ಲಕ್ಷ್ಮೇಶ್ವರ: ಜಿಲ್ಲಾಡಳಿತದ ನಡೆ ಹಳ್ಳಿ ಕಡೆ ಕಾರ್ಯಕ್ರಮದ ಅಂಗವಾಗಿ ತಾಲ್ಲೂಕಿನ ಗೋವನಾಳ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಜಿಲ್ಲಾಧಿಕಾರಿಎಂ.ಸುಂದರೇಶ ಬಾಬು ಗ್ರಾಮ ವಾಸ್ತವ್ಯ ನಡೆಸಿದರು.
ಶಾಸಕ ರಾಮಣ್ಣ ಲಮಾಣಿ ಶಾಲಾ ಪೌಷ್ಟಿಕ ತೋಟದಲ್ಲಿನ ಸಸಿಗಳಿಗೆ ನೀರು ಉಣಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನಿಡಿದರು.
ಶಾಸಕ ಹಾಗೂ ಅಧಿಕಾರಿಗಳ ತಂಡ ಪ್ರಾಥಮಿಕ ಶಾಲೆಯಲ್ಲಿನ ನೂತನ ಅಡುಗೆ ಕೊಠಡಿ, ಅಂಗನವಾಡಿ ಕೇಂದ್ರ ಉದ್ಘಾಟಸಿದರು. ನಂತರ ಬೆಳಕು ಯೋಜನೆಯಡಿ ವಿದ್ಯುತ್ ಸಂಪರ್ಕ ಕಲ್ಪಿಸಿದ ಮನೆಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ಇದೇ ಸಂದರ್ಭದಲ್ಲಿ ಗ್ರಾಮದ ಸ್ಮಶಾನ ಭೂಮಿ ಹಾಗೂ ಘನತ್ಯಾಜ್ಯ ಘಟಕಗಳ ಕಟ್ಟಡಗಳ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿದರು. ನರೇಗಾ ಯೋಜನೆಯಡಿ ಕೆರೆ ಹೂಳೆತ್ತುವ ಕಾಮಗಾರಿ ವೀಕ್ಷಿಸಿ ಕೂಲಿಕಾರರೊಂದಿಗೆ ಸಮಸ್ಯೆ ಕುರಿತು ಚರ್ಚಿಸಿದರು.
ಒಡೆಯರ ಮಲ್ಲಾಪೂರದ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಭೇಟಿ ನೀಡಿದ ಜಿಲ್ಲಾಧಿಕಾರಿ ಶಾಲೆಯಲ್ಲಿಯೇ ಮಕ್ಕಳೊಂದಿಗೆ ಊಟ ಮಾಡಿದ್ದು ವಿಶೇಷವಾಗಿತ್ತು. ನಂತರ ಗೋವನಾಳದ ಸರ್ಕಾರಿ ಪ್ರಾಥಮಿಕ ಶಾಲೆಗೆ ಆಗಮಿಸಿ ಸಮಸ್ಯೆ ಪರಿಹಾರ ಕೋರಿ ಬಂದಿರುವ ಅರ್ಜಿಗಳ ಕುರಿತು ತಾಲ್ಲೂಕು ಮಟ್ಟದ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು.