ಹಾಸನ: ಶಾಸಕರು, ಸಚಿವರು ರಾಜೀನಾಮೆ ನೀಡಿರುವ ಹಿನ್ನಲೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ಶೀಘ್ರ ಪತನವಾಗುವುದು ನಿಶ್ಚಿತ ಎಂದು ಬಿಜೆಪಿ ಮುಖಂಡ ಎ.ಮಂಜು ಹೇಳಿದರು.
ಸಮ್ಮಿಶ್ರ ಸರ್ಕಾರದ ಬಗ್ಗೆ ನಾಡಿನ ಜನರು ಬೇಸರಗೊಂಡಿದ್ದು, ಜನಪರ ಸರ್ಕಾರ ಬರಬೇಕು ಎಂದು ಬಯಸಿದ್ದಾರೆ. ಜನರ ಅಪೇಕ್ಷೆಯಂತೆ ಶೀಘ್ರವೇ ಅಭಿವೃದ್ಧಿ ಪರವಾದ ಬಿಜೆಪಿ ಸರ್ಕಾರದ ಅಸ್ತಿತ್ವಕ್ಕೆ ಬರುವುದು ನಿಶ್ಚಿತ. ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿ ಆಗಲಿದ್ದಾರೆ’ ಎಂದು ಸುದ್ದಿಗೋಷ್ಠಿಯಲ್ಲಿ ಪರೋಕ್ಷವಾಗಿ ಹೇಳಿದರು.
ಉಸ್ತುವಾರಿ ಸಚಿವ ಎಚ್.ಡಿ.ರೇವಣ್ಣ ವಿರುದ್ಧ ವಾಗ್ದಾಳಿ ನಡೆಸಿದ ಮಂಜು, ‘ರೇವಣ್ಣ ಎಲ್ಲಾ ಇಲಾಖೆಗಳಲ್ಲೂ ಮಾಡುತ್ತಿರುವ ಅತಿಯಾದ ಹಸ್ತಕ್ಷೇಪ ಮತ್ತು ಮಿತಿ ಮೀರಿದ ಭ್ರಷ್ಟಾಚಾರವೂ ಸಮ್ಮಿಶ್ರ ಸರ್ಕಾರ ಅಧಿಕಾರ ಕಳೆದುಕೊಳ್ಳಲು ಕಾರಣ’ ಎಂದು ವಿಶ್ಲೇಷಿಸಿದರು.
‘ರಾಜ್ಯ ಸರ್ಕಾರ ಸಂಕಷ್ಟದಲ್ಲಿದ್ದರೂ, ಇದಾವುದಕ್ಕೂ ತಲೆ ಕೆಡಿಸಿಕೊಳ್ಳದ ರೇವಣ್ಣ, ಲೋಕೋಪಯೋಗಿ ಇಲಾಖೆಯಲ್ಲಿ ವರ್ಗಾವಣೆ ದಂಧೆಯಲ್ಲಿ ತೊಡಗಿದ್ದಾರೆ. ಸುಪ್ರೀಂಕೋರ್ಟ್ ನ ಎಲ್ಲಾ ಆದೇಶಗಳನ್ನು ಗಾಳಿಗೆ ತೂರಿ ಸುಮಾರು 800 ಭ್ರಷ್ಟ ಎಂಜಿನಿಯರ್ಗಳಿಗೆ ಬಡ್ತಿ ನೀಡಿ ವರ್ಗಾವಣೆ ಮಾಡಿದ್ದಾರೆ. ರಾಜ್ಯಪಾಲರು ಕೂಡಲೇ ಮಧ್ಯೆ ಪ್ರವೇಶಿಸಿ ನಿಯಮ ಮೀರಿ ಮಾಡಿರುವ ವರ್ಗಾವಣೆಗೆ ತಡೆ ನೀಡಬೇಕು’ ಎಂದು ಒತ್ತಾಯಿಸಿದರು.
‘ಜಿಲ್ಲೆಯಲ್ಲಿ ಅಭಿವೃದ್ಧಿ ಹೆಸರಿನಲ್ಲಿ ತನ್ನ ಹಾಗೂ ತನ್ನ ಕಡೆಯವರ ಆಸ್ತಿಯನ್ನು ರಕ್ಷಣೆ ಮಾಡುವ ಮೂಲಕ ಬೇರೆಯವರ ಮೇಲೆ ದಮನ ಕಾರಿ ಪ್ರವೃತ್ತಿ ಅನುಸರಿಸುತ್ತಿದ್ದಾರೆ’ ಎಂದು ಕಿಡಿ ಕಾರಿದರು.
ಕೆಎಂಎಫ್ನಲ್ಲಿ ಭ್ರಷ್ಟಾಚಾರ
ರಾಜ್ಯ ಹಾಗೂ ಹಾಸನ ಕೆ.ಎಂ.ಎಫ್.ನಲ್ಲಿ ಭಾರೀ ಭ್ರಷ್ಟಾಚಾರ ನಡೆಯುತ್ತಿದೆ. ಇದು ಜಿಲ್ಲೆಯ ರೈತರಿಗೆ ಮಾರಕವಾಗಿದೆ ಎಂದರು.
ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲಿ ಒಂದು ಲೀಟರ್ ಹಾಲಿಗೆ ₹ 25 ರ ವರೆಗೂ ಬೆಲೆ ನೀಡಲಾಗುತ್ತಿದೆ. ಆದರೆ, ಹಾಸನದಲ್ಲಿ ಕೇವಲ ₹ 23 ನೀಡುತ್ತಿದ್ದಾರೆ. ಹಾಸನ ಹಾಲು ಒಕ್ಕೂಟ ಒಂದರಿಂದಲೇ ದಿನವಹಿ 10 ಲಕ್ಷ ಲೀಟರ್ ಹಾಲು ಸಂಗ್ರಹವಾಗುತ್ತಿದೆ. ಹೀಗಾಗಿ ಹಾಲು ಉತ್ಪಾದಕರಿಗೆ ಕೋಟಿ ಕೋಟಿ ನಷ್ಟವಾಗಿ ಹಣ ಗುಳುಂ ಮಾಡಲಾಗುತ್ತಿದೆ’ ಎಂದು ಆರೋಪಿಸಿದರು.
‘ರೇವಣ್ಣ ಅವರ ಅತಿಯಾದ ವ್ಯಾಮೋಹವೂ ಸರ್ಕಾರದ ಅಭದ್ರತೆಗೆ ಮತ್ತೊಂದು ಕಾರಣ. ರೇವಣ್ಣ ಮಂತ್ರಿಯಾಗಿದ್ದರೂ, ಹಳೇ ಚಾಳಿ ಬಿಟ್ಟಿಲ್ಲ. ಅವರೀಗ ಬರೀ ಮಿನಿಸ್ಟರ್ ಅಲ್ಲ. ಟ್ರಾನ್ಸ್ ಫರ್ ಮಿನಿಸ್ಟರ್’ ಎಂದು ವ್ಯಂಗ್ಯವಾಡಿದರು.
‘ಹಾಸನ ಹಾಲು ಒಕ್ಕೂಟ ಮತ್ತು ಜಿಲ್ಲಾ ಸಹಕಾರಿ ಬ್ಯಾಂಕ್ ಈಎರಡು ತಮ್ಮ ಆಸ್ತಿ ಎಂಬಂತೆ ದೇವೇಗೌಡ ಮತ್ತು ರೇವಣ್ಣ ಕುಟುಂಬ ವರ್ತಿಸುತ್ತಿದೆ. ಇಲ್ಲಿ ಸಾಕಷ್ಟು ಭ್ರಷ್ಟಾಚಾರ ನಡೆಯುತ್ತಿದ್ದು, ಬಡ ರೈತರಿಗೆ ಅನ್ಯಾಯವಾಗುತ್ತಿದೆ. ಎಚ್ಡಿಸಿಸಿ ಬ್ಯಾಂಕ್ನಲ್ಲಿ ಗೌಡರ ಕುಟುಂಬಸ್ಥರು, ಸಂಬಂಧಿಕರಿಗೆ ಮಾತ್ರ ಸಾಲ ನೀಡಲಾಗುತ್ತಿದೆ. ಆದರೆ, ಅರ್ಹ ಫಲಾನುಭವಿಗಳಿಗೆ ಈ ಯೋಜನೆಗಳು ದೊರೆಯುತ್ತಿಲ್ಲ’ ಎಂದು ಆರೋಪಿಸಿದರು.
ಗೋಷ್ಠಿಯಲ್ಲಿ ಮುಖಂಡರಾದ ನಾರಾಯಣಗೌಡ, ಗವಿ ರಂಗೇಗೌಡ ಇದ್ದರು.
ಯಡಿಯೂರಪ್ಪ ಭವಿಷ್ಯ ನಿಜ
‘ಹಿಂದೊಮ್ಮೆ ಬಿ.ಎಸ್.ಯಡಿಯೂರಪ್ಪ ವಿಧಾನಸಭೆಯಲ್ಲೇ ಸಿದ್ದರಾಮಯ್ಯ-ಡಿ.ಕೆ.ಶಿವಕುಮಾರ್ ಅವರಿಗೆ ನೇರವಾಗಿಯೇ ಎಚ್ಚರಿಕೆ ನೀಡಿದ್ದರು. ಅಪ್ಪ-ಮಕ್ಕಳ ಜೊತೆ ಹೋದರೆ ಬೀದಿಗೆ ಬೀಳುವುದು ನಿಶ್ಚಿತ ಎಂದಿದ್ದರು. ಅದರಂತೆ ಶಿವಕುಮಾರ್ ಮೊನ್ನೆ ಮುಂಬೈಯಲ್ಲಿ ಬೀದಿಗೆ ಬಿದ್ದಿದ್ದು ಸಾಕ್ಷಿ’ ಎಂದು ಮಂಜು ಉದಾಹರಿಸಿದರು.
‘ಜೆಡಿಎಸ್ ಜೊತೆ ಮೈತ್ರಿ ಮುಂದುವರಿಸಿದರೆ, ಯಾವುದೇ ಕಾರಣಕ್ಕೂ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಉಳಿಯಲ್ಲ ಎಂದು ಮೊದಲೇ ಸಿದ್ದರಾಮಯ್ಯ ಅವರಿಗೆ ಹೇಳಿ ಪಕ್ಷದಿಂದ ಹೊರ ಬಂದಿದ್ದೆ. ಜೆಡಿಎಸ್ ಜೊತೆಗಿನ ಮೈತ್ರಿಯಿಂದಾಗಿಯೇ ಕಾಂಗ್ರೆಸ್ ಪಕ್ಷ ಲೋಕಸಭೆ ಚುನಾವಣೆಯಲ್ಲಿ ಹೀನಾಯ ಸಾಧನೆ ಮಾಡಿದೆ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.