ಕಳೆದ ವಾರ ನೋಂದಣಿ ಮಾಡಿದ್ದನ್ನು ಸರ್ಕಾರ ರದ್ದು ಪಡಿಸಿ, ಹೊಸದಾಗಿ ಇಂದಿನಿಂದ ಹೆಸರು ನೋಂದಾಯಿಸಿ ಕೊಳ್ಳುವುದಾಗಿ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಎಸ್ ಪಾಟಿಲ್ ಮಂಗಳವಾರ ವಿಧಾನ ಪರಿಷತ್ನಲ್ಲಿ ಹೇಳಿದ್ದರು. ಈ ಸುದ್ದಿಯಿಂದ ಇಂದಿನಿಂದ ನೋಂದಣಿ ಪ್ರಾರಂಭವಾಗುತ್ತದೆ ಎಂದು ತಿಳಿದು, ಬೆಳಗ್ಗೆ 6 ಗಂಟೆಗೆ ಇಲ್ಲಿನ ಕೃಷಿ ಪತ್ತಿನ ಸಹಕಾರ ಸಂಘದ ಬಳಿ ವೃದ್ಧರು, ಮಹಿಳೆಯರ ಸೇರಿದಂತೆ ನೂರಾರು ಜನರು ಸರತಿಯಲ್ಲಿ ಗಂಟೆಗಟ್ಟೆಲೆ ಕಾದು ಕುಳಿತಿದ್ದರು. 9 ಗಂಟೆಯಾದರೂ ನಾಫೆಡ್ನ ಅಧಿಕಾರಿಗಳು ಬರಲಿಲ್ಲ, ಬುಧವಾರ ನೋಂದಣಿ ಇಲ್ಲ ಎಂದು ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳದ ನಿರ್ದೇಶಕ ಸಿ.ಎನ್. ಪುಟ್ಟಸ್ವಾಮಿಗೌಡ, ಶಾಸಕ ಸಿ.ಎನ್. ಬಾಲಕೃಷ್ಣ ಮತ್ತು ವಿಧಾನ ಪರಿಷತ್ ಮಾಜಿ ಸದಸ್ಯ ಎಂ.ಎ. ಗೋಪಾಲಸ್ವಾಮಿ ಅವರು ಸ್ಥಳೀಯರ ಮೂಲಕ ರೈತರಿಗೆ ತಿಳಿಸಿದಾಗ, ಬೇಸರದಿಂದ ರೈತರು ಹಿಂದಿರುಗಿದರು. ಮಧ್ಯಾಹ್ನದವರೆಗೆ ರೈತರು ಕೃಷಿ ಪತ್ತಿನ ಸಹಕಾರ ಸಂಘದ ಬಳಿಗೆ ಬಂದು ಮಾಹಿತಿ ಕೇಳುತ್ತಿದ್ದರು.