ನರಗುಂದ: ಮಹದಾಯಿ ಅಧಿಸೂಚನೆಗೆ ಕೇಂದ್ರ ಸರ್ಕಾರ ವಿಳಂಬ ನೀತಿ ಅನುಸರಿಸುತ್ತಿದೆ ಎಂಬುದನ್ನು ಖಂಡಿಸಿ ರೈತ ಸೇನೆ ರಾಜ್ಯ ಘಟಕವು ಮಂಗಳವಾರ ಇಲ್ಲಿ ಕರೆ ನೀಡಿದ್ದ ನರಗುಂದ ಬಂದ್ಗೆ ವ್ಯಾಪಕ ಬೆಂಬಲ ವ್ಯಕ್ತವಾಯಿತು.
ಬಂದ್ ಹಿನ್ನೆಲೆಯಲ್ಲಿ ಸರ್ಕಾರಿ ಬಸ್ಗಳು ರಸ್ತೆಗಿಳಿಯಲಿಲ್ಲ. ಬೆಳಿಗ್ಗೆ 6ರಿಂದ ಸಂಜೆ 4ರವರೆಗೆ ಬಸ್ ಸಂಚಾರ ಸಂಪೂರ್ಣ ಸ್ಥಗಿತಗೊಂಡಿ ದ್ದರಿಂದ ಪ್ರಯಾಣಿಕರು ಪರದಾಡಿದರು. ವಿದ್ಯಾರ್ಥಿಗಳು ತೀವ್ರ ತೊಂದರೆ ಅನು ಭವಿಸಿದರು. ಹುಬ್ಬಳ್ಳಿ- ವಿಜಯಪುರ ರಾಷ್ಟ್ರೀಯ ಹೆದ್ದಾರಿ 10 ಗಂಟೆಗಳ ಕಾಲ ಸಂಪೂರ್ಣ ಬಂದ್ ಆಗಿತ್ತು.
ಪ್ರತಿ ಬಾರಿ ನರಗುಂದ ಬಂದ್ ನಡೆದಾಗ ರೈತರು, ಹೋರಾಟಗಾರರು ಬಲವಂತವಾಗಿ ಬಸ್ ಸಂಚಾರ ಸ್ಥಗಿತಗೊಳಿಸಿ, ಅಂಗಡಿ–ಮುಂಗಟ್ಟುಗಳ ಬಾಗಿಲು ಹಾಕಿಸುತ್ತಿದ್ದರು. ಆದರೆ, ಈ ಬಾರಿ ಪೊಲೀಸರೇ ಮುಂದೆ ನಿಂತು ಹೋರಾಟಗಾರರ ಕೆಲಸವನ್ನು ಮಾಡಿದರು. ತೆರೆದ ಅಂಗಡಿಗಳನ್ನೂ ಪೊಲೀಸರು ಬಂದ್ ಮಾಡಿಸುತ್ತಿದ್ದ ದೃಶ್ಯ ಪಟ್ಟಣದಲ್ಲಿ ಕಂಡುಬಂತು.
ಶಾಲಾ, ಕಾಲೇಜುಗಳಿಗೆ ರಜೆ ಇರ ಲಿಲ್ಲ. ಎಂದಿನಂತೆ ಬೆಳಿಗ್ಗೆ ನಗರಕ್ಕೆ ಬಂದ ವಿದ್ಯಾರ್ಥಿಗಳು ಬಸ್ ಇಲ್ಲದೇ 3 ಕಿ.ಮೀ ನಡೆದು ಕಾಲೇಜು ತಲುಪಿದರು. ವಿದ್ಯಾರ್ಥಿಗಳ ಕೊರತೆಯ ನಡುವೆಯೂ ತರಗತಿಗಳು ಎಂದಿನಂತೆ ನಡೆದವು.
ಹಸಿರುಮಯ:ಈ ಬಾರಿ ಮಹದಾಯಿ ಹೋರಾಟ ವೇದಿಕೆಯು, ಮಹಿಳಾ ಸದಸ್ಯೆಯರಿಗೆ ಹಸಿರು ಸೀರೆ ಸಮವಸ್ತ್ರ ವಾಗಿ ನೀಡಿತ್ತು. ಹಸಿರು ಸೀರೆ ಉಟ್ಟು ಬಂದಿದ್ದ ನೂರಾರು ಸಂಖ್ಯೆಯ ಮಹಿಳೆ ಯರು ಪಟ್ಟಣದಲ್ಲಿ ಜಮಾಯಿಸಿ, ಉರಿ ಬಿಸಿಲು ಲೆಕ್ಕಿಸದೆ ಮೆರವಣಿಗೆಯಲ್ಲಿ ಭಾಗವಹಿಸಿದರು. ರೈತರು ಹಸಿರು ಶಾಲು ಬೀಸಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.