ಗದಗ: ಸಿದ್ದರಾಮಯ್ಯ ಪ್ರಧಾನ ಮಂತ್ರಿ ಆಗಬೇಕು ಅಂತ ಅವರ ಹಣೆಯಲ್ಲಿ ಬರೆದಿದ್ದರೆ ಅದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ. ರಾಜಕೀಯ ಎಂಬುದು ಅವಕಾಶ, ಏನು ಬೇಕಾದರೂ ಆಗಬಹುದು. ಇಲ್ಲಿ ಯಾವುದನ್ನೂ ತಳ್ಳಿಹಾಕಲು ಸಾಧ್ಯವಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಹೇಳಿದರು.
ಎಚ್. ಡಿ. ದೇವೇಗೌಡ ಅವರು ಪ್ರಧಾನಮಂತ್ರಿ ಆಗುತ್ತೇನೆಂದು ಕನಸು ಕಂಡಿರಲಿಲ್ಲ. ಹರದನಹಳ್ಳಿಯಲ್ಲಿ ಹುಟ್ಟಿ ಅಲ್ಲಿಂದ ಚಿಮ್ಮಿ ಗಣತಂತ್ರ ವ್ಯವಸ್ಥೆಯ ಎತ್ತರದ ಸ್ಥಾನಕ್ಕೆ ಏರಿದರು. ಅದಕ್ಕೆ ರಾಜಕೀಯವೆಂಬುದು ಅವಕಾಶ ಎನ್ನುವುದು ಎಂದು ಸೋಮವಾರ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದರು.
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಕುರಿತು ಪ್ರತಿಕ್ರಿಯಿಸಿದ ಅವರು, ಈ ಹಿಂದೆಯೂ ಸಂಸದನಾಗಿದ್ದೆ. ಮತ್ತೊಮ್ಮೆ ಆಗಬೇಕು ಎಂಬ ಬಯಕೆ ಇದೆ. ಅವಕಾಶ ಸಿಕ್ಕರೆ ಮೈಸೂರು ಕೊಡಗು ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುವೆ ಎಂದು ಹೇಳಿದರು.
ಟಿಕೆಟ್ ಹಂಚಿಕೆಗೂ ಮುನ್ನ ಒಂದು ಕ್ಷೇತ್ರಕ್ಕೆ ಹಲವು ಹೆಸರುಗಳು ಕೇಳಿಬರುತ್ತವೆ. ಆದರೆ, ಟಿಕೆಟ್ ಸಿಗುವುದು ಒಬ್ಬರಿಗೆ ಮಾತ್ರ ಎಂದು ಹೇಳಿದರು.