ಬೇಲೂರು: ತಾಲ್ಲೂಕಿನ ಅರೇಹಳ್ಳಿ ಹೋಬಳಿ ಅನುಘಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಣಗುಪ್ಪೆ, ಅನುಘಟ್ಟ, ಲಕ್ಷ್ಮೀಪುರ ಹಾಗೂ ಹಿರೇಹಸಡೆ, ಚಿಕ್ಕಹಸೆಡೆ ಗ್ರಾಮದಲ್ಲಿ ಸೋಮವಾರ ಬೆಳಿಗ್ಗೆ ಕಾಡಾನೆಯೊಂದು ಸಂಚರಿಸಿ ಆತಂಕ ಸೃಷ್ಟಿಸಿತು.
ಕಣಗುಪ್ಪೆ ಗ್ರಾಮದ ಮುಖ್ಯರಸ್ತೆಯಲ್ಲೇ ಆನೆ ವಾಕಿಂಗ್ ಮಾಡಿತು. ಈ ಭಾಗದಲ್ಲಿ ಕಳೆದ ಕೆಲವು ದಿನಗಳಿಂದ ಕಾಡಾನೆ ಹಾವಳಿ ಕಂಡುಬಂದಿದ್ದು, ಗ್ರಾಮಸ್ಥರು ರಾತ್ರಿ ಹಾಗೂ ಹಗಲು ಓಡಾಡಲು ಆತಂಕಪಡುವಂತಾಗಿದೆ. ನಾಲ್ಕೈದು ಕಾಡಾನೆಗಳಿರುವ ಒಂದು ಹಿಂಡು ಈ ಭಾಗಕ್ಕೆ ಬಂದಿದೆ. ಅದರಲ್ಲಿ ಒಂದು ಕಾಡಾನೆ ತಪ್ಪಿಸಿಕೊಂಡು ಗ್ರಾಮದತ್ತ ಬಂದಿದ್ದು, ಭಯ ಸೃಷ್ಟಿಸುತ್ತಿದೆ.
ಬೆಳಿಗ್ಗೆಯೇ ಕಾಫಿ ತೋಟಕ್ಕೆ ಕಾರ್ಮಿಕರು ಕೆಲಸಕ್ಕೆ ತೆರಳುತ್ತಾರೆ. ಮಕ್ಕಳು ಶಾಲೆಗೆ ತೆರಳುತ್ತಿರುತ್ತಾರೆ. ಕಾಡಾನೆಗಳನ್ನು ಕಾಡಿಗೆ ಅಟ್ಟಬೇಕು. ಇಲ್ಲವೇ ಕಾರ್ಯಾಚರಣೆ ನಡೆಸಿ ಸೆರೆ ಹಿಡಿಯಬೇಕು ಎಂದು ಲಕ್ಷ್ಮಿಪುರ ಹಾಗೂ ಕಣಗುಪ್ಪೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.