ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮುಜರಾಯಿ ಇಲಾಖೆಯಿಂದಲೇ ಪ್ರಸಾದ ವಿತರಣೆ: ಎಚ್‌.ಡಿ. ರೇವಣ್ಣ ಸಲಹೆ

ಲಕ್ಷ್ಮಿ ನರಸಿಂಹಸ್ವಾಮಿ ಜಾತ್ರೆ ಪೂರ್ವಭಾವಿ ಸಭೆಯಲ್ಲಿ ಎಚ್‌.ಡಿ. ರೇವಣ್ಣ ಸಲಹೆ
Published 11 ಮಾರ್ಚ್ 2024, 13:21 IST
Last Updated 11 ಮಾರ್ಚ್ 2024, 13:21 IST
ಅಕ್ಷರ ಗಾತ್ರ

ಹೊಳೆನರಸೀಪುರ: ಚುನಾವಣೆ ನೀತಿ ಸಂಹಿತೆ ಜಾರಿಯಾಗುವ ಕಾರಣದಿಂದ ಲಕ್ಷ್ಮಿ ನರಸಿಂಹ ಸ್ವಾಮಿ ದೇವಾಲಯದ ಆವರಣದಲ್ಲಿ ಪ್ರಸಾದ ವಿತರಣೆಯನ್ನು ಮುಜರಾಯಿ ಇಲಾಖೆಯಿಂದಲೇ ವ್ಯವಸ್ಥೆ ಮಾಡಿ. ರಾಜಕೀಯ ವ್ಯಕ್ತಿಗಳು ವಿತರಣೆ ಮಾಡುವುದು ಬೇಡ ಎಂದು ಶಾಸಕ ಎಚ್.ಡಿ. ರೇವಣ್ಣ ಸಲಹೆ ನೀಡಿದರು.

ಮಾರ್ಚ್ 24 ರಂದು ನಡೆಯಲಿರವ ಲಕ್ಷ್ಮೀನರಸಿಂಹಸ್ವಾಮಿ ಜಾತ್ರಾ ಮಹೋತ್ಸವದ ಹಿನ್ನಲೆಯಲ್ಲಿ ಪಟ್ಟಣದ ತಾಲ್ಲೂಕು ಕಚೇರಿಯಲ್ಲಿ ಸೋಮವಾರ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಪಾಸ್ ವ್ಯವಸ್ಥೆ ಮಾಡದೇ ಎಲ್ಲರೂ ಸರದಿಯಲ್ಲಿ ತೆರಳಿ ಪೂಜೆ ಸಲ್ಲಿಸಲು ಅವಕಾಶ ನೀಡಿ ಎಂದ ಅವರು, ಈಗಾಗಲೇ ಜಾತ್ರಾ ಮಹೋತ್ಸವದ ಪತ್ರಿಕೆಯಲ್ಲಿ ಪೂಜಾ ಕೈಂಕರ್ಯಕ್ಕೆ ಹೆಸರು ನೋಂದಾಯಿಸಿರುವ ವ್ಯಕ್ತಿಗಳು ಆ ದಿನಗಳಲ್ಲಿ ಪೂಜಾ ಮಾಡಿಸಲು ಅಡ್ಡಿಪಡಿಸದಂತೆ ಸಲಹೆ ನೀಡಿದರು.

ಕಾಂಗ್ರೆಸ್ ಕಾರ್ಯಕರ್ತರು ಮಾತನಾಡಿ, ಚುನಾವಣೆ ನೀತಿ ಸಂಹಿತೆ ಜಾರಿಯಾಗುವ ಕಾರಣದಿಂದ ಜಾತ್ರೆಯ ದಿನದಂದು ರಥದಲ್ಲಿ ಪೂಜೆ ಸಲ್ಲಿಸಲು ರಾಜಕಾರಣಿಗಳಿಗೆ ಅವಕಾಶ ನೀಡಬೇಡಿ. ಆ ರೀತಿ ಅವಕಾಶ ನೀಡುವುದಾದರೇ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಶ್ರೇಯಸ್ ಪಟೇಲರಿಗೂ ಅವಕಾಶ ನೀಡಬೇಕು. ತಪ್ಪಿದ್ದಲ್ಲಿ ಗಲಾಟೆಯಾಗುತ್ತದೆ ಎಂದು ಎಚ್ಚರಿಸಿದರು.

ತಹಶೀಲ್ದಾರ್ ಪಿ.ಸಿ.ಪ್ರವೀಣ್ ಕುಮಾರ್ ಮಾತನಾಡಿ, ಚುನಾವಣೆ ನೀತಿ ಸಂಹಿತೆ ಜಾರಿಯಾದಲ್ಲಿ ಸರ್ಕಾರದ ಮಾರ್ಗಸೂಚಿಯ ಅನುಸಾರ ಜಾತ್ರಾ ಮಹೋತ್ಸವ ಜರುಗಲಿದೆ. ಯಾವುದೇ ರೀತಿಯ ಅಹಿತಕರ ಘಟನೆಗಳಿಗೆ ಅವಕಾಶ ಆಗದಂತೆ ಸಹಕಾರ ನೀಡುವಂತೆ ತಿಳಿಸಿದರು.

ತಾಲ್ಲೂಕು ಪಂಚಾಯಿತಿ ಇಒ ಕುಸುಮಾಧರ್, ಲಕ್ಷ್ಮೀನರಸಿಂಹಸ್ವಾಮಿ ದೇವಾಲಯದ ಹಿರಿಯ ಅರ್ಚಕ ನಾರಾಯಣ ಭಟ್ಟ, ಪುರಸಭೆ ಮುಖ್ಯಾಧಿಕಾರಿ ಮಹೇಂದ್ರ, ವಿವಿಧ ಇಲಾಖೆಗಳ ಅಧಿಕಾರಿಗಳು, ಪುರಸಭೆ ಮಾಜಿ ಅಧ್ಯಕ್ಷ ಎಚ್.ವಿ. ಪುಟ್ಟರಾಜು, ಕಾಂಗ್ರೆಸ್ ಮುಖಂಡ ಬಾಗಿವಾಳು ಮಂಜೇಗೌಡ, ಸಮಾಜ ಸೇವಕ ಶಂಕರನಾರಾಯಣ ಐತಾಳ್, ಪುರಸಭೆ ಮಾಜಿ ಸದಸ್ಯ ಓಲೆಕುಮಾರ, ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT