ಗಜೇಂದ್ರಗಡ: ಸಮೀಪದ ಜಿಗೇರಿ ಗ್ರಾಮದ ಜಮೀನಿನಲ್ಲಿ ಫೆ.12 ರಂದು ಮೂವರು ಯುವಕರ ಮೇಲೆ ಚಿರತೆ ದಾಳಿ ಮಾಡಿದ್ದ ಹಿನ್ನೆಲೆಯಲ್ಲಿ ಸೋಮವಾರ ಉಪಅರಣ್ಯ ಸಂರಕ್ಷಣಾಧಿಕಾರಿ ಲೇಖರಾಜ ಮೀನಾ (ಐಎಫ್ಎಸ್) ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಚಿರತೆ ದಾಳಿ ನಡೆಸಿದ ಸ್ಥಳ ಹಾಗೂ ಚಿರತೆ ಸೆರೆ ಹಿಡಿಯಲು ಜಿಗೇರಿ ಗ್ರಾಮದಲ್ಲಿ ಎರಡು ಹಾಗೂ ನಾಗೇಂದ್ರಗಡ ಗ್ರಾಮದಲ್ಲಿ ಅಳವಡಿಸಿರುವ ಒಂದು ಬೋನು ಪರಿಶೀಲಿಸಿದರು. ಬಳಿಕ ಇಲಾಖೆಯ ಸ್ಥಳೀಯ ಅಧಿಕಾರಿಗಳಿಂದ ಕಾರ್ಯಾಚರಣೆಯ ಮಾಹಿತಿ ಪಡೆದರು.
ಬಳಿಕ ಮಾತನಾಡಿದ ಅವರು, ‘ಚಿರತೆ ಸೆರೆ ಹಿಡಿಯಲು ಈಗಾಗಲೇ ಗಸ್ತು ನಡೆಸುತ್ತಿರುವ ತಂಡಕ್ಕೆ ಅಗತ್ಯ ಬಿದ್ದರೆ ಹೆಚ್ಚುವರಿ ಸಿಬ್ಬಂದಿ ನೀಡಲಾಗುವುದು. ಚಿರತೆ ದಾಳಿ ಮುಂದುವರಿದರೆ ಮೈಸೂರಿನಿಂದ ಚಿರತೆ ಹಿಡಿಯುವ ವಿಶೇಷ ತಂಡ ಕರೆಸಲು ಈಗಾಗಲೇ ಸಿದ್ದತೆ ಮಾಡಿಕೊಳ್ಳಲಾಗಿದೆ’ ಎಂದರು.
ಇದೇ ವೇಳೆ ತೋಟದಲ್ಲಿನ ಮನೆಗಳಿಗೆ ರಾತ್ರಿ ಸಮಯದಲ್ಲಿ ವಿದ್ಯುತ್ ಪೂರೈಕೆಗೆ ಕ್ರಮ ಕೈಗೊಳ್ಳುವಂತೆ ಹೆಸ್ಕಾಂ ಎಂ.ಡಿ ಅವರಿಗೆ ಕರೆ ಮಾಡಿ ತಿಳಿಸಿದರು.
ಗದಗ ವಲಯ ಅರಣ್ಯಾಧಿಕಾರಿ ಮಂಜುನಾಥ ಮೇಗಳಮನಿ, ಗಜೇಂದ್ರಗಡ ಉಪ ವಲಯ ಅರಣ್ಯಾಧಿಕಾರಿ ಪ್ರವೀಣಕುಮಾರ ಸಾಸ್ವಿಹಳ್ಳಿ, ಜಿಗೇರಿ ಗ್ರಾಮದ ಅರ್ಜುನ ರಾಠೋಡ ಇದ್ದರು.