ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡವನ್ನು ಗಟ್ಟಿಗೊಳಿಸಿದ ದಾಸರು: ಶಾಂತಲಿಂಗ ಸ್ವಾಮೀಜಿ

ಶಿವಾನುಭವದಲ್ಲಿ ಕನಕದಾಸ ಜಯಂತಿ– ಶಾಂತಲಿಂಗ ಶ್ರೀ ಅಭಿಮತ
Last Updated 9 ಡಿಸೆಂಬರ್ 2020, 16:38 IST
ಅಕ್ಷರ ಗಾತ್ರ

ಗದಗ: ‘ದಾಸ ಪರಂಪರೆಯಲ್ಲಿ ವಿಶೇಷ ಸ್ಥಾನ ಪಡೆದಿರುವ ಕನಕದಾಸರು ಕರ್ನಾಟಕ ಸಂಗೀತಕ್ಕೆ ವಿಶೇಷ ಕೊಡುಗೆ ನೀಡಿದ್ದಾರೆ. ಭಕ್ತಿಯ ಪಾರಮ್ಯದ ಜತೆಗೆ ಸಮಾಜದಲ್ಲಿ ನೆಲೆಯೂರಿದ್ದ ಭೇದ ತೊಡೆದು ಹಾಕಲು ಪ್ರಯತ್ನಿಸಿದ್ದಾರೆ’ ಎಂದು ಭೈರನಹಟ್ಟಿಯ ದೊರೆಸ್ವಾಮಿ ವಿರಕ್ತಮಠದ ಶಾಂತಲಿಂಗ ಸ್ವಾಮೀಜಿ ತಿಳಿಸಿದರು.

ಲಿಂಗಾಯತ ಪ್ರಗತಿಶೀಲ ಸಂಘದ ವತಿಯಿಂದ ಎಡೆಯೂರು ಜಗದ್ಗುರು ತೋಂಟದಾರ್ಯ ಮಠದಲ್ಲಿ ನಡೆದ 2,514ನೇ ಶಿವಾನುಭವದಲ್ಲಿ ಮಾತನಾಡಿದರು.

‘12ನೇ ಶತಮಾನದಲ್ಲಿ ಬಸವಾದಿ ಶರಣರು ತಾರತಮ್ಯಗಳನ್ನು ನಿವಾರಿಸಲು ಮಾಡಿದ ಪ್ರಯತ್ನವನ್ನು ಕನಕದಾಸರು ಮುಂದುವರಿಸಿದರು’ ಎಂದು ತಿಳಿಸಿದರು.

‘ದಾಸಶ್ರೇಷ್ಠ ಕನಕದಾಸರು’ ವಿಷಯವಾಗಿ ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ. ಎಫ್.ಟಿ.ಹಳ್ಳಿಕೇರಿ ಉಪನ್ಯಾಸ ನೀಡಿ, ‘ಬಸವಣ್ಣನ ಬಂಡಾಯದ ಮನೋಧರ್ಮವನ್ನು ಕನಕದಾಸರ ಕೀರ್ತನೆಗಳಲ್ಲಿ ಕಾಣಬಹುದು. ಜನಸಾಮಾನ್ಯರನ್ನು ಸರಿದಾರಿಗೆ ತರುವ ಪ್ರಯತ್ನವಾಗಿ ಕೀರ್ತನೆ, ಕಾವ್ಯಗಳನ್ನು ರಚಿಸಿದ್ದಾರೆ. 12ನೇ ಶತಮಾನದ ನಂತರ ದಾಸರು ಕನ್ನಡವನ್ನು ಗಟ್ಟಿಗೊಳಿಸಿದರು. ದೈವ ಪ್ರಾರ್ಥನೆ, ಗುರುಸ್ತುತಿ, ಜ್ಞಾನ, ಭಕ್ತಿ, ವೈರಾಗ್ಯ, ಸಾಮಾಜಿಕ ಚಿಂತನೆಗಳು ಕನಕದಾಸರ ಕಾವ್ಯದ ವಸ್ತುಗಳಾಗಿವೆ’ ಎಂದು ತಿಳಿಸಿದರು.

ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಫಕ್ಕಿರಪ್ಪ ಹೆಬಸೂರ ಮಾತನಾಡಿ, ‘ತೋಂಟದಾರ್ಯ ಮಠ ಸೌಹಾರ್ದಕ್ಕೆ ಹೆಸರಾಗಿದೆ. ಹಾಲುಮತ ಸಂಸ್ಕೃತಿಯ ಅಭಿವೃದ್ಧಿಗೆ ಶ್ರೀಮಠದ ಕೊಡುಗೆ ಅಪಾರ. ಕನಕದಾಸರ ಜೀವನ ಮತ್ತು ಕಾವ್ಯ ಸ್ವಸ್ಥ ಸಮಾಜದ ಅಭಿವೃದ್ಧಿಗೆ ಕಾರಣವಾಗಿದೆ’ ಎಂದರು.

ಮೃತ್ಯುಂಜಯ ಹಿರೇಮಠ ಹಾಗೂ ಗುರುನಾಥ ಸುತಾರ ಅವರಿಂದ ಕನಕದಾಸರ ಕಾವ್ಯಗಾಯನ ಜರುಗಿತು.

ಬಸವರಾಜ ಗಾಳಪ್ಪನವರ ಮತ್ತು ಹುಚ್ಚಣ್ಣ ಶಹಪೂರ, ವೀರಣ್ಣ ಬೇವಿನಮರದ, ಡಾ. ಜಿ.ಬಿ.ಬಿಡಿನಹಾಳ, ರತ್ನಕ್ಕ ಪಾಟೀಲ, ಸಂಘದ ಅಧ್ಯಕ್ಷ ಎಂ.ಸಿ.ಐಲಿ, ಶಿವಾನುಭವ ಸಮಿತಿ ಅಧ್ಯಕ್ಷ ವಿವೇಕಾನಂದಗೌಡ ಪಾಟೀಲ, ಗೌರಕ್ಕ ಬಡಿಗಣ್ಣವರ, ವೀರಣ್ಣ ಗೊಡಚಿ, ವಿಜಯಕುಮಾರ ಹಿರೇಮಠ, ಶಶಿಧರ ಬೀರನೂರ, ಪ್ರಕಾಶ ಅಸುಂಡಿ, ಪ್ರಭು ಗಂಜಿಹಾಳ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT