ಗದಗ: ‘ವಿದ್ಯಾರ್ಥಿಗಳು ಶಾಲೆಗೆ ಹೋಗಿ ವಿದ್ಯೆ ಕಲಿಯುವುದು ಎಷ್ಟು ಮುಖ್ಯವೋ ಅದರ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸುವುದು ಅಷ್ಟೇ ಮುಖ್ಯವಾಗಿದೆ’ ಎಂದು ಜೇಸಿ ಪ್ರೌಢಶಾಲೆಯ ಚೇರಮನ್ ಆರ್.ಕೆ.ಹಬೀಬ ಹೇಳಿದರು.
ನಗರದ ಜೇಸಿ ಪ್ರೌಢಶಾಲೆಯಲ್ಲಿ ಈಚೆಗೆ ನಡೆದ ಕಲಾ, ವಿಜ್ಞಾನ, ಕ್ರೀಡಾ ಹಾಗೂ ಯೋಗಾ ಸಂಘಗಳ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
‘ವಿದ್ಯಾರ್ಥಿ ಜೀವನದಲ್ಲಿಯೇ ಸಂಗೀತ, ನೃತ್ಯ, ಕ್ರೀಡೆ, ಚಿತ್ರಕಲೆ ಮುಂತಾದ ಸಹಪಠ್ಯ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬೇಕು. ಸತತ ಪ್ರಯತ್ನದಿಂದ ಸಾಧನೆಯ ಮಾರ್ಗ ಸುಲಭವಾಗುತ್ತದೆ’ ಎಂದರು.
‘ಪ್ರತಿಯೊಬ್ಬ ವಿದ್ಯಾರ್ಥಿಯಲ್ಲಿ ಹುದುಗಿರುವ ಪ್ರತಿಭೆಗಳನ್ನು ಅನಾವರಣಗೊಳಿಸಲು ಕಲಾವಿಭಾಗದ ಚಟುವಟಿಕೆಗಳು ಉತ್ತಮ ಅವಕಾಶ ಒದಗಿಸಬಲ್ಲ ವೇದಿಕೆಯಾಗಿದೆ. ಅಷ್ಟೇ ಅಲ್ಲದೆ ನಮ್ಮ ಪುರಾತನ ಸಂಪ್ರದಾಯಿಕ ಜಾನಪದ ಹಾಡುಗಳನ್ನು ಕಲಿಯಬೇಕು, ಅವುಗಳನ್ನು ಉಳಿಸಿ ಬೆಳೆಸಬೇಕು’ ಎಂದರು.
ಪ್ರಾಚಾರ್ಯೆ ಜಯಶ್ರೀ ಮಡಿವಾಳರ ಮಾತನಾಡಿದರು.
ಅನ್ನಪೂರ್ಣಾ ಬ್ಯಾಹಟ್ಟಿ, ಸುಧಾ ವಾದೋನೆ, ರೆಹಾನಾ ನದಾಫ್, ಕವಿತಾ ಕೆ, ದಾನಮ್ಮಾ ತೆಗ್ಗಿನಕೇರಿ, ಮಹೇಶ್ ಸಂದಿಗೋಡ, ಕೆ. ಎಚ್. ಪೂಜಾರ, ಗೀತಾ ಪವಾರ, ಮಂಜುಳಾ ಬುಳ್ಳಾ ಇದ್ದರು.