ಹಾಸನ: ಜೆಡಿಎಸ್ನಿಂದ ಗೆದ್ದು ಬಿಜೆಪಿಗೆ ಬೆಂಬಲ ನೀಡಲು ಮುಂದಾಗಿದ್ದ ಅರಸೀಕೆರೆ ನಗರಸಭೆಯ ಏಳು ಸದಸ್ಯರನ್ನು ಜಿಲ್ಲಾಧಿಕಾರಿಗಳ ನ್ಯಾಯಾಲಯ ಅನರ್ಹಗೊಳಿಸಿ ಆದೇಶಹೊರಡಿಸಿದೆ.
ಜೆಡಿಎಸ್ ಚಿಹ್ನೆಯಡಿ ಸ್ಪರ್ಧಿಸಿ ಆಯ್ಕೆಗೊಂಡಿದ್ದ ಎಂ.ಎಸ್.ಹರ್ಷವಧರ್ನ ರಾಜ್ (ವಾರ್ಡ್ ನಂ.1), ಚಂದ್ರಶೇಖರಯ್ಯ (ವಾರ್ಡ್ ನಂ.9), ಎನ್.ಕವಿತಾದೇವಿ (ವಾರ್ಡ್ ನಂ. 18), ಎ.ವಿ.ದರ್ಶನ್ (ವಾರ್ಡ್ ನಂ.19), ಬಿ.ಎನ್.ವಿದ್ಯಾಧರ್ (ವಾರ್ಡ್ ನಂ.25), ಆಯಿಷಾ (ವಾರ್ಡ್ ನಂ.28), ಪುಟ್ಟಸ್ವಾಮಿ (ವಾರ್ಡ್ ನಂ.15), ಕಲೈ ಅರಸಿ (ವಾರ್ಡ್ ನಂ.2) ಅವರು ಜೂನ್ 22 ರಂದು ಜೆಡಿಎಸ್ ಶಾಸಕ ಶಿವಲಿಂಗೇಗೌಡರ ವಿರುದ್ಧ ಬಂಡಾಯವೆದ್ದು ಪ್ರತ್ಯೇಕ ಆಸನಕ್ಕಾಗಿ ಜಿಲ್ಲಾಧಿಕಾರಿ ಆರ್.ಗಿರೀಶ್ಗೆ ಮನವಿ ಸಲ್ಲಿಸಿದ್ದರು.
‘ಅರಸೀಕೆರೆ ಜೆಡಿಎಸ್ನಲ್ಲಿ ಶಾಸಕರಿಂದ ತಮಗೆ ಉಸಿರುಗಟ್ಟಿಸೋ ವಾತಾವರಣ ಇದೆ. ನಮಗೆ ಪ್ರತ್ಯೇಕ ಆಸನ ವ್ಯವಸ್ಥೆ ಮಾಡಬೇಕು. ನಾವು ವಿಷಯಾಧರಿತವಾಗಿ ಬಿಜೆಪಿಯಿಂದ ಅಧ್ಯಕ್ಷರಾಗಿರುವ ಗಿರೀಶ್ ಅವರನ್ನ ಬೆಂಬಲಿಸುತ್ತೇವೆ’ ಎಂದು ಮನವಿ ಸಲ್ಲಿಸಿದ್ದರು.
ಈ ನಡುವೆಎರಡನೇ ವಾರ್ಡ್ ಸದಸ್ಯೆ ಕಲೈ ಅರಸಿ ವಾಪಸ್ ಜೆಡಿಎಸ್ ನಾಯಕರೊಂದಿಗೆ ಬಂದು ‘ಸಿ.ಎಂ ಆಗಿದ್ದ ಯಡಿಯೂರಪ್ಪ ಅವರ ರಾಜಕೀಯ ಕಾರ್ಯದರ್ಶಿ ಸಂತೋಷ್ ಬಲವಂತವಾಗಿಅವರ ಆಪ್ತರ ಮೂಲಕ ₹10 ಲಕ್ಷ ಹಣವನ್ನೂ ಮನೆಯಲ್ಲಿ ಇಟ್ಟು ಹೋಗಿದ್ದರು’ ಎಂದು ಆರೋಪಿಸಿದ್ದರು.
ಏಳು ಸದಸ್ಯರ ಮನವಿ ಸ್ವೀಕಾರ ಮಾಡಿದ್ದ ಜಿಲ್ಲಾಧಿಕಾರಿ, ಈ ಬಗ್ಗೆ ಜೆಡಿಎಸ್ ರಾಜ್ಯ ಘಟಕ, ಜಿಲ್ಲಾ ಘಟಕ ಹಾಗೂ ತಾಲ್ಲೂಕು ಘಟಕದ ಅಧ್ಯಕ್ಷರಿಗೆ ನೋಟಿಸ್ ನೀಡಿದ್ದರು. ಪಕ್ಷಾಂತರ ನಿಷೇಧ ಕಾಯ್ದೆ ಉಲ್ಲಂಘನೆ ಎಂದು ಡಿ.ಸಿ ಕೋರ್ಟ್ನಲ್ಲಿ ರಾಜ್ಯ ಘಟಕದ ಅಧ್ಯಕ್ಷಎಚ್.ಕೆ.ಕುಮಾರಸ್ವಾಮಿ ದೂರು ನೀಡಿದ್ದರು. ಎರಡೂ ಕಡೆಯವರ ವಾದ, ಪ್ರತಿವಾದ ಆಲಿಸಿದಡಿಸಿ, ಏಳು ಜನರನ್ನು ಅನರ್ಹ ಗೊಳಿಸಿ ಆದೇಶ ನೀಡಿದ್ದಾರೆ.
ಒಟ್ಟು 31 ಸದಸ್ಯ ಬಲದ ಅರಸೀಕೆರೆ ನಗರಸಭೆಯಲ್ಲಿ ಜೆಡಿಎಸ್ ಬರೊಬ್ಬರಿ 21 ಸ್ಥಾನ ಗೆದ್ದು ಸ್ಪಷ್ಟ ಬಹುಮತ ಪಡೆದಿತ್ತು. ಆದರೆ, ಮೀಸಲಾತಿ ಅಸ್ತ್ರ ಬಳಸಿ ಜೆಡಿಎಸ್ ಗೆ ಅಧಿಕಾರ ಕೊಡದ ಬಿಜೆಪಿತಮ್ಮ ಪಕ್ಷದಿಂದ ಗೆದ್ದ ಆರು ಜನರಲ್ಲಿ ಪರಿಶಿಷ್ಟ ಪಂಗಡದ ಸದಸ್ಯನನ್ನು ಅಧ್ಯಕ್ಷನನ್ನಾಗಿಮಾಡಿತ್ತು.
‘ ಜನರು ನಮ್ಮನ್ನು ಶಾಸಕರ ಮುಖ ನೋಡಿ ಆಯ್ಕೆ ಮಾಡಿದ್ದರೋ ಅಥವಾ ವೈಯಕ್ತಿಕ ವರ್ಚಸ್ಸಿನಿಂದ ಗೆಲುವು ಸಿಕಿತ್ತೋ ಎಂಬುದು ಮುಂದೆ ತಿಳಿಯಲಿದೆ. ಜಿಲ್ಲಾಧಿಕಾರಿ ಆದೇಶದ ವಿರುದ್ಧ ಹೈಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸುವುದೋ ಅಥವಾ ಚುನಾವಣೆಗೆ ಹೋಗುವುದೋ ಎಂದು ಶೀಘ್ರದಲ್ಲಿ ನಿರ್ಣಯಿಸುತ್ತೇವೆ’ ಎಂದು ಅನರ್ಹ ಸದಸ್ಯೆ ಆಯಿಷಾ ಅವರ ಪತಿ ಸಿಖಂದರ್ ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.