ಮುಂಡರಗಿ: ಹರಿಹರದ ವೀರಶೈವ ಪಂಚಮಸಾಲಿ ಪೀಠದ ಹರಜಾತ್ರೆಯು 23 ಹಾಗೂ 24ರಂದು ಜರುಗಲಿದೆ. ಜಾತ್ರಾ ಮಹೋತ್ಸವದ ಅಂಗವಾಗಿ 24ರಂದು ಉದ್ಯೋಗ ಮೇಳ ಹಮ್ಮಿಕೊಳ್ಳಲಾಗಿದೆ. ವಿದ್ಯಾವಂತ ನಿರುದ್ಯೋಗಿ ಯುವಕರು ಉದ್ಯೋಗ ಮೇಳದ ಸದುಪಯೋಗ ಪಡೆದುಕೊಳ್ಳಬೇಕು ಎಂದು ವೀರಶೈವ ಲಿಂಗಾಯತ ಪಂಚಮಸಾಲಿ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಎಸ್.ವಿ.ಪಾಟೀಲ ತಿಳಿಸಿದರು.
ಪಟ್ಟಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ತಾಲ್ಲೂಕು ಪಂಚಮಸಾಲಿ ಸಮಾಜದ ಸಭೆಯಲ್ಲಿ ಹರಿಹರ ಪೀಠದ ಹರಜಾತ್ರೆ ಹಾಗೂ ಉದ್ಯೋಗ ಮೇಳದ ಕರಪತ್ರಗಳನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಹರಿಹರ ಪೀಠವು ಸದಾ ಸಾಮರಸ್ಯವನ್ನು ಬಯಸುತ್ತದೆ. ಈ ಕಾರಣದಿಂದ ಹರಜಾತ್ರೆ ಹಾಗೂ ಉದ್ಯೋಗ ಮೇಳವು ಕೇವಲ ಪಂಚಮಸಾಲಿಗಳಿಗೆ ಮಾತ್ರ ಸಿಮಿತವಾಗಿಲ್ಲ. ಸಮಾಜದ ಎಲ್ಲ ಜಾತಿ ಹಾಗೂ ಎಲ್ಲ ಧರ್ಮಗಳ ಜನ ಉದ್ಯೋಗ ಮೇಳದಲ್ಲಿ ಮುಕ್ತವಾಗಿ ಪಾಲ್ಗೊಳ್ಳಬಹುದು ಎಂದು ಮಾಹಿತಿ ನೀಡಿದರು.
ಪಂಚಮಸಾಲಿ ಸಮಾಜದ ಯುವ ಮುಖಂಡ ಹಾಗೂ ಉದ್ಯಮಿ ರಜನೀಕಾಂತ ದೇಸಾಯಿ ಮಾತನಾಡಿ, ದೇಶ ಹಾಗೂ ರಾಜ್ಯದ 100ಕ್ಕೂ ಹೆಚ್ಚು ವಿವಿಧ ಕಂಪನಿಗಳು ಉದ್ಯೋಗ ಮೇಳದಲ್ಲಿ ಭಾಗವಹಿಸಲಿವೆ ಎಂದು ತಿಳಿಸಿದರು.
ಹೊಸ ಶಿಕ್ಷಣ ನೀತಿ, ಆಧುನಿಕ ಕೃಷಿ ಪದ್ಧತಿ, ಗ್ರಂಥ ಬಿಡುಗಡೆ ಹಾಗೂ ಗ್ರಂಥ ಸಂವಾದವನ್ನು ಜಾತ್ರೆಯಲ್ಲಿ ಹಮ್ಮಿಕೊಳ್ಳಲಾಗಿದೆ. ಎರಡು ದಿನಗಳ ಕಾಲ ನಡೆಯುವ ಅದ್ಧೂರಿ ಜಾತ್ರೆಯಲ್ಲಿ ಎಲ್ಲ ಜನರು ಭಾಗವಹಿಸಿ ಜಾತ್ರೆಯನ್ನು ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿಕೊಂಡರು. ನಂತರ ಕಾರ್ಯಕರ್ತರು ಹರಜಾತ್ರೆ ಹಾಗೂ ಉದ್ಯೋಗ ಮೇಳದ ಕರಪತ್ರಗಳನ್ನು ಬಿಡುಗಡೆಗೊಳಿಸಿದರು.