ಹಳೇಬೀಡು: ಅಡಗೂರು ಜೈನರಗುತ್ತಿ ಯಲ್ಲಿ ಮೂರು ದಿನ ನಡೆಯುವ 24 ತೀರ್ಥಂಕರರ ಪಂಚಕಲ್ಯಾಣ ಮಹೋತ್ಸವಕ್ಕೆ ಭಾನುವಾರ ಧರ್ಮ ಧ್ವಜಾರೋಹಣ ನೆರವೇರಿಸುವ ಮೂಲಕ ಚಾಲನೆ ನೀಡಲಾಯಿತು.
ಶಿವಪುರ ಕಾವಲಿನ ಬೆಟ್ಟಗುಡ್ಡಗಳ ನಡುವೆ ನಿಸರ್ಗ ತಾಣದಲ್ಲಿರುವ ಜೈನರಗುತ್ತಿಯಲ್ಲಿ ನಸುಕಿನಿಂದಲೇ ಧಾರ್ಮಿಕ ವಿಧಾನ ಆರಂಭವಾಯಿತು. ಬೆಟ್ಟದ ತಪ್ಪಲಿನಲ್ಲಿ ಮುಗಿಲು ಮುಟ್ಟುವಂತೆ ಮಂತ್ರಘೋಷ ಮೊಳಗಿತ್ತು. ಜೈನಾಗಮ ಸಂಪ್ರದಾಯದ ವಿಧಿವಿಧಾನದಂತೆ ಮುನಿಶ್ರೀ ವೀರಸಾಗರ ಮಹಾರಾಜರ ಸಾನ್ನಿಧ್ಯದಲ್ಲಿ ಪೂಜಾದಿಗಳು ನಡೆದವು.
ಪಂಚಕಲ್ಯಾಣ ಮಹೋತ್ಸವಕ್ಕೆ ಅಡ್ಡಿ ಆತಂಕ ಎದುರಾಗದೆ ಶಾಂತಿಯುತವಾಗಿ ನೆರವೇರಲೆಂದು ಕ್ಷೇತ್ರ, ವಾಸ್ತು, ವಾಯು, ಮೇಘ, ಅಗ್ನಿ ಸಹಿತ ಪಂಚಕುಮಾರರಿಗೆ ಮೊದಲು ಪೂಜೆ ಸಲ್ಲಿಸಲಾಯಿತು. ನಂತರ ಸರ್ವಾಣ ಯಕ್ಷ ಪೂಜೆ ನೆರವೇರಿಸಲಾಯಿತು. ನೂತನ ಮಾನಸ್ತಂಭ ಶಿಲಾನ್ಯಾಸ ನೆರವೇರಿದ ನಂತರ ಯಾಗ ಮಂಡಲ ಆರಾಧನೆ ನೆರವೇರಿತು. ಮಹಿಳೆಯರು ಜಿನ ಭಜನೆ ಮಾಡುತ್ತ ಪೂಜಾ ಕಾರ್ಯದಲ್ಲಿ ಭಾಗವಹಿಸಿದ್ದರು.
ಪ್ರತಿಷ್ಠಾಚಾರ್ಯ ಅಶೋಕ್ ಶಾಸ್ತ್ರಿ. ವಿಧಾನಾಚಾರ್ಯ ಪವನ ಪಂಡಿತ್, ಪ್ರವೀಣ್ ಪಂಡಿತ್, ಪುರೋಹಿತರಾದ ಬಾಲರಾಜ್, ನಾಗರಾಜು, ಜಿನೇಂದ್ರ ಪೂಜಾ ವಿಧಾನ ನಡೆಸಿದರು.