ಗದಗ: ಕೊರೊನಾ ಸೋಂಕಿನಿಂದ ಇಲ್ಲಿನ ಆಯುಷ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಹಿಳೆ (ರೋಗಿ ಸಂಖ್ಯೆ 304) ಸಂಪೂರ್ಣ ಗುಣಮುಖರಾಗಿದ್ದು, ಶುಕ್ರವಾರ ಅವರಿಗೆ ಜಿಲ್ಲಾಡಳಿತದಿಂದ ಹೃದಯಸ್ಪರ್ಶಿ ಬೀಳ್ಕೊಡುಗೆ ನೀಡಲಾಯಿತು.
ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ, ಸಿ.ಇ.ಒ ಡಾ.ಆನಂದ ಕೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ ಎನ್, ಡಿಎಚ್ಒ ಡಾ. ಸತೀಶ ಬಸರಿಗಡದ, ಜಿಮ್ಸ್ ನಿರ್ದೇಶಕ ಡಾ.ಪಿ.ಎಸ್.ಭೂಸರೆಡ್ಡಿ, ಜಿಲ್ಲಾ ಶಸ್ತ್ರ ಚಿಕಿತ್ಸಕ ಬಿ.ಸಿ.ಕರಿಗೌಡರ, ವೈದ್ಯರು, ಸಿಬ್ಬಂದಿ ಚಪ್ಪಾಳೆ ತಟ್ಟಿ ಮಹಿಳೆಯನ್ನು ಬೀಳ್ಕೊಟ್ಟರು.
ಬೆಟಗೇರಿಯ ರೇಷ್ಮೆ ಸೀರೆ, ಮಾಸ್ಕ್, ಸ್ಯಾನಿಟೈಸರ್ ಮತ್ತು ಒಂದು ತಿಂಗಳಿಗೆ ಆಗುವಷ್ಟು ಆಹಾರ ಧಾನ್ಯ, ಅಗತ್ಯ ವಸ್ತುಗಳನ್ನು ಒಳಗೊಂಡ ಕಿಟ್ ಅನ್ನು ಅವರಿಗೆ ನೀಡಲಾಯಿತು. ಮಹಿಳೆ ಎಲ್ಲರಿಗೂ ಕೈಮುಗಿದು ಕೃತಜ್ಞತೆ ಸಲ್ಲಿಸಿದರು.