ನರಗುಂದ: ಮಕ್ಕಳು ದೇಶದ ಅಮೂಲ್ಯ ಆಸ್ತಿ. ಪ್ರತಿಯೊಬ್ಬ ಮಗುವನ್ನೂ ನೇತಾರರನ್ನಾಗಿ ಉತ್ತಮ ಆಡಳಿತಗಾರರನ್ನಾಗಿ ಮಾಡುವುದು ಶಾಲೆ. ಇವತ್ತಿನ ದಿನಮಾನದಲ್ಲಿ ಅಂತಹ ಶಾಲೆಗಳಲ್ಲಿ ಮೌಲ್ಯಶಿಕ್ಷಣದ ಕೊರತೆ ಎದ್ದು ಕಾಣುತ್ತಿದೆ ಎಂದು ದೊರೆಸ್ವಾಮಿ ವಿರಕ್ತಮಠದ ಶಾಂತಲಿಂಗ ಸ್ವಾಮೀಜಿ ಕಳವಳ ವ್ಯಕ್ತಪಡಿಸಿದರು.
ತಾಲ್ಲೂಕಿನ ಭೈರನಹಟ್ಟಿಯಲ್ಲಿ ಮಂಗಳವಾರ ನಡೆದ ಹತ್ತನೆ ತರಗತಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಅವರು ಮಾತನಾಡಿದರು.
ವಿಷಯದ ಜೊತೆಗೆ ನೈತಿಕ ಶಿಕ್ಷಣವನ್ನು ಬೋಧಿಸಿ ಅವರನ್ನು ಸತ್ಪ್ರಜೆಗಳನ್ನಾಗಿ ನಿರ್ಮಿಸುವ ಶಕ್ತಿ ಶಿಕ್ಷಕರ ಕೈಯಲ್ಲಿದೆ. ಜೊತೆಗೆ ಪಾಲಕರು ತಮ್ಮ ಮಕ್ಕಳ ಮೇಲೆ ನೀಗಾವಹಿಸಿ ಮಕ್ಕಳು ದುಶ್ಚಟಕ್ಕೆ ಒಳಗಾಗದಂತೆ ನೋಡಿಕೊಳ್ಳುವುದು ಅವರ ಮುಖ್ಯ ಜವಾಬ್ದಾರಿಯಾಗಿದೆ. ಪಾಲಕರು ಜೀವನ ಮೌಲ್ಯ ತಿಳಿಸಿ ಮಕ್ಕಳ ಪ್ರಗತಿಯನ್ನು ಉತ್ತಮ ಹಾದಿಯಲ್ಲಿ ಸಾಗಿಸಲು ಮುಂದಾಗಬೇಕು ಎಂದರು.
ವಿದ್ಯಾರ್ಥಿಗಳಾದವರು ಓದು ಕೇವಲ ಅಂಕಗಳಿಗಾಗಿ ಸೀಮಿತವಾಗದೆ, ಉತ್ತಮ ಜ್ಞಾನ ಸಂಪಾದನೆ ಮಾಡಿ ಉತ್ತಮ ಸಮಾಜ ನಿರ್ಮಿಸಬೇಕಾಗಿದೆ. ಅಂಕಗಳು ವಿದ್ಯಾರ್ಥಿಗಳ ಪ್ರತಿಭೆ ಗುರುತಿಸುವುದಕ್ಕೆ ಹೊರತು ಅದುವೆ ಜೀವನವಲ್ಲ. ಹೀಗಾಗಿ ವಿದ್ಯಾರ್ಥಿಗಳಾದವರು ವಿದ್ಯೆಯ ಜೊತೆಗೆ ವಿನಯತೆ ಅಳವಡಿಸಿಕೊಳ್ಳಬೇಕು ಎಂದರು.
ಮಹಾಂತೇಶ ಸಾಲಿಮಠ ಮಾತನಾಡಿ, ಪಾಲಕರಾದವರು ಮಕ್ಕಳಿಗಾಗಿ ಆಸ್ತಿ ಮಾಡದೆ ಅವರಿಗೆ ಒಳ್ಳೆಯ ಶಿಕ್ಷಣ ಕೊಟ್ಟು ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಬೇಕು. ವಿದ್ಯಾರ್ಥಿಗಳು ಈ ದೇಶದ ಶಕ್ತಿ,ಷ ಅವರಿಂದ ಮಾತ್ರ ಸುಂಸ್ಕೃತ ಮತ್ತು ಸುಭದ್ರ ರಾಷ್ಟ್ರ ಕಟ್ಟಲು ಸಾಧ್ಯ ಎಂದರು.
ತಾಲ್ಲೂಕಿಗೆ ಹೆಚ್ಚು ಅಂಕ ಗಳಿಸಿದ ದಾನೇಶ್ವರಿ ರಾವುತ, ನೇತ್ರಾ ದಳವಾಯಿ, ನಿರುಪಮಾ ಚಕ್ರಸಾಲಿ, ವಿಜಯ ತೆಗ್ಗಿನಮನಿ, ಜ್ಯೋತಿ ಎತ್ತಿನಮಿ, ಶ್ರೀನಿವಾಸ ಬಡಿಗೇರ ಅವರಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ನಿವೃತ್ತ ಪ್ರಾಚಾರ್ಯ ವಿ.ಸಿ. ಸಾಲಿಮಠ, ಲಿಂಗಬಸಯ್ಯ ಸಾಲಿಮಠ ಇದ್ದರು.