ಹೊಳೆಆಲೂರು: ‘ಕನ್ನಡ ಕುಲಪುರೋಹಿತ’ ಎಂದೇ ಖ್ಯಾತಿ ಪಡೆದ ವೆಂಕಟರಾಯರಿಗೂ ಹೊಳೆ ಆಲೂರಿಗೂ ಅವಿನಾಭಾವ ನಂಟು. ಇವರು ವಿಜಯಪುರದಲ್ಲಿ ಜನಿಸಿದರೂ, ಇವರ ವಂಶಜರು ರೋಣ ತಾಲ್ಲೂಕಿನ ಹೊಳೆಆಲೂರಿಗೆ ಬಂದು ನೆಲೆಸಿದ್ದರಿಂದ ಆಲೂರು ಇವರ ಮನೆತನದ ಹೆಸರಾಯಿತು.
ವೆಂಕಟರಾಯರ ತಂದೆ ಮಲ್ಕಿ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಅವರಿಗೆ ಆಲೂರಿಗೆ ವರ್ಗಾವಣೆಯಾದ ನಂತರ ಇಲ್ಲಿ ಬಂದು ವಾಸವಿದ್ದರು.
ಬಂಗಾಳ ವಿಭಜನೆ ಘಟನೆಯನ್ನು ಸೂಕ್ಷ್ಮವಾಗಿ ಗಮನಿಸಿದ ಆಲೂರು ವೆಂಕಟರಾಯರಿಗೆ ವಿವಿಧ ವಿಭಾಗಗಳಾಗಿ ಹರಿದು ಹಂಚಿ ಹೋಗಿದ್ದ ಕರ್ನಾಟಕವನ್ನು ಒಟ್ಟುಗೂಡಿಸಬೇಕೆಂಬ ಯೋಚನೆ ಬಂತು. ಮುಂಬೈ, ಮದರಾಸು, ಹೈದ್ರಾಬಾದ, ಮೈಸೂರು ಪ್ರಾಂತ್ಯಗಳಾಗಿ ಹಂಚಿ ಹೋಗಿದ್ದ ಕರ್ನಾಟಕವನ್ನು ಭೌಗೋಳಿಕವಾಗಿ ಒಂದುಗೂಡಿಲಸು ಕರ್ನಾಟಕ ಏಕಿಕರಣ ಹೋರಾಟಕ್ಕೆ ಧುಮುಕಿದರು.
ವೆಂಕಟರಾಯರ ಈ ಹೋರಾಟಕ್ಕೆ ನಾರಾಯಣ ರಾಜಪುರೋಹಿತರು, ಕಡಪಾ ರಾಘವೇಂದ್ರರಾಯರು, ಮುದವಿಡು ಕೃಷ್ಣರಾಯರು, ಮುದವಿಡು ವೆಂಕಟರಾಯರು. ನರಗುಂದಕರ ರಾಮರಾಯರು, ನಾರಾಯಣರಾವ ದೇಶಪಾಂಡೆಯವರು, ಕೈಜೋಡಿಸಿ ಹೋರಾಟದ ಮೂಲಕ ಕರ್ನಾಟಕವನ್ನು ಒಂದು ಗೂಡಿಸಿದರು.
ಆಲೂರು ವೆಂಕಟರಾಯರ ಹಾಗೂ ಅನೇಕ ಕನ್ನಡಾಭಿಮಾನಿಗಳ ಹೋರಾಟ ಫಲವಾಗಿ 1956 ನವೆಂಬರ್ 1 ರಂದು ಮೈಸೂರು ರಾಜ್ಯ ಉದಯವಾಯಿತು. ಏಕಿಕೃತ ಕರ್ನಾಟಕ ರಾಜ್ಯೋತ್ಸವವನ್ನು ವೆಂಕಟರಾಯರ ನೇತೃತ್ವದಲ್ಲಿ ಹಂಪಿಯಲ್ಲಿ ಆಚರಣೆ ಮಾಡಲಾಯಿತು.
ವೆಂಕಟರಾಯರ ಹೆಸರಿನಲ್ಲಿ ಜಿಲ್ಲೆಯಲ್ಲಿ ಹಲವು ಸಂಘ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ. ಅವರ ಸವಿ ನೆನಪಿಗಾಗಿ ಹೊಳೆಆಲೂರಿನಲ್ಲಿ ಆಲೂರು ವೆಂಕಟರಾಯರ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ. ಪ್ರಮುಖ ವೃತ್ತವೊಂದಕ್ಕೆ ಆಲೂರು ವೆಂಕಟರಾಯ ವೃತ್ತವೆಂದು ನಾಮಕರಣ ಮಾಡಲಾಗಿದೆ. ಹೊಳೆಆಲೂರಿನ ಜನಮಾನಸದಲ್ಲಿ ವೆಂಕಟರಾಯರ ನೆನಪು ಶಾಶ್ವತವಾಗಿ ಉಳಿದಿದೆ.
‘ವೆಂಕಟರಾಯರ ಆದರ್ಶಗಳು ಇಂದಿಗೂ ಸ್ಪೂರ್ತಿ. ಕನ್ನಡ ನಾಡು ನುಡಿಗಾಗಿ ಶ್ರಮಿಸುವುದು ನಮ್ಮೆಲ್ಲರ ಕರ್ತವ್ಯ’ ಎಂದು ಹೊಳೆಆಲೂರಿನ ಯಚ್ಚರೇಶ್ವರ ಕಾಲೇಜಿನ ಉಪನ್ಯಾಸಕ ಎಂ.ಎಸ್.ಬೇವೂರ ಹೇಳಿದರು.