ಸತತ ಮಳೆ: ಬೆಳೆಗಳಿಗೆ ತೊಂದರೆ

ಅರಕಲಗೂಡು: ಕಳೆದ ಒಂದು ವಾರದಿಂದ ಸತತವಾಗಿ ಬೀಳುತ್ತಿರುವ ಮಳೆಯಿಂದಾಗಿ ಕೃಷಿ ಚಟುವಟಿಕೆಗೆ ತೀವ್ರ ಹಿನ್ನೆಡೆಯಾಗಿದೆ.
ಶುಂಠಿ ಬೆಳೆಗೆ ಕೊಳೆ ರೋಗ ಕಾಣಿಸಿಕೊಂಡಿದ್ದರೆ, ಮುಸುಕಿನ ಜೋಳದ ಬೆಳೆಯ ಕಟಾವಿಗೆ ತೊಂದರೆಯಾಗಿದೆ. ಪ್ರಮುಖ ವಾಣಿಜ್ಯ ಬೆಳೆಯಾದ ಮುಸುಕಿನ ಜೋಳವನ್ನು ತಾಲ್ಲೂಕಿನಲ್ಲಿ ಈ ಬಾರಿ 11,800 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗಿದೆ.
ಬಹಳಷ್ಟು ರೈತರು ಆಲೂಗಡ್ಡೆ, ತಂಬಾಕು ಬೆಳೆ ಬಿಟ್ಟು ಮುಸುಕಿನ ಜೋಳ ಬೆಳೆದಿದ್ದರು. ಹೀಗಾಗಿ ಬೆಳೆ ಪ್ರದೇಶದ ವಿಸ್ತೀರ್ಣದಲ್ಲೂ ಹೆಚ್ಚಳವಾಗಿತ್ತು. ಉತ್ತಮವಾಗಿ ಫಸಲು ಬಂದಿತ್ತು. ಆಗಸ್ಟ್ ತಿಂಗಳಿನಲ್ಲಿ ಬಿದ್ದ ಬಾರಿ ಮಳೆಗೆ 650 ಹೆಕ್ಟೇರ್ನಷ್ಟು ಮುಸುಕಿನ ಜೋಳದ ಬೆಳೆಗೆ ಹಾನಿಯಾಗಿತ್ತು. ಈಗ ಬೆಳೆಯ ಕಟಾವಿನ ಹಂತದಲ್ಲಿ ಬೀಳುತ್ತಿರುವ ಮಳೆ ರೈತರನ್ನು ಮತ್ತಷ್ಟು ಚಿಂತೆಗೆ ದೂಡಿದೆ.
‘ಬೆಳೆ ನೀರು ಕುಡಿದು ಹಾಳಾಗುವ ಅಪಾಯ ಎದುರಾಗಿದೆ. ಮಳೆ ನಿಂತು ಒಂದು ವಾರ ಸತತವಾಗಿ ಬಿಸಿಲು ಬಂದಲ್ಲಿ ಜೋಳದ ಕಟಾವಿಗೆ ಅನುಕೂಲವಾಗಲಿದೆ. ಇಲ್ಲದೆ ಇದೇ ರೀತಿ ಮಳೆ ಮುಂದುವರಿದಲ್ಲಿ ಬೆಳೆ ಹಾಳಾಗಿ ಕೈಗೆ ಬಂದ ತುತ್ತು ಬಾಯಿಗೆ ಇಲ್ಲ ಎಂಬ ಸ್ಥಿತಿ ಉಂಟಾಗಲಿದೆ’ ಎಂದು ರೈತರು ಅಳಲು ತೋಡಿಕೊಳ್ಳುತ್ತಿದ್ದಾರೆ.
ಕಳೆದ ವರ್ಷ ಶುಂಠಿ ಬೆಳೆಗೆ ಉತ್ತಮ ಬೆಲೆ ದೊರಕಿದ ಹಿನ್ನೆಲೆಯಲ್ಲಿ ಈ ಬಾರಿ ಶುಂಠಿ ಬೆಳೆಯುವವರ ಸಂಖ್ಯೆ ಹೆಚ್ಚಿತ್ತು. ಪ್ರತಿವರ್ಷ 600 ರಿಂದ 800 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗುತ್ತಿದ್ದ ಶುಂಠಿ ಬೆಳೆಯನ್ನು ಈ ಬಾರಿ 2,200 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿದೆ. ನಿರಂತರವಾಗಿ ಬೀಳುತ್ತಿರುವ ಮಳೆ ಮತ್ತು ಶೀತದ ವಾತಾವರಣದಿಂದ ಶುಂಠಿ ತಾಕುಗಳಲ್ಲಿ ನೀರು ನಿಂತು ಕೊಳೆ ರೋಗ ಕಾಣಿಸಿಕೊಳ್ಳುತ್ತಿದೆ. ಈ ಮಧ್ಯೆ ಬೆಲೆಯೂ ತೀವ್ರವಾಗಿ ಕುಸಿದಿದ್ದು ರೈತರನ್ನು ಆತಂಕಕ್ಕೆ ತಳ್ಳಿದೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.