ಲಕ್ಷ್ಮೇಶ್ವರ: ಮನರೇಗಾ ಯೋಜನೆಯಡಿ ತಾಲ್ಲೂಕಿನ ಅಡರಕಟ್ಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹರದಗಟ್ಟಿ ಗ್ರಾಮದ ಬೇಂಜ್ರೆ ಕೆರೆ ಸಂಪೂರ್ಣ ಅಭಿವೃದ್ಧಿಗೊಂಡಿದ್ದು, ಯೋಜನೆಯ ಉದ್ದೇಶ ಸಫಲವಾಗಿದೆ.
2023-24ನೇ ಸಾಲಿನಲ್ಲಿ ನರೇಗಾ ಯೋಜನೆಯಡಿ ಕೆರೆ ಹೂಳೆತ್ತಿ ಕಲ್ಲು ಪಿಚ್ಚಿಂಗ್ ಮಾಡುವ ಕೆಲಸವನ್ನು ಹಮ್ಮಿಕೊಳ್ಳಲಾಗಿತ್ತು. ಸಧ್ಯ ಉತ್ತಮ ಕೆಲಸದಿಂದಾಗಿ ಕೆರೆ ರಕ್ಷಣೆ ಕಾರ್ಯ ಯಶಸ್ವಿಯಾಗಿದೆ. ಅಂದಾಜು 19 ಎಕರೆ ವಿಸ್ತೀರ್ಣದ ಕೆರೆಯನ್ನು ಯೋಜನೆಯಡಿ ಹೂಳೆತ್ತಿ ಕಲ್ಲು ಪಿಚ್ಚಿಂಗ್ ಮಾಡಲು ಕ್ರಿಯಾಯೋಜನೆ ಸಿದ್ಧಪಡಿಸಲಾಗಿತ್ತು. ಕೆರೆಯ ದಕ್ಷಿಣ ಮತ್ತು ಪಶ್ಚಿಮ ದಿಕ್ಕಿನ ದಂಡೆಗುಂಟ ಮಾಡಿರುವ ಕಲ್ಲು ಪಿಚ್ಚಿಂಗ್ನಿಂದಾಗಿ ಕೆರೆ ರಕ್ಷಣೆ ಸಾಧ್ಯವಾಗಿದೆ. ಇದಕ್ಕಾಗಿ ₹12 ಲಕ್ಷ ವ್ಯಯಿಸಲಾಗಿದ್ದು ಒಟ್ಟು 870 ಮಾನವ ದಿನಗಳನ್ನು ಸೃಜಿಸಲಾಗಿದೆ.
ಇದೇ ಯೋಜನೆಯಡಿ ₹9.50 ಲಕ್ಷ ವೆಚ್ಚದಲ್ಲಿ ಕೆರೆ ಹೂಳೆತ್ತಲಾಗಿದೆ. ಇದರಿಂದ 2,985 ಮಾನವ ದಿನಗಳು ಸೃಜನೆಗೊಂಡಿವೆ. ನರೇಗಾ ಯೋಜನೆಯಡಿ ಸಂಪೂರ್ಣ ಅಭಿವೃದ್ಧಿಗೊಂಡಿರುವ ಕೆರೆ ಈ ವರ್ಷ ಮಳೆಗಾಲದಲ್ಲಿ ತುಂಬಿದರೆ ಗ್ರಾಮಸ್ಥರಿಗೆ ಸಾಕಷ್ಟು ಅನುಕೂಲಕರವಾಗಲಿದೆ.
‘ಜಲಮೂಲಗಳ ರಕ್ಷಣೆಗೆ ಹೆಚ್ಚಿನ ಅಧ್ಯತೆ ನೀಡಿದ್ದರಿಂದ ಹರದಗಟ್ಟಿ ಗ್ರಾಮದ ಕೆರೆ ಅಭಿವೃದ್ಧಿ ಹೊಂದಲು ಸಾಧ್ಯವಾಗಿದೆ. ಕೆರೆ ರಕ್ಷಣೆಯಲ್ಲಿ ಗ್ರಾಮದ ಎಲ್ಲರ ಸಹಕಾರ ಸಿಕ್ಕಿದೆ’ ಎಂದು ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಸವಿತಾ ಸೋಮಣ್ಣವರ ತಿಳಿಸಿದರು.
‘ಉದ್ಯೋಗ ಖಾತ್ರಿ ಯೋಜನೆಯಡಿ ಬೇಂಜ್ರೆ ಕೆರೆಯನ್ನು ಅಭಿವೃದ್ಧಿ ಮಾಡಲಾಗಿದೆ. ಅದರಂತೆ ಪಂಚಾಯ್ತಿ ವ್ಯಾಪ್ತಿಯ ಕೆರೆಗಳ ಅಭಿವೃದ್ಧಿಗೆ ಒತ್ತು ನೀಡಲಾಗಿದೆ’ ಎಂದು ಗ್ರಾಮ ಪಂಚಾಯ್ತಿ ಸದಸ್ಯ ನಿಂಗಪ್ಪ ಪ್ಯಾಟಿ ತಿಳಿಸಿದರು.
ಕೆರೆಗಳನ್ನು ನರೇಗಾ ಯೋಜನೆಯಡಿ ಅಭಿವೃದ್ಧಿ ಮಾಡಲು ಅವಕಾಶ ಇದೆ. ಕಾರಣ ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳು ಈ ನಿಟ್ಟಿನಲ್ಲಿ ಚಿಂತನೆ ನಡೆಸಬೇಕು
ಕೃಷ್ಣಪ್ಪ ಧರ್ಮರ ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿ