ಮುಂಡರಗಿ: ಹಾವೇರಿ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರು ಗೆಲುವು ಸಾಧಿಸಿದ ಪ್ರಯುಕ್ತ ಪಟ್ಟಣದ ಶಾಮರಾಜ ರಾಟಿ ಎಂಬ ರೈತರೊಬ್ಬರು ಬುಧವಾರ ಪಟ್ಟಣದ ಕನಕಪ್ಪ ಗುಡ್ಡದ ಮೇಲಿರುವ ಲಕ್ಷ್ಮಿಕನಕನರಸಿಂಹ ದೇವರಿಗೆ 101 ತೆಂಗಿನಕಾಯಿ ಒಡೆದು ಹರಕೆ ತೀರಿಸಿದರು.
ಪಟ್ಟಣದ ರೈತ ಶಾಮರಾಜ ರಾಟಿ ಅವರು ಲೋಕಸಭಾ ಚುನಾವಣೆ ಘೋಷಣೆಯಾದ ತಕ್ಷಣ ಹಾವೇರಿ ಲೋಕಸಭಾ ಕ್ಷೆತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ, ಪ್ರಧಾನಿ ನರೇಂದ್ರ ಮೋದಿ ಅವರು ಚುನಾವಣೆಯಲ್ಲಿ ಗೆಲುವು ಸಾಧಿಸಬೇಕು ಮತ್ತು ಪುನಃ ಕೇಂದ್ರದಲ್ಲಿ ಎನ್ಡಿಎ ಸರ್ಕಾರ ಆಡಳಿತ ನಡೆಸುವಂತಾಗಬೇಕು ಎಂದು ದೇವರಲ್ಲಿ ಬೇಡಿಕೊಂಡಿದ್ದರು. ಬೇಡಿಕೆ ಈಡೇರಿದರೆ 101 ತೆಂಗಿನಕಾಯಿ ಒಡೆಯುವುದಾಗಿ ಹರಕೆ ಹೊತ್ತಿದ್ದರು. ಅವರೀರ್ವರು ಗೆಲುವು ಸಾಧಿಸಿದ ಕಾರಣ ಹರಕೆ ತೀರಿಸಿದರು.
'ಕಳೆದ ಹತ್ತು ವರ್ಷಗಳಿಂದ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಆಡಳಿತ ಕಂಡು ದೇಶದ ಜನತೆ ಪುನಃ ಅವರನ್ನು ಗೆಲ್ಲಿಸಿದ್ದಾರೆ. ಮತ್ತೆ ದೇಶದ ಚುಕ್ಕಾಣಿ ಹಿಡಿದು ಜನರ ಇಚ್ಛೆಯಂತೆ ಮೋದಿ ಆಡಳಿತ ನಡೆಸಲಿದ್ದಾರೆ. ಮೋದಿ ಅವರು ದೇಶದ ರೈತರಿಗೆ ಒಳಿತಾಗುವ ಶಾಶ್ವತ ಯೋಜನಗಳನ್ನು ಜಾರಿಗೆ ತರಬೇಕು. ಬೆಳೆಹಾನಿ ಹಾಗೂ ಬೆಳೆ ವಿಮೆಗಳನ್ನು ನಿಯಮಿತವಾಗಿ ರೈತರಿಗೆ ತಲುಪಿಸಬೇಕು’ ಎಂದು ಮನವಿ ಮಾಡಿಕೊಂಡರು.