ಸಕಲೇಶಪುರ: ತಾಲ್ಲೂಕಿನ ಕೆಸಗುಲಿ ಗ್ರಾಮದಲ್ಲಿ ಕಾಡಾನೆಗಳ ದಾಳಿಯಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಬೆಳೆ ಹಾಗೂ ಆಸ್ತಿಪಾಸ್ತಿ ಹಾನಿ ಆಗಿದೆ.
ಬೇಲೂರು ತಾಲ್ಲೂಕಿನ ಲಕ್ಕುಂದ ಗ್ರಾಮದ ಕಾಫಿ ತೋಟವೊಂದರಲ್ಲಿ ವ್ಯಕ್ತಿಯೊಬ್ಬನನ್ನು ಕೊಂದು ಹಾಕಿದ ಆನೆಯ ಗುಂಪು ಭಾನುವಾರ ರಾತ್ರಿಯಿಂದ ಸೋಮವಾರ ಬೆಳಿಗ್ಗೆವರೆಗೆ ತಾಲ್ಲೂಕಿನ ಕಾಫಿ, ಬಾಳೆ, ಅಡಿಕೆ ತೋಟಗಳಲ್ಲಿ ದಾಂದಲೆ ನಡೆಸಿವೆ.
ಕೆಸಗುಲಿ ಗ್ರಾಮದ ರೈತ ಮೈಕಲ್ ಪಿಂಟೋ, ಕೆಂಚೇಗೌಡ, ಉದೇವಾರ ಎಸ್ಟೇಟ್, ಕೆಸಗುಲಿ ಎಸ್ಟೇಟ್, ದರ್ಬಾರ್ ಪೇಟೆ ಗ್ರಾಮಗಳಲ್ಲಿಯೂ ಸಹ ಮರಿಯೂ ಸೇರಿದಂತೆ ಆರು ಆನೆಗಳು ಬೀಡು ಬಿಟ್ಟಿವೆ.
ಮೈಕಲ್ ಅವರ ತೋಟದಲ್ಲಿ ಸುಮಾರು 50ಕ್ಕೂ ಹೆಚ್ಚು ಕಾಫಿ ಗಿಡಗಳು, 200ಕ್ಕೂ ಹೆಚ್ಚು ಬಾಳೆ ಗಿಡಗಳು, ತೋಟಕ್ಕೆ ನೀರು ಹಾಯಿಸುವ ಪೈಪ್ಗಳು ಹಾಗೂ ಡ್ರಮ್ಗಳನ್ನು ತುಳಿದು ನಾಶ ಮಾಡಿವೆ.
ಕೆಂಚೇಗೌಡರ ತೋಟದಲ್ಲಿ 150ಕ್ಕೂ ಹೆಚ್ಚು ಕಾಫಿ, ಬಾಳೆ ಹಾಗೂ ನೀರು ಹಾಯಿಸುವ ಪೈಪ್ಲೈನ್ ತುಳಿದು ಹಾನಿ ಮಾಡಿದ್ದು, ಕೆಸಗುಲಿ ಗ್ರಾಮದಲ್ಲಿ ಸುಮಾರು ₹ 5 ಲಕ್ಷಕ್ಕೂ ಹೆಚ್ಚು ಮೌಲ್ಯದ ಬೆಳೆ ಹಾಗೂ ಆಸ್ತಿಪಾಸ್ತಿ ಹಾನಿ ಮಾಡಿವೆ.
ಬಣಾಲು ಗ್ರಾಮದಲ್ಲೂ ದಾಂದಲೆ: ದೇವಾಲದಕೆರೆ ಸಮೀಪದ ಬಣಾಲು ಗ್ರಾಮದ ರೈತ ದಿನೇಶ್ ಅವರ ಕಾಫಿ ತೋಟಕ್ಕೆ ಮೂರು ಕಾಡಾನೆಗಳು ನುಗ್ಗಿ ಸುಮಾರು 50ಕ್ಕೂ ಹೆಚ್ಚು ಕಾಫಿ ಗಿಡಗಳು, ಕಾಳು ಮೆಣಸು ಬಳ್ಳಿಗಳು, ಬೈನೆ ಮರಗಳನ್ನು ನಾಶ ಮಾಡಿವೆ.