ಡಂಬಳ: ಆಧುನಿಕತೆ ಭರಾಟೆಯಲ್ಲಿ ಕಲೆಗಳು ಅಳಿವಿನ ಅಂಚಿಗೆ ತಲುಪಿದ್ದರೂ, ಗ್ರಾಮೀಣ ಪ್ರದೇಶದಲ್ಲಿ ಉಸಿರಾಡುತ್ತಿವೆ. ಇಲ್ಲೊಬ್ಬರು ಅಂಗವಿಕಲರಾಗಿದ್ದರೂ ಜಾನಪದ ಕಲೆಯನ್ನೇ ತನ್ನ ಉಸಿರಾಗಿಸಿ ಕೊಂಡು, ಜನರಿಗೆ ಆ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ.
ಡಂಬಳದ ಕಲಾವಿದ ಹುಲಗಪ್ಪ ಎಸ್. ಜೋಂಡಿ ಬಾಲ್ಯದಿಂದಲೀ ಜಾನ ಪದ ಕಲೆ, ಡೊಳ್ಳು, ಭಜನೆ ಪದ, ದೊಡ್ಡಾಟ ವಿಶೇಷ ಆಸಕ್ತಿ ಹೊಂದಿದ್ದಾರೆ. 7ನೇ ತರಗತಿಯವರಿಗೆ ಮಾತ್ರ ಶಿಕ್ಷಣ ಪಡೆದಿದ್ದರೂ ಜಾನಪದ ಕಲೆಯಲ್ಲಿ ಪಾಂಡಿತ್ಯವನ್ನೇ ಸಾಧಿಸಿ, ಸ್ವಾವಲಂಬಿ ಬದುಕಿನ ಮೂಲಕ ನಿರುದ್ಯೋಗಿಗಳಿಗೆ ಮಾದರಿಯಾಗಿದ್ದಾರೆ.
ಹುಲಗಪ್ಪ ಅವರು ಶ್ರೀಮಾಳಿಂಗ ರಾಯನ(ಡೊಳ್ಳಿನ) ಸಂಘದ ಸಹಕಾರ ದಲ್ಲಿ ಡೊಳ್ಳಿನ ಪದಗಳ ಆಡಿಯೊ ಸಿಡಿ ಹೊರತಂದಿದ್ದಾರೆ. ಯುವಕರ ತಂಡ ಕಟ್ಟಿಕೊಂಡು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಜಾನಪದ ಕಲೆಗಳನ್ನು ಪ್ರದರ್ಶಿಸಿ, ಹಲವಾರು ಪ್ರಶಸ್ತಿಗಳನ್ನು ಗಳಿಸಿದ್ದಾರೆ. ಸ್ಪರ್ಧೆಯಲ್ಲಿ ಸಿಗುವ ಬಹುಮಾನದ ಹಣವನ್ನು ಮಾಳಿಂಗ ರಾಯನ ದೇವಸ್ಥಾನದ ಜೀರ್ಣೋದ್ಧಾರ ಮತ್ತು ಗೋಪುರ ನಿರ್ಮಾಣಕ್ಕೆ ನೀಡಿದ್ದಾರೆ. ಕೋವಿಡ್ ಸಂಕಷ್ಟದ ಸಮಯದಲ್ಲಿ ತಾವೇ ಸಿದ್ಧಪಡಿಸಿದ್ದ 500ಕ್ಕೂ ಹೆಚ್ಚು ಮುಖಗವಸನ್ನು ಉಚಿತವಾಗಿ ಸಾರ್ವಜನಿಕರಿಗೆ ನೀಡಿದ್ದಾರೆ.
ಕೊರೊನಾ ಜಾಗೃತಿ ಮೂಡಿಸಲು ಜಾನಪದ ಹಾಡುಗಳನ್ನು ಕಟ್ಟಿ, ಸಾಮಾಜಿಕ ಜಾಲತಾಣದಲ್ಲಿ ಪ್ರಸಾರ ಮಾಡಿದ್ದರು. ಪ್ರಕೃತಿ, ಶಿಕ್ಷಣ, ಬರಗಾಲ, ಕಳಸ–ಬಂಡೂರಿ ಹೋರಾಟ ಮುಂತಾದ ವಿಷಯಗಳ ಕುರಿತಾಗಿಯೂ ಜಾನಪದ ಹಾಡುಗಳನ್ನು ಹಾಡಿದ್ದಾರೆ.
‘ಜಾನಪದ ಕಲೆಯ ಬಗ್ಗೆ ಪ್ರೀತಿ, ಆಸಕ್ತಿ ಮೂಡಲು ಈ ಭಾಗದ ಖ್ಯಾತ ಕಲಾ ವಿದ ನಿಂಗಪ್ಪ ಎಚ್. ಗುಡ್ಡದ ಅವರೇ ಪ್ರೇರಣೆ. ಟೇಲರ್ ವೃತ್ತಿಯೊಂದಿಗೆ ಸ್ವಂತ ಬಟ್ಟೆ ಅಂಗಡಿ ವ್ಯಾಪಾರ ಮಾಡುತ್ತಿದ್ದೇನೆ. ಜಾನ ಪದ ಕಲೆಯನ್ನು ಉಳಿಸಿ– ಬೆಳೆಸುವಲ್ಲಿ ಅಳಿಲು ಸೇವೆ ಮಾಡು ತ್ತಿದ್ದೇನೆ. ಇದಕ್ಕೆ ಪತ್ನಿ ಸುಜಾತಾ ಅವರ ಸಹಕಾರ ಮುಖ್ಯವಾಗಿದೆ’ ಎನ್ನುತ್ತಾರೆ ಹುಲಗಪ್ಪ.
‘ಜಾನಪದ ಕಲೆಗಳು ಕಣ್ಮರೆಯಾಗುತ್ತಿವೆ. ಜನರ ಜೀವನ ಶೈಲಿ ಬದಲಾಗುತ್ತಿದೆ. ಬಡತನದಲ್ಲಿ ಬೆಳೆದಿರುವ, ಜಾನಪದವನ್ನೇ ಜೀವನದ ಅವಿಭಾಜ್ಯ ಅಂಗವೆಂದು ತಿಳಿದ ಹುಲಗಪ್ಪ ಜೋಂಡಿ ಅವರ ಸಾಧನೆ, ಪ್ರತಿಭೆಯನ್ನು ಸರ್ಕಾರ ಗುರುತಿಸಬೇಕು’ ಎಂದು ಗ್ರಾಮದ ಮುಖಂಡ ಗೋಣಿಬಸಪ್ಪ ಎಸ್. ಕೊರ್ಲಹಳ್ಳಿ ಹೇಳಿದರು.