ಶಿರಹಟ್ಟಿ: ಸ್ವಾತಂತ್ರ್ಯ ಹೋರಾಟಗಾರರ ಗ್ರಾಮವೆಂದೇ ಪ್ರಸಿದ್ಧಿ ಪಡೆದ ತಾಲ್ಲೂಕಿನ ಕೊಗನೂರು ಗ್ರಾಮಸ್ಥರು ಪ್ರಸ್ತುತ ಲೋಕಸಭೆ ಚುನಾವಣೆಯಲ್ಲಿ ಮತದಾನ ಬಹಿಷ್ಕಾರ ಮಾಡುತ್ತೇವೆ ಎಂದು ತಹಶೀಲ್ದಾರ್ ಮೂಲಕ ಜಿಲ್ಲಾಧಿಕಾರಿಗಳಿಗೆ ಮಂಗಳವಾರ ಮನವಿ ಸಲ್ಲಿಸಿದರು.
‘ನ್ಯಾಯ ಸಿಕ್ಕಿಲ್ಲ ಮತ ಹಾಕಲ್ಲ’ ಎಂಬ ವಾಕ್ಯದಡಿಯಲ್ಲಿ ಪ್ರಸ್ತುತ ಲೋಕಸಭಾ ಸಾರ್ವತ್ರಿಕ ಲೋಕಸಭಾ ಚುನಾವಣೆಯ ಮತದಾನ ಬಹಿಷ್ಕಾರ ಮಾಡಲು ನಿರ್ಧರಿಸಿದ್ದೇವೆ. ಗ್ರಾಮಸ್ಥರಿಗೆ ಇಸ್ವತ್ತು ನಮೂನೆ 9 ಹಾಗೂ 11ಎ ಗ್ರಾಮಠಾಣಾ ಪರಿವರ್ತಿಸಿ ಹೊಸಗಾವಠಾಣಾ ಸಮಸ್ಯೆಯನ್ನು ಬಗೆಹರಿಸಲು ಹಲವಾರು ದಿನಗಳಿಂದ ಮನವಿ ಸಲ್ಲಿಸುತ್ತಾ ಬಂದಿದ್ದೇವೆ. ಅಲ್ಲದೇ ತಹಶೀಲ್ದಾರ್ ಗ್ರಾಮವಾಸ್ತವ್ಯ ಸೇರಿದಂತೆ ಹಲವಾರು ಬಾರಿ ಮನವಿ ಸಲ್ಲಿಸಿದರೂ ಯಾರೊಬ್ಬ ಅಧಿಕಾರಿಗಳು ಇದಕ್ಕೆ ಸ್ಪಂದನೆ ನೀಡದೆ ಇರುವುದು ಗ್ರಾಮದ ದೌರ್ಭಾಗ್ಯ’ ಎಂದು ಕೊಗನೂರಿನ ಗ್ರಾಮಸ್ಥರು ಮನವಿಯಲ್ಲಿ ತಿಳಿಸಿದ್ದಾರೆ.
‘ಸ್ವಾತಂತ್ರ್ಯ ಹೋರಾಟಗಾರರ ಗ್ರಾಮಕ್ಕೆ ಮೂಲ ಸೌಲಭ್ಯಗಳನ್ನು ಕಲ್ಲಿಸಿ ಆದರ್ಶ ಗ್ರಾಮವನ್ನಾಗಿ ಮಾಡಲು ಸಹ ಮನವಿ ಸಲ್ಲಿಸಲಾಗಿದೆ. ಈ ಭಾಗದ ಸ್ವಾತಂತ್ರ್ಯ ಹೋರಾಟಗಾರರ ಗ್ರಾಮ ಎಂಬುದು ಕೇವಲ ದಾಖಲೆಗಳಲ್ಲಿ ಉಳಿಯುತ್ತಿದೆ ಹೊರತು ಅಭಿವೃದ್ಧಿಯಲ್ಲಿ ಅಲ್ಲ. ಇಂತಹ ಮುಖ್ಯ ಕೆಲಸಗಳನ್ನು ಗ್ರಾಮಕ್ಕೆ ಒದಗಿಸಿದ ಜನಪ್ರತಿನಿಧಿಗಳಿಂದ ಏನೂ ಪ್ರಯೋಜನವಿಲ್ಲ. ಆದ್ದರಿಂದ ಬೇಸರಗೊಂಡ ನಾವೆಲ್ಲಾ ಗ್ರಾಮಸ್ಥರು ಈ ಬಾರಿ ನಡೆಯುವ ಲೋಕಸಭಾ ಚುನಾವಣೆ ಮತದಾನ ಬಹಿಷ್ಕಾರ ಮಾಡುತ್ತಿದ್ದೇವೆ’ ಎಂದರು.
ಈ ಸಂದರ್ಭದಲ್ಲಿ ರಾಖೇಶ ಬೂದಿಹಾಳ, ರಮೇಶ್ ಕೂರಗುಂದ, ಮುತ್ತು ತಳವಾರ್, ಶರತಗೌಡ ಬಸಾಪುರ್ ಇದ್ದರು.