ಸಂಪೂರ್ಣ ತಡೆಗಟ್ಟಲು ಪಲ್ಸ್ ಪೋಲಿಯೊ ರೀತಿಯಲ್ಲಿ ಕಾರ್ಯಕ್ರಮ ರೂಪಿಸಿ ಲಸಿಕೆ ಹಾಕಲಾಗುತ್ತಿದೆ. ರೈತರು ಕಡ್ಡಾಯವಾಗಿ ಲಸಿಕೆ ಹಾಕಿಸಬೇಕು ಎಂದು ಪಶು ಇಲಾಖೆಯ ಉಪ ನಿರ್ದೇಶಕ ಡಾ. ಎಲ್. ವರದರಾಜು ಕುಮಾರ್ ಮನವಿ ಮಾಡಿದರು.
ತಾಲ್ಲೂಕಿನಲ್ಲಿ ನವೆಂಬರ್ 28ರಂದು ಆರಂಭವಾಗಿ ಫೆ.16ರ ತನಕ ನಡೆಯುತ್ತಿರುವ ಕಾಲು ಬಾಯಿ ಜ್ವರ ಲಸಿಕೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ರೋಗ ತಡೆಗಟ್ಟಬೇಕಾದರೆ ಎಲ್ಲ ರಾಸುಗಳಿಗೂ ಕಡ್ಡಾಯವಾಗಿ ಲಸಿಕೆ ಹಾಕಿಸಬೇಕು ಎಂದರು.
ತಾಲ್ಲೂಕು ಮುಖ್ಯ ಪಶು ವೈದ್ಯಾಧಿಕಾರಿ ಡಾ.ಎಸ್. ನಿಂಗರಾಜಯ್ಯ ಮಾತನಾಡಿ, ಪಶು ವೈದ್ಯಾಧಿಕಾರಿಗಳು ಮತ್ತು ಸಿಬ್ಬಂದಿ ಒಳಗೊಂಡ 10 ತಂಡಗಳು ತಾಲ್ಲೂಕಿನಾದ್ಯಂತ ಲಸಿಕಾ ಕಾರ್ಯಕ್ರಮ ನಡೆಸಿಕೊಡುತ್ತಿವೆ. ಪ್ರತಿ ಹಳ್ಳಿಗಳಿಗೂ ಈ ತಂಡ ಬಂದು ನಿರಂತರವಾಗಿ ಲಸಿಕೆ ಹಾಕುತ್ತಿದೆ ಎಂದರು.
ರೈತರು ಎಲ್ಲ ಕೆಲಸಗಳನ್ನು ಬದಿಗೊತ್ತಿ ಆ ಸಂದರ್ಭದಲ್ಲಿ ರಾಸುಗಳಿಗೆ ಲಸಿಕೆ ಹಾಕಿಸಬೇಕು. ಲಸಿಕೆ ಹಾಕಿರುವ ಬಗ್ಗೆ ತಂಡಕ್ಕೆ ಸರಿಯಾದ ಮಾಹಿತಿ ನೀಡಿ ಕಾರ್ಯಕ್ರಮ ಯಶಸ್ವಿಗೆ ಸಹಕರಿಸುವಂತೆ ಮನವಿ ಮಾಡಿದರು.