ಗದಗ: ಆ.21ರಿಂದ ಸೆಪ್ಟೆಂಬರ್ 2ರ ವರೆಗೆ ನಡೆಯಲಿರುವ ದ್ವಿತೀಯ ಪಿಯುಸಿ ಎರಡನೇ ಪೂರಕ ಪರೀಕ್ಷೆಗಳಿಗೆ ಹಾಜರಾಗುವ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಪರೀಕ್ಷಾ ದಿನಗಳಂದು ಸಾರಿಗೆ ಸಂಸ್ಥೆಯ ಬಸ್ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಲಾಗಿದೆ.
ದ್ವಿತೀಯ ಪಿಯುಸಿ ಎರಡನೇ ಪೂರಕ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳು ನಿರ್ವಾಹಕರಿಗೆ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆಯ ಪ್ರವೇಶಪತ್ರ ತೋರಿಸಿ ತಮ್ಮ ವಾಸಸ್ಥಳದಿಂದ ನಿಯೋಜಿತ ಪರೀಕ್ಷಾ ಕೇಂದ್ರಗಳಿಗೆ ಹೋಗಲು ಹಾಗೂ ಪರೀಕ್ಷೆ ಮುಗಿಸಿ ವಾಸಸ್ಥಳಕ್ಕೆ ಹಿಂದಿರುಗಲು ಸಂಸ್ಥೆಯ ನಗರ, ಉಪನಗರ, ಸಾಮಾನ್ಯ ಹಾಗೂ ವೇಗದೂತ ಬಸ್ಗಳಲ್ಲಿ ಉಚಿತವಾಗಿ ಪ್ರಯಾಣ ಮಾಡಬಹುದಾಗಿದೆ ಎಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಪ್ರಕಟಣೆ ತಿಳಿಸಿದೆ.
ಕಲಿಸಿದ ಗುರುವಿಗೆ ಅಳುತ್ತ ಬೀಳ್ಕೊಟ್ಟ ಮಕ್ಕಳು
ಲಕ್ಷ್ಮೇಶ್ವರ: ಅದೊಂದು ಅಪರೂಪದ ಪ್ರಸಂಗ. ಅಲ್ಲಿ ದುಃಖ ಮನೆ ಮಾಡಿತ್ತು. ಎಲ್ಲರ ಕಣ್ಣುಗಳಲ್ಲಿ ಕಣ್ಣೀರು ತುಂಬಿತ್ತು. ಹೌದು. ಈ ದೃಶ್ಯ ಕಂಡು ಬಂದಿದ್ದು ತಾಲ್ಲೂಕಿನ ಬಾಲೆಹೊಸೂರು ಗ್ರಾಮದ ಗುರು ದಿಂಗಾಲೇಶ್ವರ ಪ್ರೌಢ ಶಾಲೆಯಲ್ಲಿ. ಕಳೆದ ಹದಿಮೂರು ವರ್ಷಗಳಿಂದ ಶಾಲೆಯಲ್ಲಿ ದೈಹಿಕ ಶಿಕ್ಷಕರಾಗಿದ್ದ ಮಹಾವೀರ ಸವದಿ ಅವರು ಬೇರೆಡೆ ವರ್ಗವಾಗಿ ಹೋಗುತ್ತಿದ್ದು ಅವರಿಗಾಗಿ ಗುರುವಾರ ಬೀಳ್ಕೊಡುಗೆ ಸಮಾರಂಭ ಗ್ರಾಮದ ವತಿಯಿಂದ ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಅವರ ಶಿಷ್ಯರು ‘ಗೋಳೊ’ ಎಂದು ಅಳುತ್ತಿದ್ದುದು ಕಂಡು ಬಂದಿತು. ಮಕ್ಕಳೊಂದಿಗೆ ಶಿಕ್ಷಕ ಮಹಾವೀರ ಸವದಿ ಕೂಡ ಕಣ್ಣೀರು ಹಾಕಿದರು. ನಂತರ ಮಾತನಾಡಿದ ಅವರು ‘ಹದಿಮೂರು ವರ್ಷಗಳಿಂದ ನೂರಾರು ಮಕ್ಕಳಿಗೆ ಆಟೋಟಗಳನ್ನು ಕಲಿಸಿದ ತೃಪ್ತಿ ಇದೆ. ಊರವರ ಸಹಕಾರ ಎಂದಿಗೂ ಮರೆಯುವಂತಿಲ್ಲ. ಗ್ರಾಮೀಣ ಭಾಗದಲ್ಲಿ ಪ್ರತಿಭಾವಂತ ಮಕ್ಕಳು ಇರುತ್ತಾರೆ ಎಂಬುದಕ್ಕೆ ಬಾಲೆಹೊಸೂರು ಗ್ರಾಮ ಸಾಕ್ಷಿಯಾಗಿದೆ. ಇಲ್ಲಿಂದ ಹೋಗುವ ಮನಸ್ಸು ಇರದಿದ್ದರೂ ಸಹ ಇಲಾಖೆ ನಿಯಮ ಪಾಲಿಸಲೇಬೇಕು. ಮಕ್ಕಳು ತಮ್ಮ ಶಿಕ್ಷಣದತ್ತ ಹೆಚ್ಚಿನ ಗಮನ ಹರಿಸಬೇಕು’ ಎಂದು ಹೇಳಿದರು. ನಾಗಯ್ಯ ಮಠಪತಿ ವಿರೂಪಾಕ್ಷಪ್ಪ ಮರಳಿಹಳ್ಳಿ ಪರಶುರಾಮ ಮೈಲಾರಿ ಸಿದ್ದಪ್ಪ ನೆನಗನಹಳ್ಳಿ ಹನಮಂತಪ್ಪ ಬಂಡಿ ನಿಂಗಪ್ಪ ಗುಡ್ಡಣ್ಣವರ ಲೋಕೇಶ್ ಜಾಲವಡಗಿ ಕೇಶವ ಕಟ್ಟಿಮನಿ ಮುಖ್ಯ ಶಿಕ್ಷಕ ಎ.ವಿ. ಅಡಿವೇರ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.