ಹಳೇಬೀಡು: ಹೊಯ್ಸಳೇಶ್ವರ ದೇವಾಲಯದ ಸುತ್ತಮುತ್ತ ಅಂಗಡಿಗಳ ಮುಂದೆ ರಸ್ತೆಗೆ ಚಾಚಿದ್ದ ಛಾವಣಿ ಹಾಗೂ ಹಳೆಯ ಗೂಡಂಗಡಿಗಳನ್ನು ಬುಧವಾರ ಗ್ರಾಮ ಪಂಚಾಯಿತಿಯವರು ತೆರವು ಮಾಡಿದರು.
ಹಳೆಯ ಪೆಟ್ಟಿಗೆ ಅಂಗಡಿ ಹಾಗೂ ಚಾವಣಿಯನ್ನು ತೆರವು ಮಾಡುವ ಸಂದರ್ಭದಲ್ಲಿ ವ್ಯಾಪಾರಿಗಳು ಹಾಗೂ ಗ್ರಾಮ ಪಂಚಾಯಿತಿ ಸಿಬ್ಬಂದಿಗೆ ಮಾತಿನ ಚಕಮಕಿ ನಡೆಯಿತು. ಪ್ರವಾಸಿಗರಿಗೆ ಕಿರಿಕಿರಿಯಾದರೆ ಖರೀದಿಗೆ ಬರುವುದಿಲ್ಲ, ಸ್ವಚ್ಛವಾಗಿದ್ದರೆ ವಸ್ತುಗಳನ್ನು ಖರೀದಿ ಮಾಡುತ್ತಾರೆ. ತಿಂಡಿ, ತಿನಿಸುಗಳನ್ನು ಸಹ ಸೇವಿಸುತ್ತಾರೆ ಎಂದು ಗ್ರಾಮ ಪಂಚಾಯಿತಿಯವರು ಹೇಳಿದ ಮಾತಿಗೆ ಹಲವು ವರ್ತಕರು ಒಪ್ಪಿದರು. ಕೆಲವು ವರ್ತಕರು ವಾಗ್ವಾದ ಮಾಡಿದರು. ಪೊಲೀಸ್ ಬಂದೋಬಸ್ತ್ನಲ್ಲಿ ತೆರವು ಕಾರ್ಯಾಚರಣೆ ನಡೆಯಿತು.
‘ಪಾರ್ಕಿಂಗ್ ಸ್ಥಳದಲ್ಲಿ ರಸ್ತೆಗೆ ಚಾಚುವಂತೆ ಅಂಗಡಿ ಇಟ್ಟಿದ್ದರಿಂದ ವಾಹನಗಳ ಓಡಾಟಕ್ಕೆ ತೊಂದರೆಯಾಗುತ್ತಿದೆ ಎಂದು ಪ್ರವಾಸಿಗರಿಂದ ದೂರು ಬಂದಿದ್ದರಿಂದ ಗ್ರಾಮ ಪಂಚಾಯಿತಿಯಿಂದ ಕ್ರಮ ಕೈಗೊಂಡಿದೆ. ಪ್ರವೇಶ ದ್ವಾರದಲ್ಲಿದ್ದ ಅಂಗಡಿಗಳನ್ನು ಎತ್ತಂಗಡಿ ಮಾಡಿಸಿ ಪ್ರವಾಸಿಗರ ಓಡಾಟಕ್ಕೆ ಅನುಕೂಲ ಕಲ್ಪಿಸಲಾಯಿತು’ ಎಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರವಿಕುಮಾರ್ ಹೇಳಿದರು.
ಗ್ರಾಮ ಪಂಚಾಯಿತಿ ಸದಸ್ಯರಾದ ಎಚ್.ಎಂ.ನಿಂಗಪ್ಪ, ಎಚ್.ಕೆ.ಶಿವಕುಮಾರ್, ಮೋಹನ್ ಕುಮಾರ್, ವಾಣಿ ಚಂದ್ರಶೇಖರ್, ಸಿ.ಆರ್.ಲಿಂಗಪ್ಪ ಪ್ರೇಮಣ್ಣ, ಎಚ್.ಬಿ.ಚಂದ್ರಶೇಖರ್, ರಶ್ಮಿ ವಿನಯ್, ಕವಿತಾ ರಮೇಶ್, ಮಾಜಿ ಅಧ್ಯಕ್ಷ ಕೃಷ್ಣ ಇದ್ದರು.