ನರಗುಂದ (ಗದಗ ಜಿಲ್ಲೆ): ಅಯೋಧ್ಯೆಯಲ್ಲಿ ಬಾಲರಾಮನ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ ಪ್ರಯುಕ್ತ ತಾಲ್ಲೂಕಿನ ಹುಣಸಿಕಟ್ಟಿಯ ಮಸೀದಿಯಲ್ಲಿ ಹಿಂದೂ-ಮುಸ್ಲಿಂ ಯುವಕರು ಸೋಮವಾರ ರಾಮನ ಜಪ ಮಾಡಿದರು.
ಭಜನೆಗಳನ್ನೂ ಹಾಡಿದ ಯುವಕರು ಮಸೀದಿ ಎದುರು ‘ಜೈ ಶ್ರೀರಾಮ’ ಎಂದು ಬರೆದರು. ನಂತರ ಆವರಣದಲ್ಲಿ ವೇದೋಕ್ತ ಮಂತ್ರಪುಷ್ಪಾಂಜಲಿ ಮೂಲಕ ಧಾರ್ಮಿಕ ವಿಧಿವಿಧಾನ ಅನುಸರಿಸಿ ಭಾರತಮಾತೆಗೆ ಪೂಜಿಸಿದರು. ಮಂತ್ರಘೋಷದ ಮೂಲಕ ಅಭಿಷೇಕವನ್ನೂ ನೆರವೇರಿಸಿದರು.
‘ನಮ್ಮ ಗ್ರಾಮದ ಈ ಮಸೀದಿ ಹಿಂದಿನಿಂದಲೂ ಸೌಹಾರ್ದಕ್ಕೆ ಹೆಸರಾಗಿದೆ. ಹಿಂದೂ ಮತ್ತು ಮುಸ್ಲಿಂನವರು ಎಲ್ಲರೂ ಸೇರಿ ಎರಡೂ ಧರ್ಮಗಳ ಹಬ್ಬ ಆಚರಿಸುತ್ತೇವೆ. ರಾಮೋತ್ಸವ ಸಂದರ್ಭದಲ್ಲಿ ಇಲ್ಲಿ ಪೂಜಿಸಿದ್ದೇವೆ. ನಮಗೆ ರಾಮ, ಅಲ್ಲಾ ಒಂದೇ. ಈ ಊರಿನಲ್ಲಿ ನಾವು ಅಣ್ಣ-ತಮ್ಮಂದಿರಂತೆ ಬದುಕುತ್ತಿದ್ದೇವೆ’ ಎಂದು ಗ್ರಾಮದ ರುಸ್ತುಂ ಹೊಸಳ್ಳಿ ತಿಳಿಸಿದರು.