ಗದಗ: ‘ಕಳಸಾ ಬಂಡೂರಿ ಯೋಜನೆ ಜಾರಿಗೆ ಸಂಬಂಧಿಸಿದಂತೆ ಕೇಂದ್ರ ಪರಿಸರ ಮತ್ತು ಅರಣ್ಯ ಇಲಾಖೆ ನೀಡಿದ್ದ ಅನುಮತಿ ಆದೇಶವನ್ನು ಅಮಾನತ್ತಿನಲ್ಲಿ ಇಟ್ಟು ಕೇಂದ್ರ ಸರ್ಕಾರ ಆದೇಶ ಹೊರಡಿಸಿರುವುದು ರಾಜ್ಯಕ್ಕೆ ಆಘಾತ ತಂದಿದೆ’ ಎಂದು ಶಾಸಕ ಎಚ್.ಕೆ ಪಾಟೀಲ ಟ್ವೀಟ್ ಮಾಡಿದ್ದಾರೆ.
‘ಕಳಸಾ– ಬಂಡೂರಿಗೆ ಕೇಂದ್ರ ಸರ್ಕಾರ 17.10.2019 ರಂದು ನೀಡಿದ್ದ ಮಂಜೂರಾತಿಯನ್ನು ಮತ್ತೆ ತಡೆಹಿಡಿಯಲಾಗಿದೆ. ಕೇಂದ್ರದ ಕರ್ನಾಟಕದ ಸಚಿವರೇ ಎಲ್ಲಿದ್ದೀರಿ? ಕರ್ನಾಟಕಕ್ಕೆ ಆಗಿರುವ ಅನ್ಯಾಯ ತಪ್ಪಿಸಿ, ಮುಖ್ಯಮಂತ್ರಿಗಳೇ ಗಂಭೀರವಾದ ಹೆಜ್ಜೆಯಿಡಿ’ಎಂದು ಅವರು ಆಗ್ರಹಿಸಿದ್ದಾರೆ.
‘ರಾಜ್ಯದ ಹಿತದೃಷ್ಠಿಯಿಂದ ಪ್ರತಿಭಟನೆಯ ಸ್ವರೂಪ ನಿರ್ಧರಿಸಲು ಹಾಗೂ ನ್ಯಾಯ ಪಡೆದುಕೊಳ್ಳಲು ಸರ್ವಪಕ್ಷಗಳ ಜತೆ ಸಭೆ ನಡೆಸುವುದು ವಿವೇಕಯುತ’ ಎಂದೂ ಎಚ್.ಕೆ ಪಾಟೀಲ ಟ್ವಿಟರ್ನಲ್ಲಿ ಹೇಳಿದ್ದಾರೆ.